ಪಾವಗಡ
ಯಾವುದೇ ದಾಖಲಾತಿಗಳಿಲ್ಲದೆ ಚುನಾವಣಾ ಗುರ್ತಿನ ಚೀಟಿಗಳನ್ನು ಒಂದು ವಾರ್ಡ್ನಿಂದ ಇನ್ನೊಂದು ವಾರ್ಡ್ಗೆ ಬದಲಾಯಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಿಎಲ್ಓಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಜರುಗಿದೆ.
ತಾ. ಜೆಡಿಎಸ್ ಘಟಕದ ಅಧ್ಯಕ್ಷ ಗುಂಡಾರ್ಲಹಳ್ಳಿ ಬಲರಾಮರೆಡ್ಡಿ ಮಾತನಾಡಿ, ಪಾವಗಡ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡುಗಳಿದ್ದು, ವಾರ್ಡ್ಗೆ ಸಂಬಂಧಿಸಿದ ಬಿಎಲ್ಓ ಗಳು ರಾಜಕೀಯ ಪ್ರೇರಿತವಾಗಿ ಸ್ಥಳ ಪರಿಶೀಲನೆ ನಡೆಸದೆ, ಚುನಾವಣಾ ಗುರ್ತಿನ ಚೀಟಿಯಲ್ಲಿ ಯಾವುದೇ ದಾಖಲಾತಿಗಳಿಲ್ಲದೆ, ಒಂದು ವಾರ್ಡ್ನಿಂದ ಇನ್ನೊಂದು ವಾರ್ಡ್ಗೆ ಬದಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಕೂಡಲೆ ಈಗಾಗಲೇ ಬದಲಾಯಿಸಿರುವುದನ್ನು ರದ್ದು ಪಡಿಸಿ, ಸ್ಥಳ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುರಸಭಾಧ್ಯಕ್ಷೆ ಸುಮಾ ಅನಿಲ್ ಮಾತನಾಡಿ, ಗುರ್ತಿನ ಚೀಟಿಗಳನ್ನು ವಾರ್ಡುಗಳಿಂದ ವಾರ್ಡಿಗೆ ಬದಲಾಯಿಸುತ್ತಿರುವುದನ್ನು ಖಂಡಿಸುತ್ತೇನೆ. ತಹಸೀಲ್ದಾರ್ರವರು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಬದಲಾವಣೆ ಮಾಡುತ್ತಿರುವ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ಕಚೆರಿ ಮುಂಭಾಗ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿಯನ್ನು ಗ್ರೇಡ್- 2 ತಹಸೀಲ್ದಾರ್ ಶಿವಾನಂದರೆಡ್ಡಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ವಸಂತ್ ಕುಮಾರ್, ಆರ್.ಎಚ್.ಗೋಪಾಲಕೃಷ್ಣ, ನಾಗೇಂದ್ರ, ದಾದಲೂರಪ್ಪ, ವಕ್ತಾರ ಅಕ್ಕಲಪ್ಪನಾಯ್ಡು, ಮುಖಂಡರಾದ ಪ್ರಭು, ಗುಟ್ಟಹಳ್ಳಿಮಣಿ, ಪಾಳ್ಳೆಗಾರಲೋಕೇಶ್, ಶಾಂತ್ ಕುಮಾರ್, ಗೊರ್ತಿನಾಗರಾಜ್, ಅಂಜನ್ತಿಮ್ಮರಾಜ್, ಗೇಟ್ಕುಮಾರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ