ಬೆಂಗಳೂರು
ಭಗವದ್ಗೀತೆ ಓದಿನಿಂದ ಮಾರಕ ರೋಗ ಕ್ಯಾನ್ಸರ್ನಂತಹ ಮಾರಕ ರೋಗಗಳು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ.ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.
ಭಗವದ್ಗೀತೆಯೊಳಗೆ ಆಹಾರ ಕುರಿತು ಉಲ್ಲೇಖ ಮಾಡಲಾಗಿದೆ. ಇದರಿಂದ, ಕ್ಯಾನ್ಸರ್ ರೋಗವನ್ನು ಗುಣಪಡಿಸಿಕೊಳ್ಳ ಬಹುದಾಗಿದೆ ಎಲ್ಲರೂ ಭಗವದ್ಗೀತೆ ಓದುವಂತೆ ಆಗಬೇಕು.ಇನ್ನೂ, ಮಹಿಳೆಯರು ಮನೆಯಲ್ಲಿಯೇ ಅಡುಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಪ್ರಬುದ್ಧ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.ನನ್ನ ತಂದೆ ಬಾಬುರಾವ್ ದೇಶಮಾನೆ ಸ್ವಾತಂತ್ರ್ಯ ಹೋರಾಟಗಾರರು.
ತಾಯಿ ರತ್ನಮ್ಮ ಗುಲ್ಬರ್ಗಾದ ಕೊಳೆಗೇರಿಯಲ್ಲಿ ರಸ್ತೆ ಬದಿ ತರಕಾರಿ ಮಾರುತ್ತಿದ್ದರು. ನಾವು ಒಟ್ಟು ಎಂಟು ಮಂದಿ ಮಕ್ಕಳು. ಹಿಂದುಳಿದ ವರ್ಗಕ್ಕೆ ಸೇರಿದವರು ನಾವು. ಮನೆಯಲ್ಲಿ ಕಿತ್ತು ತಿನ್ನುವ ಬಡತನ.ನನಗೆ ಶಿಕ್ಷಕಿಯಾಗಬೇಕೆಂಬ ಆಸೆಯಿತ್ತು. ಆದರೆ ಅಪ್ಪನಿಗೆ ನಾನು ಸರ್ಜನ್ ಆಗಬೇಕೆಂಬ ಆಸೆ.
ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ನಾನು ಎಂಬಿಬಿಎಸ್ಗೆ ಪ್ರವೇಶ ಪಡೆಯುವ ವೇಳೆ 1980ರಲ್ಲಿ ಗುಲ್ಬರ್ಗದಲ್ಲಿ ತೀವ್ರ ಬರಗಾಲವಿತ್ತು. ನನ್ನ ಪ್ರವೇಶಕ್ಕೆ ಎಲ್ಲಿಯೂ ಹಣ ಸಿಗದಿದ್ದ ಸಂದರ್ಭದಲ್ಲಿ ನನ್ನ ತಾಯಿ ತಮ್ಮ ಮಂಗಳಸೂತ್ರವನ್ನೇ ಮಾರಿ ನನ್ನನ್ನು ಎಂಬಿಬಿಎಸ್ಗೆ ಸೇರಿಸಿದರು ಎಂದು ತಾಯಿಯ ತ್ಯಾಗವನ್ನು ನೆನೆದರು.
ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಯಾವ ರೋಗಿ ಬಂದರೂ ಎಲ್ಲರಿಗೂ ಬೆಡ್ ಸಿಗುವವರೆಗೂ ಅವರೊಂದಿಗೆ ನಿಲ್ಲುತ್ತಿದ್ದೆ. ಇದೇ ನನ್ನನ್ನು ಮತ್ತು ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಬೆಳೆಸಲು ಸಹಕಾರಿಯಾಯಿತು ಎಂದು ಅವರು ಹೇಳಿದರು.
ವೈದ್ಯೆ ಪದ್ಮಾ ಪ್ರಕಾಶ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.
ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ. ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ವಕೀಲರಾದ ಸರೋಜಿನಿ ಮುತ್ತಣ್ಣ, ಅನಿತಾ, ಬಿಜೆಪಿ ಮಹಿಳಾ ಘಟಕ ಕಾರ್ಯದರ್ಶಿಗಳಾದ ಕವಿತಾ ಜೈನ್, ಲತಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
