ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ : ಜೆಸಿಎಂ

ಬೆಂಗಳೂರು

     ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ಜಾತಿ-ಧರ್ಮದ ವಿರುದ್ಧವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

    ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಯ್ದೆಯೊಂದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಚರ್ಚೆ, ವಿವಾದವನ್ನು ಕಂಡಿರಲಿಲ್ಲ. ಭಾರತ ವಿಭಜನೆ ವೇಳೆ ಯಾರು ಸಂಕಷ್ಟಕ್ಕೆ ಸಿಲುಕಿ ಭಾರತಕ್ಕೆ ವಲಸೆ ಬಂದವರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆಯಷ್ಟೇ.

    ಸದ್ಯ ಇಂತಹ ಸುಮಾರು 30 ಸಾವಿರ ವಲಸಿಗರಿಗೆ ಪೌರತ್ವ ಕಲ್ಪಿಸಲಾಗುತ್ತಿದೆ. ಇದರಲ್ಲಿ ಜಾತಿ-ಧರ್ಮ ಪ್ರಶ್ನೆ ಇಲ್ಲ. ಕಾಯ್ದೆ, ಯಾವುದೇ ಧರ್ಮದ ವಿರುದ್ಧವೂ ಅಲ್ಲ. ಮೂರು ರಾಜ್ಯಗಳಲ್ಲಿ ಕಿರುಕುಳ, ಹಿಂಸೆಗೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಯಾವುದೇ ದಾಖಲೆಗಳು ಇಲ್ಲದೆ ಪೌರತ್ವ ನೀಡುವುದು ತಿದ್ದುಪಡಿಯ ಪ್ರಮುಖ ಅಂಶವಾಗಿದೆ. ವಲಸೆ ಬಂದಿರುವ ಎಲ್ಲರನ್ನೂ ಹೊರಗೆ ಕಳುಹಿಸಬೇಕು ಎಂದು ನಿರ್ಧಾರ ಆಗಿಲ್ಲ. ಸರ್ಕಾರ ಯಾವ ತಪ್ಪೂ ಮಾಡಿಲ್ಲ. ಪೌರತ್ವ ಕಾಯ್ದೆಯಲ್ಲಿನ ಕೆಲಸ ಸಮಸ್ಯೆ, ಗೊಂದಲಗಳನ್ನು ಬಗೆಹರಿಸಲು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

     ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಮಾತನಾಡಿ, ಭಾರತ ವಿಭಜನೆ ವೇಳೆ ಲಕ್ಷಾಂತರ ಜನರ ಮಾರಣಹೋಮ ನಡೆಯಿತು. ತೀವ್ರ ಹಿಂಸೆಗೆ ಒಳಗಾದ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿನ ಅಲ್ಪಸಂಖ್ಯಾತರಿಗೆ ಒಂದೇ ಆಯ್ಕೆ ಭಾರತವಾಗಿತ್ತು. ಬೇರೆ ದಾರಿ ಇಲ್ಲದೆ ಅಕ್ರಮವಾಗಿ ವಲಸೆ ಬಂದರು. ಇವರಲ್ಲಿ ಬಡವರು, ದೀನದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಜನರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು. ಇದು ಸರ್ಕಾರದ ಜವಾಬ್ದಾರಿಯೂ ಆಗಿದೆ. ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯವನ್ನು ಇಲ್ಲಿ ಸರಿಪಡಿಸಲಾಗಿದೆ. ಆದರೂ ಕೆಲವರು ಈ ಕುರಿತು ಗೊಂದಲ ಸೃಷ್ಟಿಸಿ, ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

    ಅಲ್ಪಸಂಖ್ಯಾತರಿಗೆ ಭಾರತದಲ್ಲಿ ನೀಡಿರುವಷ್ಟ ಸ್ಥಾನಮಾನ ವಿಶ್ವದ ಬೇರೆಲ್ಲೂ ನೀಡಿಲ್ಲ. ಎಲ್ಲ ಧರ್ಮಗಳನ್ನು ಗೌರವದಿಂದ ನೋಡುವುದು ಭಾರತದ ಸಂಸ್ಕೃತಿಯಾಗಿದ್ದು, ಇದು ಮುಂದುವರೆದುಕೊಂಡು ಬಂದಿದೆ. ಆದರೆ ಬೇರೆ ರಾಷ್ಟ್ರಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಜಾತ್ಯತೀಯತೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದನ್ನು ಎಲ್ಲರೂ ಅರಿಯಬೇಕಿದೆ ಎಂದು ಅಶ್ವಥ್‍ನಾರಾಯಣ್ ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link