ಮಧುಗಿರಿ
ದೇಶವನ್ನಾಳಿದ ದೊರೆಯ ಸ್ಪರ್ಧೆಯಿಂದ ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿಗಳ ಪರ ಬೆಟ್ಟಿಂಗ್ ಜೋರಾಗಿ ನಡೆದಿತ್ತು. ಆದರೂ ಸಹ ಮೋದಿಯ ಅಲೆಯ ವಿಜಯಮಾಲೆ ಜೊತೆಗೆ, ಕಾಂಗ್ರೆಸ್ನ ಅಹಿಂದ ಮತಗಳು ಭಾಜಪ ಪಕ್ಷದ ಪರ ನಿರ್ಣಾಯಕ ಪಾತ್ರ ವಹಿಸಿದ್ದರಿಂದ, ಜಿ.ಎಸ್. ಬಸವರಾಜು 5ನೇ ಬಾರಿ ಜಿಲ್ಲೆಯಿಂದ ಸಂಸತ್ಗೆ ಪ್ರವೇಶಿಸುವ ವಾತಾವರಣ ಸೃಷ್ಟಿಯಾಯಿತು.
ಈ ಫಲಿತಾಂಶ ದಿಂದಾಗಿ ಹಾಲಿ ಜೆಡಿಎಸ್ ಶಾಸಕರಿಗೆ ತೀವ್ರ ಮುಖ ಭಂಗವಾಗಿದೆ.ಗೆಲುವಿಗೆ ಕಾರಣಗಳು : ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಮುದ್ದಹನುಮೇಗೌಡ ರೆಬೆಲ್ ಆಗಿ ಪರಿಣಮಿಸಿ ದೇವೇಗೌಡರ ಸ್ಪರ್ಧೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ನ ಮತಗಳು ಬಿಜೆಪಿ ಕಡೆ ವಾಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯಾವುದೇ ಬಿಜೆಪಿ ಜನಪ್ರತಿನಿಧಿಗಳಿಲ್ಲದಿದ್ದರೂ ಕ್ಷೇತ್ರದ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಬಹುಮತ ಬಂದಿದೆ.
ಚುನಾವಣೆಯ ದಿನ ಜಿ.ಎಸ್. ಬಸವರಾಜು ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ್ದು, ಇನ್ನು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿದ್ದೂ ಕಾಂಗ್ರೆಸ್ ಮತಗಳು ಬಿಜೆಪಿ ಪರ ವಾಲಲು ಪ್ರಮುಖ ಕಾರಣ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಎ.ಕೃಷ್ಣಪ್ಪನವರಿಗೆ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಯಾದವ ಸಮುದಾಯ ಮತ್ತು ಹಿಂದುಳಿದ ವರ್ಗದ ಮತಗಳು ಬಿಜೆಪಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.
ಸೋಲಿಗೆ ಕಾರಣ :
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಎಂ.ವಿ. ವೀರಭದ್ರಯ್ಯ 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗಲೂ ಅದೇ ವಾತಾವರಣವಿದೆ ಎಂದು ನಂಬಿಕೊಂಡು ಅತೀ ವಿಶ್ವಾಸದಿಂದ ಚುನಾವಣೆಗೆ ಹೋದದ್ದು, ಅವರಿಗೆ ಭ್ರಮನಿರಸನ ಉಂಟಾಗಿದೆ.
ಕ್ಷೇತ್ರದಲ್ಲಿ ಈಗ ಹಿಂದಿನ ವಾತಾವರಣ ಇಲ್ಲ. ಈ ವರ್ಷ ತೀವ್ರ ಬರಗಾಲ ಆವರಿಸಿ ಜನರು ಕಂಗೆಟ್ಟಿದ್ದರೂ ಸಹ ಕುಡಿಯುವ ನೀರು, ರೈತರಿಗೆ ಸಮರ್ಪಕ ಮೇವು ನೀಡುವಲ್ಲಿ ತಾಲೂಕು ಆಡಳಿತ ವಿಫಲವಾದರೂ ಸಹ ಶಾಸಕರು ಕ್ರಮ ಕೈಗೊಳ್ಳದಿರುವುದು ಮತ್ತು ಕ್ಷೇತ್ರದ ಜನತೆ ಜೊತೆ ನಿರಂತರ ಸಂಪರ್ಕ ಹೊಂದದಿರುವುದು, ಹಿಂದೆ ರಾಜಣ್ಣ ನವರು ರದ್ದು ಗೊಳಿಸಿದ್ದ ಸಂತೆಯ ಮತ್ತು ಬೀದಿ ಬದಿ ವ್ಯಾಪಾರಿಗಳ ಸುಂಕವನ್ನು ಮತ್ತೆ ವಿಧಿಸಿದ್ದು,
ಮಾಜಿ ಶಾಸಕ ಕೆ.ಎನ್. ರಾಜಣ್ಣ ವಾರದಲ್ಲಿ ಮೂರು ದಿನ ಕ್ಷೇತ್ರದ ಜನತೆ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜನತೆಯ ಸಮಸ್ಯೆಯನ್ನು ಆಲಿಸಿ ಪರಿಹರಿಸುತ್ತಿದ್ದರು. ಅಲ್ಲದೇ ಶಾಸಕರ ಕಚೇರಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಆದರೆ ಈಗಿನ ಶಾಸಕರು ಪಟ್ಟಣದ ತಾಲೂಕು ಕಚೇರಿಯಲ್ಲಿ ಶಾಸಕರ ಕಚೇರಿಯನ್ನು ಅರಂಭಿಸಿ ಕಳೆದ ಒಂದು ವರ್ಷದಿಂದ ಒಮ್ಮೆಯೂ ಕಚೇರಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಅಲಿಸಿಲ್ಲ.
ತಾಲ್ಲೂಕಿನ ಇಬ್ಬರು ಬ್ಲಾಕ್ ಕಾಂಗ್ರೆಸ್ನ ಮುಖಂಡರನ್ನು ಅಮಾನತ್ತು ಮಾಡಿದ್ದು ಹಾಗೂ ಮೈತ್ರಿ ಇದ್ದರೂ ಸಹ ತಾಲ್ಲೂಕಿನಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಒಂದೇ ಸಮೂದಾಯದ ಮೇಲೆ ಅವಲಂಬಿತರಾದರೆ ಕ್ಷೇತ್ರದ ಎಲ್ಲಾ ವರ್ಗಗಳ ಜನ ನಾಯಕ ಕೆ.ಎನ್.ಆರ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವುದು ಇತರೆ ಸಮೂದಾಯಗಳ ಮತಗಳು ಬಿಜೆಪಿ ಪರ ವಾಲುವಂತೆ ಮಾಡಿದೆ ಇವೆಲ್ಲಾ ಕಾರಣಗಳು ತಾಲ್ಲೂಕಿನಲ್ಲಿ ಜೆಡಿಎಸ್ ಹಿನ್ನೆಡೆಗೆ ಕಾರಣ ಎನ್ನಲಾಗಿದೆ.
2014ರಲ್ಲಿ ಜಿಲ್ಲೆಯ ಒಟ್ಟು ಚಲಾವಣೆಯಾದ 1100735 ಮತಗಳಲ್ಲಿ 429635ರಷ್ಟು ಮತ ಪಡೆದು 74241 ಮತಗಳ ಅಂತರಿಂದ ಎಸ್.ಪಿ.ಮುದ್ದಹನುಮೇಗೌಡರು ಲೋಕಸಭೆಗೆ ಆಯ್ಕೆಯಾಗಿದ್ದರು ಮಧುಗಿರಿ ವಿಧಾನ ಸಭಾ ಕ್ಷೇತ್ರ ದಿಂದ 60923 ಮತ ಗಳಿಸಿದ್ದರು. ಅಂದೂ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಸ್ ಬಸವರಾಜು ರವರು 22385 ಮತಗಳು ಮಾತ್ರ ಪಡೆದು ಸೋಲು ಕಂಡಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಿ ಮಧುಗಿರಿ ಕ್ಷೇತ್ರದಿಂದ ಜಿಡಿಎಸ್ ವಿರುದ್ಧವಾಗಿ 10564 ಮತಗಳ ಅಂತರವನ್ನು ನೀಡಿ ಮತ್ತೆ 5ನೇ ಬಾರಿ ಸಂಸತ್ಗೆ ಕಳುಹಿಸಿಕೊಡುವಲ್ಲಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
