ತುಮಕೂರು: ಪಾಲಿಕೆ ಆಯುಕ್ತರಾಗಿ ಭೂಬಾಲನ್ ನಾಳೆ ಅಧಿಕಾರ ಸ್ವೀಕಾರ

ತುಮಕೂರು
     ಮಹತ್ವದ ಬೆಳವಣಿಗೆಯೊಂದರಲ್ಲಿ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರನ್ನು ಮತ್ತೆ ನೇಮಿಸಿ ರಾಜ್ಯ ಸರ್ಕಾರ ಡಿ.17 ರಂದು ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ ಈ ವಿಷಯವಾಗಿ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ತುಮಕೂರು ಜನತೆಯ ಸತತ ಒಕ್ಕೊರಲ ಆಗ್ರಹಕ್ಕೆ, ಹೋರಾಟಕ್ಕೆ ಕೊನೆಗೂ ಜಯ ಲಭಿಸಿದಂತಾಗಿದೆ. 
     ಡಿ.18 ರಂದು ಬುಧವಾರ ಬೆಳಗ್ಗೆ 9-30 ಕ್ಕೆ ಭೂಪಾಲನ್ ಅವರು ಪಾಲಿಕೆ ಆಯುಕ್ತರಾಗಿ ಮತ್ತೆ ಅಧಿಕಾರ ಸ್ವೀಕರಿಸಲಿದ್ದಾರೆಂದು ಪಾಲಿಕೆ ಮೂಲಗಳು ತಿಳಿಸಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ ಅಗತ್ಯ ಸಿದ್ಧತೆಗಳನ್ನು ಮಾಡಿದ್ದಾರೆ.
ಈ ವರ್ಷದ ಜನವರಿ 18 ರಂದು ಭೂಪಾಲನ್ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ನಡುವೆ ಸ್ಮಾರ್ಟ್‍ಸಿಟಿ ಕಂಪನಿಯ ಎಂ.ಡಿ. ಆಗಿಯೂ ಹೆಚ್ಚುವರಿ ಕರ್ತವ್ಯ ನಿರ್ವಹಿಸಿದರು.
 
     ಆದರೆ ಸೆಪ್ಟೆಂಬರ್ 22 ರಂದು ರಾಜ್ಯ ಸರ್ಕಾರ ಹಠಾತ್ತನೆ ಇವರನ್ನು ಬೆಳಗಾವಿಯ ಮಲಪ್ರಭ-ಘಟಪ್ರಭ ಯೋಜನೆಯ ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ (ಭೂಸ್ವಾಧೀನ) ವರ್ಗಾಯಿಸಿತು. ತಕ್ಷಣವೇ ಇವರು ಆ ಹುದ್ದೆ ಸ್ವೀಕರಿಸಿದರು. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿ ಸಾರ್ವಜನಿಕರ ಭಾರಿ ಪ್ರತಿರೋಧ ವ್ಯಕ್ತವಾಗತೊಡಗಿತು. ಸಾಮಾಜಿಕ ಜಾಲತಾಣಗಳಲ್ಲಂತೂ ಜನರು ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ತುಮಕೂರು ಶಾಸಕರು ಮತ್ತು ಸಂಸದರು ಇದರಿಂದ ತೀವ್ರ ಮುಜುಗರಕ್ಕೊಳಗಾದರು.
 
     ಜಿಲ್ಲಾ ಸಚಿವರೂ ಸ್ಪಷ್ಟನೆ ಕೊಡುವ ಮಟ್ಟಕ್ಕೆ ವಿವಾದ ಬೆಳೆಯಿತು. ಮಾಧ್ಯಮಗಳಲ್ಲೂ ಇದು ಭಾರಿ ಚರ್ಚೆಗೆ ಒಳಗಾಯಿತು. ಕೊನೆಗೆ ಶಾಸಕರು, ಸಂಸದರು ಸ್ವತಃ ಮುಖ್ಯಮಂತ್ರಿಗಳಿಗೆ ಭೂಪಾಲನ್ ಅವರನ್ನು ಮತ್ತೆ ತುಮಕೂರಿಗೆ ವರ್ಗಾಯಿಸುವಂತೆ ಕೋರಿದರು. ಆದರೂ ಜನರಲ್ಲಿ ವಿಶ್ವಾಸ ಮೂಡಲಿಲ್ಲ. ಉಪಚುನಾವಣೆಯ ಕಾರಣವನ್ನು ತಿಳಿಸಲಾಯಿತು. ಮೊನ್ನೆ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಮತ್ತೆ ಭೂಪಾಲನ್ ವರ್ಗಾವಣೆ ವಿಷಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಒಳಗಾಯಿತು.
     ಇದರ ಬಿಸಿ ತಾಕಿದೊಡನೆ ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಡಿ.16 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಭೂಪಾಲನ್ ಅವರ ಸೇವೆ ತುಮಕೂರಿಗೆ ಬೇಕೆಂದು ಕೋರಿದರು. ಡಿ. 17 ರಂದು ತುಮಕೂರಿನಲ್ಲಿ ಇದೇ ವಿಷಯವಾಗಿ ಸಾರ್ವಜನಿಕರು ಮತ್ತು ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆದು, ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಈ ಎಲ್ಲ ಬೆಳವಣಿಗೆ ನಡುವೆ ಡಿ.17 ರಂದು ಮಧ್ಯಾಹ್ನಾ ನಂತರ ದಿಢೀರನೆ ಸರ್ಕಾರದ ಪ್ರಕಟಣೆ ಕಾಡ್ಗಿಚ್ಚಿನಂತೆ ಹರಡಿತು. ಪಾಲಿಕೆ ಕಚೇರಿಯಲ್ಲಿ ಅನೇಕರು ಸಂಭ್ರಮಿಸಿದರು. ಇತ್ತ ಹೋರಾಟಗಾರರು ಸಹ ಸಂಭ್ರಮಿಸಿದ್ದು, ಮತ್ತೊಮ್ಮೆ ಪಟಾಕಿ ಸಿಡಿಸಿ ದೊಡ್ಡಮಟ್ಟದಲ್ಲಿ ಸಂತಸ ಹಂಚಿಕೊಳ್ಳಲು ಯೋಜಿಸುತ್ತಿದ್ದಾರೆ
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link