ಹುಳಿಯಾರು:
ಹುಳಿಯಾರು ಹೋಬಳಿಯ ಬೋರನಕಣಿವೆಯಲ್ಲಿ ನಮ್ಮ ಸಂಸ್ಥೆಯಿಂದ ವಿಶ್ವ ರಂಗ ಭೂಮಿ ನಿರ್ಮಾಣ ಮಾಡಲಾಗುವುದು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ತಿಳಿಸಿದರು.ಹುಳಿಯಾರು ಹೋಬಳಿಯ ಬೋರನಕಣಿವೆಯ ಸೇವಾ ಚೇತನ ಮತ್ತು ಶಿರಡಿ ಸಾಯಿ ಇಂಟರ್ ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನಿಂದ ಗುರುನಮನ ಸ್ವೀಕರಿಸಿ ಅವರು ಮಾತನಾಡಿದರು.
ಹತ್ತಾರು ವರ್ಷಗಳಿಂದ ವಿಶ್ವ ರಂಗ ಭೂಮಿ ನಿರ್ಮಿಸಿ ಬೆಳಕಿಗೆ ಬಾರದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳಸುವ ಕನಸ್ಸು ಕಟ್ಟಿಕೊಂಡಿದ್ದೇನೆ. ಕನ್ನಂಬಾಡಿ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ನಿರ್ಮಿಸುವಂತೆ ಅನೇಕರು ಕೇಳಿಕೊಂಡಿದ್ದಾರೆ. ಆದರೆ ಬೋರನಕಣಿವೆಯ ಪರಿಸರ ಕಂಡು ಇಲ್ಲಿಯೇ ನಿರ್ಮಿಸಬೇಕೆಂದು ನಿರ್ಧರಿಸಿದ್ದೇನೆ. ಈ ವಿಶ್ವ ರಂಗಭೂಮಿಯಿಂದ ಹನುಮಂತು, ಮೋನಮ್ಮ, ರೂಬೀನಾ ಅವರಂತ ಲಕ್ಷಾಂತರ ಪ್ರತಿಭೆಗಳನ್ನು ಹೊರತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನನಗೆ ತಂದೆಯೇ ಮೊದಲ ಗುರು, ನಂತರ ಮೂವರು ಸಂಗೀತ ಶಿಕ್ಷಕರು ನನ್ನ ಪಾಲಿನ ಗುರುಗಳು. ಇದನ್ನು ಬಿಟ್ಟರೆ ಜೀವನವೇ ನನ್ನ ಶ್ರೇಷ್ಠ ಗುರು. ಪ್ರತಿಯೊಬ್ಬರ ವ್ಯಕ್ತಿಯ ಜೀವನವೂ ಸಹ ಒಂದೊಂದು ಕಾವ್ಯ. ಒಬ್ಬ ವ್ಯಕ್ತಿ ಹೇಳುವ ಜೀವನಾನುಭಾವವನ್ನು ಹೃದಯದಿಂದ ಕೇಳಿದರೆ ನೂರು ಪುಸ್ತಕ ಓದಿದ ಅನುಭವ ಸಿಗುತ್ತದೆ. ಹಾಗಾಗಿ ನನಗೆ ಸಿಗುವ ಎಲ್ಲರ ಜೀವನವನ್ನು ಓದುತ್ತೇನೆ. ಇದರ ಮೂಲಕ ಅಂದು, ಇಮದು, ಎಂದೆಂದೂ ಕಲಿಯುತ್ತಾ ಹೋಗುತ್ತೇನೆ ಎಂದರು.
ಪ್ರತಿಯೊಬ್ಬರಲ್ಲೂ ಸಾಧಿಸುವ ಶಕ್ತಿ ಇದ್ದೇ ಇರುತ್ತದೆ. ಆದರೆ ಸಾಧಿಸುವ ಛಲ ಇರುವುದಿಲ್ಲ. ಹಾಗಾಗಿ ಮುಂದೇನಾಗಬೇಕೆಂಬುದನ್ನು ಇಂದು ಅಂದುಕೊಳ್ಳಬೇಕು. ಅಂದುಕೊಳ್ಳುವುದು ಒಂದಾಗಬೇಕು, ಒಂದನ್ನೇ ಜಪಿಸಬೇಕು, ಒಂದನ್ನೇ ತಪಿಸಬೇಕು, ಒಂದನ್ನೇ ಗುರಿ ತಲುಪಿಸಬೇಕು. ಅದನ್ನು ಬಿಟ್ಟು ಬೆಳಗ್ಗೆ ಒಂದು, ಸಂಜೆ ಮತ್ತೊಂದು, ಇಂದು ಒಂದು, ನಾಳೆ ಮತ್ತೊಂದು ಅಂದುಕೊಳ್ಳುತ್ತಾ ಹೋದರೆ ಜೀವನ ಪೂರ್ತಿ ಅಂದುಕೊಳ್ಳುತ್ತಾ ಇರಬೇಕಾಗುತ್ತೆ. ಹಾಗಾಗಿ ನಮ್ಮ ಯೋಗ್ಯತೆಗೆ ತಕ್ಕಂತೆ ಏನು ಮಾಡಬೇಕೆಂಬುದನ್ನು ನಿರ್ಧರಿಸಿ ಮುನ್ನಡೆದರೆ ದೇವರು, ಸಮಾಜ, ಎಲ್ಲರೂ ಗುರಿ ಮುಟ್ಟಲು ಸಹಾಯ ಮಾಡುತ್ತಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
