ಬೆಂಗಳೂರು
ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್ ಮಂಡಿಸಿದ 2019 – 20 ನೇ ಸಾಲಿನ ಆಯವ್ಯಯ ರೈತರು, ಬಡವರು, ಶ್ರಮಿಕರ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಜನಪರ ಬಜೆಟ್ ಮಂಡನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ವಿಜಯೋತ್ಸವ ಆಚರಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ. ಕೇಂದ್ರದ ಕ್ರಮದಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಸಾಲ ಮರುಪಾವತಿ ವಿಚಾರದಲ್ಲಿ ರೈತರಿಗೆ ವಿನಾಯಿತಿ ಸಿಗಲಿದೆ. ಹಾಗೂ ಎಲ್ಲಾ ಮಧ್ಯಮವರ್ಗ, ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ದೊರೆಯಲಿದೆ. ಮಧ್ಯಮ ವರ್ಗದ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಐತಿಹಾಸಿಕ ಬಜೆಟ್ ಇದಾಗಿದ್ದು, ದೇಶದ ಬಡವರ ಹಣ ಉಳಿತಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕರಿಗೂ ಸಹ ಅನುಕೂಲ ಕಲ್ಪಿಸಿದ್ದು, ಕಾರ್ಮಿಕರ ವೇತನ, ಗ್ರ್ಯಾಚುಟಿ ಹೆಚ್ಚಿಸಿ ಅಸಂಘಟಿತ ವಲಯದಲ್ಲಿ ಮಾಸಿಕ 3 ಸಾವಿರ ರೂ ಪಿಂಚಣಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಹೆರಿಗೆ ರಜೆ ಏರಿಕೆ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ದೊಡ್ಡ ಕೊಡುಗೆಯನ್ನು ಕೇಂದ್ರ ನೀಡಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಬಿಗಿ ನಿಲುವುಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬಡವರಿಗೆ ಇಷ್ಟು ದೊಡ್ಡ ಮಟ್ಟದ ಸಹಾಯವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಮುಖಂಡರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ. ಈ ಬಜೆಟ್ ಅನ್ನು ಸಿದ್ದರಾಮಯ್ಯ ಟೀಕೆ ಮಾಡಿದರೂ ಸಹ ದೇಶದ ಎಲ್ಲಾ ಆರ್ಥಿಕ ತಜ್ಞರು ಶ್ಲಾಘನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಅನಗತ್ಯ ಟೀಕೆ ಮಾಡುವುದನ್ನು ಬಿಡಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/10/BS-Yeddyurappa-hand.gif)