ಸಂಪುಟ ರಚನೆ : ದಿಲ್ಲಿ ದಂಡಯಾತ್ರೆಗೆ ತೆರಳಿದ ಭಿನ್ನರ ಗ್ಯಾಂಗ್..!!

ಬೆಂಗಳೂರು

     ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಜೆಪಿಯ ಹಲ ಭಿನ್ನರು ದಿಲ್ಲಿ ದಂಡಯಾತ್ರೆಗೆ ತೆರಳಿದ್ದರೆ ಮತ್ತೊಂದು ಕಡೆ ಭಿನ್ನಮತ ಶಮನಗೊಳ್ಳುವುದು ಕಷ್ಟವಾದರೆ ಮಧ್ಯಂತರ ಚುನಾವಣೆಗೆ ಅಣಿಯಾಗಿ ಎಂದು ಕಮಲ ಪಾಳೆಯ ವರಿಷ್ಟರು ರಾಜ್ಯ ನಾಯಕರಿಗೆ ಕರೆ ನೀಡಿದ್ದಾರೆ.

     ಉನ್ನತ ಮೂಲಗಳು ಈ ವಿಷಯವನ್ನು ಸ್ಪಷ್ಟ ಪಡಿಸಿದ್ದು ಭಿನ್ನಮತದ ಪ್ರಕೋಪವನ್ನು ತಾಳಿಕೊಳ್ಳುವ ಅಗತ್ಯವೇನಿಲ್ಲ.ಹೀಗಾಗಿ ಅನಿವಾರ್ಯವಾದರೆ ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಲು ಅಣಿಯಾಗಿ ಎಂದಿದ್ದಾರೆ ಅಂತ ವಿವರಿಸಿವೆ.

    ಮಂಗಳವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ತಮಗೆ ಸ್ಥಾನ ಸಿಗದೆ ಹೋಗಿದ್ದರಿಂದ ಹಿರಿಯ ಶಾಸಕರಾದ ಉಮೇಶ್ ಕತ್ತಿ,ಅಭಯಪಾಟೀಲ್,ಬಾಲಚಂದ್ರ ಜಾರಕಿಹೊಳಿ,ಜಿ.ಹೆಚ್.ತಿಪ್ಪಾರೆಡ್ಡಿ,ಮಾಡಾಳ್ ವಿರೂಪಾಕ್ಷಪ್ಪ,ಪೂರ್ಣಿಮಾ,ಹಾಲಾಡಿ ಶ್ರೀನಿವಾಸ ಶೆಟ್ಟಿ,ಮುರುಗೇಶ್ ನಿರಾಣಿ,ಎಂ.ಪಿ.ರೇಣುಕಾಚಾರ್ಯ,ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರು ಅಸಮಾಧಾನ ತೋರಿಸಿದ್ದರು.

   ಈ ಪೈಕಿ ಕೆಲವರು ತಮ್ಮ ಅಸಮಾಧಾನವೇನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಹೇಳುವುದಕ್ಕೆ ಸೀಮಿತವೇ ಹೊರತು ಬಂಡಾಯವೇಳುವ ಲಕ್ಷಣವಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಆದರೆ ಇಂದು ಕೂಡಾ ಹಲವರು ಸಂಪುಟ ವಿಸ್ತರಣೆಯ ವಿಷಯದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುವ ಕೆಲಸವನ್ನು ಮುಂದುವರಿಸಿದರೆ ಬಿಜೆಪಿ ಸರ್ಕಾರ ರಚಿಸಲು ಅನುಕೂಲವಾಗುವಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಂದ ಅನರ್ಹತೆಯ ಶಿಕ್ಷೆಗೊಳಗಾಗಿರುವವರ ಪೈಕಿ ಹಲವರು ಮುಂದಿನ ದಿನಗಳ ಬಗ್ಗೆ ದುಸ್ವಪ್ನ ಕಂಡವರಂತೆ ಬೆಚ್ಚಿ ಬಿದ್ದಿದ್ದಾರೆ.

    ಹೀಗಾಗಿಯೇ ದೆಹಲಿ ದಂಡಯಾತ್ರೆಗೆ ಅಸಮಾಧಾನಿತ ಶಾಸಕರ ಜತೆ ರಮೇಶ್ ಜಾರಕಿಹೊಳಿ,ಮಹೇಶ್ ಕುಮಟಳ್ಳಿ ಸೇರಿದಂತೆ ಕೆಲ ಅನರ್ಹಗೊಂಡ ಶಾಸಕರು ಕೂಡಾ ದಿಲ್ಲಿಗೆ ತೆರಳಿದ್ದು ಯಾವ ಕಾರಣಕ್ಕೂ ವಚನ ದ್ರೋಹ ಮಾಡಬೇಡಿ ಎಂದು ಬಿಜೆಪಿ ವರಿಷ್ಟರಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ ನಿಮ್ಮ ಹಿತ ರಕ್ಷಿಸುತ್ತೇವೆ.ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಿರಿ.ಆದರೆ ಆ ಭರವಸೆ ಈಡೇರುವ ದಿನಗಳು ಹತ್ತಿರ ಬರುತ್ತಿಲ್ಲ.ಮೊದಲ ಕಂತಿನ ಸಂಪುಟ ರಚನೆಯಾಗಿದೆ ಎಂದರೆ ಮುಂದಿನ ಕೆಲ ದಿನಗಳ ಕಾಲ ನಾವು ಅತಂತ್ರ ಪರಿಸ್ಥಿತಿಯಲ್ಲೇ ಇರಬೇಕಾಗುತ್ತದೆ.

    ಹೀಗಾಗಿ ನಮಗೆ ಈ ಹಿಂದೆ ನೀಡಿದ ವಚನದಂತೆ ನಮ್ಮ ಹಿತ ರಕ್ಷಣೆ ಮಾಡಿ,ನಾವು ಮಂತ್ರಿಗಳಾಗಲು ಅವಕಾಶ ಮಾಡಿಕೊಡಿ.ಒಂದು ವೇಳೆ ಈ ವಚನ ಪಾಲನೆ ಮಾಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಬೆಳೆಯುತ್ತದೆ.ನಂಬಿದವರಿಗೆ ಕೈ ಕೊಡುವುದು ಬಿಜೆಪಿಯ ಗುಣ ಎಂಬುದು ಜಗಜ್ಜಾಹೀರಾದರೆ ಕರ್ನಾಟಕ ಮಾತ್ರವಲ್ಲ,ದೇಶದ ಎಲ್ಲ ರಾಜ್ಯಗಳ ಮೇಲೆ ಅದರ ಪ್ರಭಾವ ಬೀಳುತ್ತದೆ ಎಂಬುದು ಅನರ್ಹಗೊಂಡ ಶಾಸಕರನೇಕರ ಎಚ್ಚರಿಕೆಯ ನುಡಿ ಎನ್ನಲಾಗಿದೆ.

    ಈ ಮಧ್ಯೆ ಪಕ್ಷದ ನಾಯಕರ ವಿರುದ್ದ ಬಹಿರಂಗವಾಗಿಯೇ ಮಾತನಾಡುತ್ತಿರುವ ಶಾಸಕರನೇಕರು ತಮ್ಮ ತಮ್ಮಲ್ಲೇ ಗುಂಪು ಕಟ್ಟಿಕೊಂಡು ಹಲವು ಸುತ್ತಿನ ಮಾತುಕತೆ ನಡೆಸಿದ್ದು ಮುಂದೇನು ಮಾಡಬೇಕು?ಎಂಬ ಸಂಬಂಧ ಚರ್ಚೆ ನಡೆಸುತ್ತಿದ್ದಾರೆ.

    ಹಿರಿಯ ನಾಯಕ ಉಮೇಶ್ ಕತ್ತಿ ಅವರಂತೂ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಕೆಂಡಾಮಂಡಲಗೊಂಡಿದ್ದು ನಾನು ಎಂಟು ಬಾರಿ ಶಾಸಕನಾಗಿದ್ದೇನೆ.ಮೂರು ಬಾರಿ ಸಚಿವನಾಗಿದ್ದೇನೆ.ಆದರೆ ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ನನ್ನನ್ನು ಪರಿಗಣಿಸಿಲ್ಲ ಎಂಬುದರ ಅರ್ಥವೇನು?ಎಂದು ಗುಡುಗಿದ್ದಾರೆ.

    ಮುಂದೇನು ಎಂದು ನನಗೆ ಗೊತ್ತಿಲ್ಲ.ಎಲ್ಲವೂ ಹೈಕಮಾಂಡ್‍ಗೆ ಬಿಟ್ಟಿದ್ದು.ಆದರೆ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಯಾವ್ಯಾವ ಅಂಶಗಳನ್ನು ಗಮನಿಸಬೇಕಿತ್ತೋ?ಅದನ್ನು ಗಮನಿಸಲಾಗಿಲ್ಲ ಎಂದು ಹೇಳಿದ್ದಾರೆ.ಹೀಗೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ನಾನಾ ಸ್ವರೂಪಗಳಲ್ಲಿ ವ್ಯಕ್ತವಾಗುತ್ತಿದ್ದು ಇದರ ಬೆನ್ನಲ್ಲೇ ಅತೃಪ್ತರನ್ನು ಸಮಾಧಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ.

    ಸಧ್ಯಕ್ಕೆ ಸುಮ್ಮನಿರಿ,ಮುಂದಿನ ಕೆಲ ಕಾಲದಲ್ಲಿ ಎಲ್ಲವನ್ನೂ ಸರಿಪಡಿಸೋಣ.ಇದು ಹೈಕಮಾಂಡ್ ಪಟ್ಟಿ.ಅದು ಸೂಚಿಸಿದ ಹೆಸರುಗಳನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಅತೃಪ್ತರಿಗೆ ವಿವರಿಸುತ್ತಿದ್ದಾರೆ.ಆದರೆ ಯಡಿಯೂರಪ್ಪ ಅವರ ಸಮಾಧಾನದ ಮಾತು ಅತೃಪ್ತರಿಗೆ ಹಿಡಿಸುತ್ತಿಲ್ಲ.ಹೀಗಾಗಿ ಕೆಲವರು ಸಧ್ಯಕ್ಕ ಸುಮ್ಮನಿರುವಂತೆ ಕಂಡರೂ ಮುಂದಿನ ದಿನಗಳಲ್ಲಿ ಇದು ಯಾವ್ಯಾವ ತಿರುವು ಪಡೆಯುತ್ತದೆ?ಎಂಬುದನ್ನು ಕಾದು ನೋಡಲು ನಿರ್ಧರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap