ಪ್ರಧಾನಿ ಹುದ್ದೆಗೆ ಗೌರವ ತಂದು ಕೊಡಲು ಕರೆ

ದಾವಣಗೆರೆ:

       ಈ ಬಾರಿ ಮತ್ತೊಮ್ಮೆ ದೇಶದ ಚೌಕೀದಾರ್‍ನನ್ನು ಅಧಿಕಾರಕ್ಕೆ ತರುವ ಮೂಲಕ ಪ್ರಧಾನಿ ಹುದ್ದೆಗೆ ಗೌರವ ತಂದುಕೊಡಬೇಕೆಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಆಯನೂರು ಮಂಜುನಾಥ್ ಕೆರೆ ನೀಡಿದರು.

      ನಗರದ ಹಳೇ ವಾಣಿ ಹೊಂಡ ಶೋ ರೂಂ ಆವರಣದಲ್ಲಿ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಮೈ ಬೀ ಚೌಕೀದಾರ್ ವಿಡಿಯೋ ಕಾನ್ಫರೆನ್ಸ್ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯಗೊಂಡ ಎಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ ದೇಶಕ್ಕಾಗಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದ್ದರಿಂದ ದೇಶದ ಚೌಕೀದಾರ್ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ದೇಶದ ಪ್ರಧಾನಿ ಹುದ್ದೆಗೆ ಗೌರವ ತಂದುಕೊಡಲು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

      ಬಡವರು ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿರುವ ನರೇಂದ್ರ ಮೋದಿ ಅವರು ಯಾವುದೇ ಜಾತಿ, ಮತಗಳ ಭೇದವಿಲ್ಲದೇ, ದೇಶದಲ್ಲಿ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡುವ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸಿ, ಮತ್ತೆ ಭಾರತ ತಲೆ ಎತ್ತುವಂತೆ ಮಾಡಿದ್ದಾರೆಂದು ಹೇಳಿದರು.

       ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯು ಜಿ.ಎಂ.ಸಿದ್ದೇಶ್ವರ ಅವರ ಚುನಾವಣೆ ಅಲ್ಲ. ಭಾರತ ಮಾತೆಗೆ ಗತವೈಭವವನ್ನು ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬವ ಚುನಾವಣೆಯಾಗಿದೆ. ಆದ್ದರಿಂದ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಸಲಹೆ ನೀಡಿದರು.

       ತಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದವರಿಗೆ ನರೇಂದ್ರ ಮೋದಿಯವರು ಈ ಹಿಂದೆ ತಕ್ಕ ಉತ್ತರ ನೀಡಿದ್ದರು. ಈಗ ಮತ್ತೆ ಮೈ ಬೀ ಚೌಕೀದಾರ್ ಸಂವಾದ ಮಾಡುವ ಮೂಲಕ ವಿರೋಧಿಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದಾರೆ. ದೇಶದ 500 ಕಡೆಗಳಲ್ಲಿ ವಿಡೀಯೋ ಕಾನ್ಫರೆನ್ಸ್ ಸಂವಾದ ನಡೆಸುವ ಮೂಲಕ ದೇಶದ ಅಭಿವೃದ್ಧಿಯ ದೃಷ್ಟಿಕೋನವನ್ನು ಜನರ ಮುಂದಿಟ್ಟಿದ್ದಾರೆಂದು ಹೇಳಿದರು.

       ಬರೀ ನಾನು (ಮೋದಿ) ಮಾತ್ರ ದೇಶದ ಚೌಕೀದಾರರಲ್ಲ, ವೈದ್ಯ, ಪೊಲೀಸರು, ವಕೀಲರು, ರೈತರು ಪ್ರತಿಯೊಬ್ಬರೂ ಚೌಕೀದಾರ್ ಆಗಿದ್ದಾರೆಂಬುದಾಗಿ ಹೇಳುವ ಮೂಲಕ ಮೈ ಬೀ ಚೌಕಿದಾರ್ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸಿದ್ದಾರೆ ಎಂದರು.

        ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶಕ್ತಿಮೀರಿ ಚುನಾವಣೆಯನ್ನು ಎದುರಿಸಿ, ನನ್ನ ಗೆಲುವಿನ ಮೂಲಕ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಮನವಿ ಮಾಡಿದರು.

      ದಿನದ 18 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಾ ಎಂದೂ ರಜೆ ಪಡೆಯದೇ ಕೆಲಸ ಮಾಡಿದ ಮೋದಿ ಅವರ ಕೆಲಸಗಳು ಮುಂದುವರೆಯಬೇಕಾದರೆ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಮಾಧು ಸ್ವಾಮಿ, ಎಸ್.ಎ.ರವೀಂದ್ರನಾಥ, ಪ್ರೊ.ಎನ್.ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಬಸವರಾಜ ನಾಯ್ಕ, ಜಿ.ಪಂ. ಅಧ್ಯಕ್ಷೆ ಶೈಲಾಜ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link