ಬೆಂಗಳೂರು
ಬಿಜೆಪಿಯ ನಾಯಕರು ಸಮಾನ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ ಸೇರಿದಂತೆ ಇತರೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮೊದಲು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಜನಪರವಾದ ಯಾವುದೇ ಯೋಜನೆಗಳನ್ನಾಗಲಿ, ಅಭಿವೃದ್ಧಿ ಕಾರ್ಯಗಳನ್ನಾಗಲಿ ಮಾಡಿಲ್ಲ.
ಸರ್ಕಾರಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಐಟಿ ದಾಳಿ ಮಾಡಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದು, ಬಿಜೆಪಿಯವರು ಸತ್ಯ ಹರಿಶ್ಚಂದ್ರರು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.ಬಿಜೆಪಿಯವರು ರಾಮನ ಜಪ ಮಾಡುತ್ತಿದ್ದಾರೆ. ರಾಮಾಯಣದ ಅಯೋಧ್ಯಾಖಾಂಡದಲ್ಲಿ ರಾಜ್ಯದ ಆರ್ಥಿಕ, ಸಾಮಾಜಿಕ, ಗಣಿ ಸಂಪತ್ತು ಬಳಕೆ, ಬೇಹುಗಾರಿಕೆ ಹೇಗಿರಬೇಕು.
ಮಂತ್ರಿಮಂಡಲ ಹೇಗಿರಬೇಕು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಭರತ ಕಾಡಿಗೆ ಬಂದಾಗ ರಾಮ ಉಪದೇಶ ಮಾಡುತ್ತಾನೆ. ಅದು ಮೋದಿ ಸರ್ಕಾರಕ್ಕೂ ಅನ್ವಯ ಆಗುತ್ತದೆ. ಆ ಬಗ್ಗೆ ಮೋದಿಯವರಿಗೆ ಅರಿವು ಇದ್ದಿದ್ದರೆ, ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರಲಿಲ್ಲ. 2020ರಲ್ಲಿ ದೇಶದ ಜಿಡಿಪಿ ಶೇ.6 ರಷ್ಟು ಕುಸಿಯುತ್ತಿದ್ದು, ಈ ಮೂಲಕ ದೇಶದಲ್ಲಿ ಬಡತನ ಉಲ್ಭಣಿಸಲು ಕೇಂದ್ರ ಸರ್ಕಾರವೇ ಕಾರಣವಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಐಟಿ ದಾಳಿ ಮಾಡುವ ಮೂಲಕ ಕಾಂಗ್ರೆಸ್ಸಿಗರ ಮೇಲೆ ಮಾನಸಿಕ ಹಿಂಸೆ ಕ್ರೌರ್ಯ ಎಸಗುತ್ತಿದೆ. ತಮ್ಮ ನಾಯಕರುಗಳನ್ನು ಮೆಚ್ಚಿಸಲು ಐಟಿ ಅಧಿಕಾರಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಐಟಿಯವರು ಮನುಷ್ಯತ್ವವನ್ನೆ ಮರೆತು ಕೆಲಸ ಮಾಡುತ್ತಿದ್ದಾರೆ. ರಮೇಶ್ ಆತ್ಮಹತ್ಯೆ ಮಾಡಿಕೊಳ್ಳಲು ಐಟಿಅಧಿಕಾರಿಗಳೇ ಕಾರಣರಾಗಿದ್ದಾರೆ. ಐಟಿ ಅಧಿಕಾರಿಗಳು ತಾವು ಅವರ ಮನೆಗೆ ಹೋಗಿಲ್ಲಾ ವಿಚಾರಣೆ ಮಾಡಿಲ್ಲ ಎಂದು ಸುಳ್ಳು ಹೇಳುತ್ತಾರೆ. ರಮೇಶ್ ಸಾಯುವ ಮುನ್ನ ಬರೆದಿರುವ ಪತ್ರವನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ರೈಲ್ವೆ ಅಪಘಾತ ಕಾರಣಕ್ಕಾಗಿ ಕೇಂದ್ರದ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರು ಶಾಸ್ತ್ರಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರು.ರಮೇಶ್ ಸಾವಿನ ಹೊಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೈತಿಕ ಹೊಣೆ ಹೊರಬೇಕು. ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರಮೇಶ್ ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಬೇಕು. ಕುಟುಂಬಕ್ಕೆ ಆದಾಯ ತೆರಿಗೆ ಲಾಖೆ. 1 ಕೋಟಿ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗಳ ಇಬ್ಬಾಗ ಕುರಿತು ಪ್ರತಿಕ್ರಿಯಿಸಿದ ಉಗ್ರಪ್ಪ, ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಬೇಕೋ ಆಂಧ್ರಪ್ರದೇಶಕ್ಕೆ ಸೇರಬೇಕೋ ಎನ್ನುವ ಬಗ್ಗೆ ಮೊದಲು ಜನಾಭಿಪ್ರಾಯ ಸಂಗ್ರಹಿಸಿಲಾಯಿತಿ. ಅದರಂತೆ ಕರ್ನಾಟಕಕ್ಕೆ ಬಳ್ಳಾರಿಯನ್ನು ಸೇರಿಸಲಾಯಿತು.ಯಾವುದೆ ಜಿಲ್ಲೆ ರಚನೆ ಮಾಡಬೇಕಾದರೂ ಜನಾಭಿಪ್ರಾಯ ಪಡೆಯಬೇಕು. ಚುನಾವಣೆ ದೃಷ್ಟಿಯಿಂದ ಈ ರೀತಿಯ ಪ್ರಸ್ತಾಪ ಮಾಡಲಾಗುತ್ತಿದೆ ಎಂದರು.
ಚುನಾವಣಾ ಆಯೋಗ ನಿರ್ಜೀವ ಆಗಿದೆ.
ಚುನಾವಣೆ ಘೋಷಣೆ ಆಗಿರುವ ಜಿಲ್ಲೆಗಳಿಗೆ. ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಆ ಕ್ಷೇತ್ರಗಳಿಗೆ ಸಂಬಂಧಿಸಿದವರನ್ನು ನಿಗಮ ಮಂಡಲಿಗಳಿಗೆ ನೇಮಕ ಮಾಡಲಾಗುತ್ತಿದೆ. ಆಯೋಗ ಇದೆಲ್ಲವನ್ನು ನೋಡಿಕೊಂಡು ಕುಳಿತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಈ ಹಿಂದಿನ ಚುನಾವಣಾ ವೇಳಾಪಟ್ಟಿ ಪ್ರಕಾರ ನಾಮಪತ್ರ ಸಲ್ಲಿಸಿದವರ ನಾಮಪತ್ರಗಳು ಊರ್ಜಿತ ಎಂದು ಪರಿಗಣಿ ಸಲಾಗುವುದು ಎಂದು ಆಯೋಗ ಹೇಳಿದೆ. ಆದರೆ ಅವರು ಈವರೆಗೆ ಖರ್ಚು ಮಾಡಿರುವ ಹಣವನ್ನು ಚುನಾವಣೆ ವೆಚ್ಚಕ್ಕೆ ಸೇರಿಸುತ್ತಾರಾ? ವಿಶ್ವನಾಥ್ ಅವರು ಸಚಿವರಾಗಿ, ಆಡಳಿತ ಪಕ್ಧ ರಾಜ್ಯಧ್ಯಕ್ಷರಾಗಿದ್ದರು. ಇಷ್ಟು ದಿನ ಹುಣಸೂರು ಜಿಲ್ಲೆ ಮಾಡುವ ಬಗ್ಗೆ ಅವರಿಗೆ ನೆನಪಾಗಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನರು ತಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಗೊತ್ತಾಗಿ ಈಗ ಈ ರೀತಿ ನಡೆದುಕೊಳ್ಳುವುದು ಖಂಡನೀಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/V-S-Ugrappa-DH-1569323967.gif)