ಬೆಂಗಳೂರು
ಉದ್ಯಮಿಯೊಬ್ಬರ ಕಾರು ಗಾಜು ಒಡೆದು,ಅದರಲ್ಲಿದ್ದ ಲ್ಯಾಪ್ ಟಾಪ್, ಪಾಸ್ ಪೋರ್ಟ್ಗಳನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಬಸವನಗುಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಹುಬ್ಬಳ್ಳಿಯಿಂದ ಬಂದಿದ್ದ ಖಾಸಗಿ ಕಂಪನಿಯೊಂದರ ಸಿಇಒ ನವೀನ್ ಝಾ(41) ಅವರು ಗಾಂಧಿ ಬಜಾರ್ನ ರಾಘವೇಂದ್ರ ಸ್ವಾಮಿ ಮಠದ ಬಳಿ ಕಾರನ್ನು ನಿಲ್ಲಿಸಿ, ಶಾಪಿಂಗ್ಗೆ ಹೋಗಿ ಮರಳಿ ರಾತ್ರಿ 9.15ರ ವೇಳೆ ವಾಪಸ್ ಕಾರಿನ ಬಳಿ ಬಂದಾಗ ಕಾರಿನ ಕಿಟಕಿ ಗಾಜುಗಳನ್ನು ಒಡೆದು, ಕಾರಿನಲ್ಲಿಟ್ಟಿದ್ದ ಲ್ಯಾಪ್ ಟಾಪ್, ಪಾಸ್ ಪೋರ್ಟ್ ಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆಯಿಂದ ಸುಮಾರು 300 ಮೀಟರ್ ದೂರದಲ್ಲಿಯೇ ಕಾರನ್ನು ಪಾರ್ಕ್ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲಿಯೇ ಕಳ್ಳರು ಈ ದುಷ್ಕೃತ್ಯವೆಸಗಿದ್ದಾರೆ ಎಂದು ನವೀನ್ ತಿಳಿಸಿದ್ದಾರೆ.
ತಕ್ಷಣ ಪೊಲೀಸ್ ಠಾಣೆಗೆ ತೆರಳಿದ ನವೀನ್ ಝಾ, ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮಾರವನ್ನು ಪರಿಶೀಲನೆ ನಡೆಸಿರುವ ಪೊಲೀಸರಿಗೆ ನಾಲ್ಕರಿಂದ ಐದು ಜನರ ಯುವಕರ ಗುಂಪೊಂದು ಈ ಕೃತ್ಯ ನಡೆಸಿರುವುದು ಕಂಡುಬಂದಿದ್ದು ಅವರಿಗಾಗಿ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








