ತುರುವೇಕೆರೆ:
ಕಾವೇರಿ ನ್ಯಾಯಾಧಿಕರಣದಲ್ಲಿ ತುಮಕೂರು ಜಿಲ್ಲೆಗೆ 25.31 ಟಿ ಎಮ್ ಸಿ ನೀರು ಹಂಚಿಕೆಯಾಗಿದ್ದರೂ ಸಹ ಈ ಬಾರಿ 25.47 ಟಿ ಎಮ್ ಸಿ ಹೆಚ್ಚುವರಿ ನೀರು ತುಮಕೂರಿಗೆ ಹರಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರ ಆವರಣದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶ ಹಾಗೂ ಮೈತ್ರಿಪಕ್ಷದ ಅಭ್ಯರ್ಥಿ ಹೆಚ್.ಡಿ.ದೇವೇಗೌಡರ ಪರ ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ದೇವೇಗೌಡರು ಗೆದ್ದರೆ ತುಮಕೂರು ಜಿಲ್ಲೆಗೆ ಹೆಚ್ಚಿನ ಪಾಶಸ್ತ್ಯ ನೀಡಲಿದ್ದಾರೆ. ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಎಂದಿಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡುವುದಿಲ್ಲ.
ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಿಲ್ಲ ಎಂಬ ಕಾರಣಕ್ಕೆ ಹೆಗಡೆ ಸರ್ಕಾರದಲ್ಲಿ ನೀರಾವರಿ ಮಂತ್ರಿಗಳಾಗಿದ್ದ ದೇವೇಗೌಡರು ನನ್ನ ರೈತರಿಗೆ ನ್ಯಾಯ ದೊರಕದ ಮೇಲೆ ನನಗೆ ಸಚಿವ ಸ್ಥಾನವೇ ಬೇಡ ಎಂದು ಅಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂತಹುದರಲ್ಲಿ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಬಗ್ಗೆ ಇಲ್ಲಸಲ್ಲದ ಅರೋಪ ಮಾಡುತ್ತ ನಮ್ಮ ಕುಟುಂಬದವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಚಿವ ಎಸ್.ಆರ್.ಶ್ರೀನಿವಾಸ್, ಸಂಸದ ಎಲ್.ಆರ್.ಶಿವರಾಮೇಗೌಡ ಹಾಗು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಮಾಜಿ ಪ್ರಧಾನಿ ಇಂದು ನಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಅಧಿಕ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸೋಣ ಎಂದರು.
ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಸ್.ರುದ್ರಪ್ಪ, ಹೆಚ್.ಬಿ.ನಂಜೇಗೌಡ, ಡಿ.ಎಲ್.ಜಗದೀಶ್, ತುಮುಲ್ ಮಹಲಿಂಗಪ್ಪ, ಮುಖಂಡರಾದ ಗೀತಾ ರಾಜಣ್ಣ, ಚೌದ್ರಿ ರಂಗಪ್ಪ, ಚಂದ್ರೇಶ್, ಎನ್.ಆರ್.ಜಯರಾಮ್, ಸ್ವಾಮಿ, ಸುಬ್ರಹ್ಮಣಿ ಶ್ರೀಕಂಠೇಗೌಡ, ವಸಂತ್ ಕುಮಾರ್, ರಮೇಶ್ ಗೌಡ, ನಾಗೇಶ್, ಪ್ರಸನ್ನಕುಮಾರ್, ರಾಜೀವ್ ಕೃಷ್ಣಪ್ಪ, ಲಕ್ಷ್ಮೀಕಾಂತ್, ವಿಜಯ್ ಕುಮಾರ್, ಶಂಕರೇಗೌಡ, ಜಫ್ರುಲ್ಲಾಖಾನ್, ನಂಜೇಗೌಡ ಸೇರಿದಂತೆ ಅನೇಕ ಮುಖಂಡರುಗಳು ಹಾಗು ಸಾವಿರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು. ಇದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
