ಹತಾಶೆಯಿಂದ ರೈತರನ್ನು ಎತ್ತಿಕಟ್ಟುತ್ತಿರುವ ಬಿಜೆಪಿ

ದಾವಣಗೆರೆ:

        ಬಿಜೆಪಿ ನಾಯಕರಿಗೆ ಅಧಿಕಾರ ಕೈ ತಪ್ಪಿರುವ ಹತಾಶೆಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ, ರೈತರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ.

        ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 20 ತರಕಾರಿ ಮಳಿಗೆಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿದ್ದು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಹ ಸರ್ಕಾರದ ನಿರ್ಧಾರವನ್ನು ಒಪ್ಪುವುದರ ಜೊತೆಗೆ ಕಬ್ಬು ಬೆಳೆಗಾರರ ಬಾಕಿ ನೀಡಲು ಸಹ ಸಮ್ಮತಿಸಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡಿರುವ ಬಿಜೆಪಿ ನಾಯಕರು ಹತಾಶೆಯಿಂದ ರೈತರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

         ನನ್ನದು ಸಕ್ಕರೆ ಕಾರ್ಖಾನೆಯೂ ಇಲ್ಲ, ಬಾಕಿಯೂ ಇಲ್ಲ ಹಾಗೂ ಕಬ್ಬು ಬೆಳೆಯುವವನೂ ಅಲ್ಲ. ನನ್ನ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ , ಎಸ್.ಎಸ್.ಬಕ್ಕೇಶ್ ಹಾಗೂ ಎಸ್.ಎಸ್. ಗಣೇಶ್ ಅವರ ಸಕ್ಕರೆ ಕಾರ್ಖಾನೆಗಳಿವೆ. ಇವರ್ಯಾರೂ ಸಹ ಕಬ್ಬು ಬೆಳೆಗಾರರ ಬಾಕಿ ಹಣ ಉಳಿಸಿಕೊಂಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

         ರಾಜ್ಯ ಸರ್ಕಾರವೇ ಎಂ ಸ್ಯಾಂಡ್‍ಗೆ ಪ್ರೋತ್ಸಾಹಿಸುತ್ತಿದ್ದು, ನಾವು ಸಹ ಇದಕ್ಕೆ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳುವಮೂಲಕ ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪನವರು ಮರಳಿನ ಕೃತಕ ಅಭಾವ ಸೃಷ್ಟಿಸಿ ಎಂ.ಸ್ಯಾಂಡ್‍ಗೆ ಪ್ರೋತ್ಸಾಹ ನೀಡುತ್ತಿದ್ದಾರೆಂದು ಮಾಡಿದ್ದ ಆರೋಪ್ಪಕ್ಕೆ ತಿರುಗೇಟು ನೀಡಿದರು.

        ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ಕೇಳಿ ಎಂಬುದಾಗಿ ತೀಕ್ಷಣ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಆದರೆ, ಬಿಜೆಪಿಯವರು ಚಿಕ್ಕ ಮಕ್ಕಳಂತೆ ಯುದ್ಧಕ್ಕೆ ತಯಾರಾಗುವಂತೆ ತಯಾರಾಗಿ ಸೋಲು ಅನುಭವಿಸುತ್ತಿದ್ದಾರೆ. ಇದಕ್ಕೆ ಉಪ ಚುನಾವಣೆಯ ಫಲಿತಾಂಶವೇ ನಿದರ್ಶನವಾಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರ ಸೇರಿದಂತೆ ಹಲವೆಡೆ ಬಿಜೆಪಿ ಸೋಲುಣ್ಣಲಿದೆ ಎಂದು ಹೇಳಿದರು.

        ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮ ಗೊಳಿಸಲಿದ್ದು, ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆಯೋ ನೋಡೋಣ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದರು.
ಅಧಿಕಾರದಲ್ಲಿರುವ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ಮಾಡುತ್ತಾರೆ. ಆದರೆ ಅದು ಗೊತ್ತಾಗುವುದಿಲ್ಲ. ಯಾವಾಗಲೋ ಒಂದು ಬಾರಿ ಗೊತ್ತಾಗುತ್ತದೆ ಅಷ್ಟೇ. ನಮ್ಮ ದೂರವಾಣಿ ಕರೆಯನ್ನು ಆದಾಯ ತೆರಿಗೆ ಇಲಾಖೆಯವರು ಕದ್ದು ಕೇಳಿಸಿಕೊಳ್ಳುತ್ತಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

         ಈ ಮಳಿಗೆಗಳ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ತರಕಾರಿ ದಲ್ಲಾಲರ ಸಂಘದ ಅಧ್ಯಕ್ಷ ಎಸ್.ಎನ್. ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಚಂದ್ರಪ್ಪ, ಎಂ. ಮಹದೇವಪ್ಪ, ಡಿ.ಟಿ. ನಾರಾಯಣಸ್ವಾಮಿ, ಕಾಳಿಂಗಪ್ಪ, ಎನ್.ಬಿ. ಅಜ್ಜಪ್ಪ, ಎನ್.ಕೆ. ನೀಲಪ್ಪ, ಎಂ. ಮಲ್ಲೇಶ್, ಶಂಕರ್, ಕೆ. ಆನಂದಪ್ಪ, ಎ.ಕೆ. ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link