ಚಿತ್ರದುರ್ಗ;
ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗದ ಕಾರಣ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ. ಹಿರಿಯ ಶಾಸಕರಾಗಿರುವ ಚಿತ್ರದುರ್ಗದ ಜಿ.ಹೆಚ್.ತಿಪ್ಪಾರೆಡ್ಡಿ, ಹೊಳಲ್ಕೆರೆಯ ಎಂ.ಚಂದ್ರಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನಲೆಯಲ್ಲಿ ವ್ಯಾಪಕ ಪ್ರತಿಭಟನೆ ಆರಂಭವಾಗಿದೆ.
ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್ ಕೂಡಾ ಬಿಜೆಪಿ ಹೈಕಮಾಂಡ್ ವಿರುದ್ದ ಕಿಡಿಕಾರಿದ್ದಾರೆ. ಹಿರಿಯ ಬಿಜೆಪಿ ನಾಯಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಇಲ್ಲಿನ ಗಾಂಧಿ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಬೈಕ್ಗೆ ಬೆಂಕಿ ಹಚ್ಚಿದ ಬೆಂಬಲಿಗರು ಹೈಕಮಾಂಡ್ ವಿರುದ್ದ ಘೋಷಣೆ ಕೂಗಿದರು
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಆರು ಭಾರಿ ಗೆದ್ದಿರುವ ತಿಪ್ಪಾರೆಡ್ಡಿ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಹಿರಿತನ ಆಧಾರದ ಮೇಲೆ ಸಚಿವ ಸ್ಥಾನ ಸಿಗಬಹುದು ಎಂದು ಅವರ ಬೆಂಬಲಿಗರು ನಿರೀಕ್ಷಿಸಿದ್ದರು. ಆದರೆ ಈ ಬಾರಿಯೂ ಅವಕಾಶ ಸಿಗದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಬೆಂಬಲಿಗರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದು, ಕಳೆದ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ. ಆರು ಭಾರಿ ಗೆದ್ದಿರುವ ಅವರಿಗೆ ಜಿಲ್ಲೆಯಲ್ಲಿ ಹಿಡಿತವಿದೆ. ಹಿರಿತನದ ಆಧಾರದ ಮೇಲೆ ತಿಪ್ಪಾರೆಡ್ಡಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ತಿಪ್ಪಾರೆಡ್ಡಿ ಅವರನ್ನು ಕಡೆಗಣಿಸಿದರೆ ಪಕ್ಷದ ಮೇಲೆ ತೀವ್ರತರಹದ ಪರಿಣಾಮ ಬೀರಲಿದೆ ಎಂದು ಬಿಜೆಪಿಯ ಕಾರ್ಯಕರ್ತರು ಎಚ್ಚರಿಸಿದರು
ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿರುವ ತಿಪ್ಪಾರೆಡ್ಡಿಯವರಂತಹ ನಾಯಕರಿಗೆ ಈ ಬಾರಿಯ ಮಂತ್ರಿ ಮಂಡಲದಲ್ಲಿ ಸ್ಥಾನಸಿಗದಿರುವುದು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಪಕ್ಷದ ವರಿಷ್ಠರು ಕೂಡಲೇ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡಬೇಕು.ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಮುಖಂಡರು ಬೆದಕರಿಗೆ ಹಾಕಿದರು
ಟೈರ್ ಮತ್ತು ಬೈಕ್ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಗೋಪಿಕೃಷ್ಣ ಹಾಗೂ ಆತನ ಬೆಂಬಲಿಗರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದಾಗ ದಾಂಧಲೆಯಲ್ಲಿ ತೊಡಗಿದ್ದವರು ಚೆಲ್ಲಾಪಿಲ್ಲಿಯಾಗಿ ಓಟ ಕಿತ್ತರು. ಗೋಪಿಕೃಷ್ಣ, ರಮೇಶ್ಯಾದವ್, ರೇಖ ಸೇರಿದಂತೆ ಹದಿನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು ನಗರ ಠಾಣೆಯಲ್ಲಿ ಪಿಟ್ಟಿ ಕೇಸ್ ದಾಖಲಿಸಿ ನಂತರ ಬಿಡುಗಡೆಗೊಳಿಸಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸ್ ಅಧಿಕಾರಿಗಳು ಸುಮಾರು ಒಂದು ಗಂಟೆಗಳ ಕಾಲ ಗಾಂಧಿ ವೃತ್ತದಲ್ಲಿ ಮೊಕ್ಕಾಂ ಹೂಡಿ ವಾತಾವರಣ ತಿಳಿಗೊಂಡ ನಂತರ ಅಲ್ಲಿಂದ ಹಿಂದಿರುಗಿದರು.ನಗರಸಭೆ ಸದಸ್ಯರಾದ ಎಸ್.ಸೋಮಶೇಖರ್ ,ತಾರಾ, ನವೀನ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಇನ್ನಿತರೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಇತ್ತ ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ನಾಯಕರ ವಿರುದ್ದ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಒಂದು ವರ್ಷದಲ್ಲಿ ಬಹಳ ಹಿಂಸೆ ನೀಡಿದರು. ಹೆಜ್ಜೆ ಹೆಜ್ಜೆಗೂ ಅನುಮಾನ ಪಟ್ಟರು. ಇದು ನನ್ನನ್ನು ಜರ್ಝರಿತರನ್ನಾಗಿಸಿತು ಎಂದು ಕಣ್ಣೀರು ಹಾಕಿದ್ದಾರೆ
ಹೊಳಲ್ಕೆರೆಯ ಮತ್ತೊಬ್ಬ ಪ್ರಭಾವಿ ನಾಯಕ ಎಂ.ಚಂದ್ರಪ್ಪ ಅವರೂ ಸಹ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ಆಪ್ತರಾಗಿರುವ ಎಂ. ಚಂದ್ರಪ್ಪ ಈ ಹಿಂದೆ ಆರು ತಿಂಗಳು ಮುಂಚೆಯೇ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಕೆಜೆಪಿಗೆ ಹೋಗಿದ್ದರು.ಈ ಬಾರಿ ಸಚಿವ ಸ್ಥಾನಸಿಗುವ ನಿರೀಕ್ಷೆಯಲ್ಲಿದ್ದ ಅವರ ಬೆಂಬಲಿಗರಲ್ಲಿ ಈ ಬೆಳವಣಿಗೆ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
