ದಾವಣಗೆರೆ:
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಆಲ್ ಯೂನಿಯನ್ಸ್ ಅಂಡ್ ಅಸೋಸಿಯೇಷನ್ಸ್ ಆಫ್ ಬಿಎಸ್ಸೆನ್ನೆಲ್ ನೇತೃತ್ವದಲ್ಲಿ ಬಿಎಸ್ಎನ್ಎಲ್ ನೌಕರರು ನಗರದಲ್ಲಿ ಸೋಮವಾರದಿಂದ ನಗರದಲ್ಲಿ ಮೂರು ದಿನಗಳ ಮುಷ್ಕರ ಆರಂಭಿಸಿದ್ದಾರೆ.
ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಮುಷ್ಕರ ನಡೆಸಿದ ಬಿಎಸ್ಎನ್ಎಲ್ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.2017ರ ಜನವರಿ 1ರಿಂದ ಅನ್ವಯವಾಗುವಂತೆ ನೂತನ ವೇತನ ಪರಿಷ್ಕರಣೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. 2017ರ ಜನವರಿ 1ರಿಂದ ನೌಕರರ ಪಿಂಚಣಿ ಪರಿಷ್ಕರಣೆಯನ್ನು ಜಾರಿಗೊಳಿಸಬೇಕು. 2ನೇ ವೇತನ ಪರಿಷ್ಕರಣೆಯ ಉಳಿದ ಬೇಡಿಕೆಗಳನ್ನೂ ಈಡೇರಿಸಬೇಕೆಂದು ಮುಷ್ಕರನಿರತ ನೌಕರರು ಆಗ್ರಹಿಸಿದರು.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ಗೆ 4ಜಿ ಸ್ಪೆಕ್ಟ್ರಂ ಅನ್ನು ಕೊಟ್ಟು, ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಲ್ಯಾಂಡ್ ಮ್ಯಾನೇಜ್ಮೆಂಟ್ ಪಾಲಿಸಿಯನ್ನು ಶೀಘ್ರವೇ ತೀರ್ಮಾನಿಸಬೇಕು. 2000ರಲ್ಲಿ ತೆಗೆದುಕೊಂಡ ಸಂಪುಟದ ನಿರ್ಧಾರದಂತೆ ಎಲ್ಲಾ ಆಸ್ತಿಯನ್ನೂ ಬಿಎಸ್ಎನ್ಎಲ್ಗೆ ವರ್ಗಾವಣೆ ಮಾಡಬೇಕು. ಬ್ಯಾಂಕ್ ಸಾಲ ಪಡೆಯಲು ಅನುಮತಿ ನೀಡಬೇಕು. ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಈರಣ್ಣ, ವಿಕ್ಟರ್, ಎಸ್. ಗೋಪಾಲನಾಯ್ಕ್, ಕಾಂತರಾಜ್, ಜೋಷಿ, ಆನಂದ, ಎಸ್.ಸುರೇಶ, ವಿ.ಷಣ್ಮುಖಪ್ಪ, ಎ.ವಿ.ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








