ದಾವಣಗೆರೆ:
ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ, ಮತ್ತೊಬ್ಬರ ಅಮೂಲ್ಯ ಜೀವ ಉಳಿಸಿದವರೇ ನಿಜವಾದ ಹಿರೋಗಳು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲೈಫ್ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿನಿಮಾ ನಾಯಕ ನಟರ ಜನ್ಮದಿನ ಹೆಸರಿನಲ್ಲಿ ರಕ್ತದಾನ ಮಾಡಿ, ಅಭಿಮಾನ ಮರೆಯುವವರನ್ನು ನಾವು ನೋಡಿದ್ದೇವೆ.
ಆದರೆ, ಸಿನಿಮ ನಟರು ನಿಜವಾದ ಹಿರೋಹಳಲ್ಲ. ಬದಲಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ, ಇನ್ನೊಬ್ಬರ ಅಮೂಲ್ಯ ಜೀವ ಉಳಿಸುವ ನೀವು ನಿಜವಾದ ಹಿರೋಗಳು ಎಂದು ಬಣ್ಣಿಸಿದರು.
ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ರಕ್ತ ದಾನ ಮಾಡುವುದು ನಿಜಕ್ಕೂ ಶ್ಲಾಘನೀಯ. ಅನ್ನ ದಾನ, ವಿದ್ಯಾ ದಾನ, ದೇವಸ್ಥಾನಗಳಿಗೆ ಮಾಡುವ ದಾನ ಸೇರಿದಂತೆ ಎಲ್ಲ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠವಾಗಿದೆ. ಹೀಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಆಯ್ದ ರಕ್ತದಾನಿಗಳಿಗೆ ಸನ್ಮಾನ ಮಾಡುವ ಬದಲು ಹಲವಾರು ಬಾರಿ ರಕ್ತದಾನ ಮಾಡಿದ ಪ್ರತಿಯೊಬ್ಬರನ್ನೂ ಸನ್ಮಾನಿಸಿ ಗೌರವಿಸಬೇಕೆಂದು ಸಲಹೆ ನೀಡಿದರು.
ಅಮೂಲ್ಯವಾದ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಹೀಗಾಗಿ ಒಬ್ಬ ಆರೋಗ್ಯಯುತ ವ್ಯಕ್ತಿಯಿಂದ ಮಾತ್ರ ರಕ್ತ ಪಡೆಯಲು ಸಾಧ್ಯ. ಈ ಕಾಲೇಜಿನಲ್ಲಿ 250 ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
ರಕ್ತದಾನಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ರೆಡ್ ಕ್ರಾಸ್ ಸಂಸ್ಥೆ ಪ್ರತಿ ಕಾಲೇಜುಗಳಲ್ಲಿಯೂ ಆಯೋಜಿಸಿದರೆ, ರಕ್ತದಾನದ ಮಹತ್ವ ಅರಿತು ರಕ್ತದಾನಕ್ಕೆ ಹೆಚ್ಚಿನ ಯುವಕರು ಮುಂದಾಗಲಿದ್ದಾರಡ. ಇಲ್ಲಿ ರಕ್ತದಾನಿಗಳಿಗಾಗಿ ಏರ್ಪಡಿಸಿರುವ ಸನ್ಮಾನ ಸಮಾರಂಭವು ಬೇರೆಯವರಿಗೂ ರಕ್ತದಾನ ನೀಡಲು ಪ್ರೇರಣೆ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲೈಫ್ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆ ಅಧ್ಯಕ್ಷ, ಡಾ.ಎ.ಎಂ.ಶಿವಕುಮಾರ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ರಕ್ತದಾನದ ಕುರಿತು ಅರಿವು ಮೂಡಿಸಿದರೆ, ಆ ಮಕ್ಕಳು ಮುಂದೆ ಧೈರ್ಯವಾಗಿ ರಕ್ತದಾನ ಮಾಡಲು ಮುಂದೆ ಬರುತ್ತಾರೆ. ಈ ಐಟಿಐ ಕಾಲೇಜಿನಲ್ಲಿಯೇ ಶಿಕ್ಷಕರು ಸೇರಿದಂತೆ 250 ವಿದ್ಯಾರ್ಥಿಗಳು ರಕ್ತದಾನಿಗಳಿರುವುದು ಕೇಳಿ ಬಹಳ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ಪತ್ರಕರ್ತ ಎ.ಎಲ್.ತಾರಾನಾಥ್, ಪತ್ರಿಕಾ ಛಾಯಾಗ್ರಾಹಕ ವಿಜಯ ಜಾಧವ್, ಹೇಮಚಂದ್ರ ಜೈನ್, ವಿಕಾಸ ಹಮ್ಮಿಗಿ, ಮಹದೇವಯ್ಯ ಮಠದ್, ಡಾ.ದೀಕ್ಷಾ, ಪ್ರವೀಣ ಭಾರದ್ವಜ್, ವಿಜಯ ಲಕ್ಷ್ಮಣ, ಎಸ್.ಎಂ.ರೇವಣಸಿದ್ದಯ್ಯ, ಮೂರ್ತಿ ಹಾಗೂ ಐಟಿಐ ಕಾಲೇಜಿನ 22 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಎನ್.ಏಕನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲೈಫ್ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಬಾರಂಗಳ್, ಐಟಿಐ ಕಾಲೇಜಿನ ಆಡಳಿತಾಧಿಕಾರಿ ಕೃಷ್ಣಾನಾಯ್ಕ, ಜಿಲ್ಲಾ ಏಡ್ಸ್ ಮತ್ತು ನಿಯಂತ್ರಣ ಘಟಕದ ಡಾ.ಜಿ.ಡಿ.ರಾಘವನ್, ರೆಡ್ಕ್ರಾಸ್ ಸಹಕಾರ್ಯದರ್ಶಿ ಡಿ.ಎಸ್.ಸಾಗರ್, ಖಜಾಂಚಿ ಗೌಡ್ರ ಚನ್ನಬಸಪ್ಪ, ಶಾಂತಾಪವಾರ್, ಆನಂದ ಜ್ಯೋತಿ, ಮಾಧವಿ, ಗೋಪಾಲಕೃಷ್ಣ, ಪೃಥ್ವಿರಾಜ ಬಾದಾಮಿ, ರಜತ್ ವಿಕ್ರಂ, ನಟರಾಜ, ಮಾಧವ ಪದಕಿ, ಸಂತೋಷ ಗಾಯಕವಾಡ್, ಬಿ.ಎನ್.ಕರಿಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
