ನವದೆಹಲಿ:
ಯಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈಯ 7 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ.ಡಿಎಚ್ ಎಲ್ಎಫ್ ನಿಂದ ಯಸ್ ಬ್ಯಾಂಕ್ ನ ಸಹ ಸಂಸ್ಥಾಪಕ ರಾಣಾ ಕಪೂರ್ ಸುಮಾರು 600 ಕೋಟಿ ರೂಪಾಯಿಗಳಷ್ಟು ಲಂಚ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಇಂದು ಶೋಧಕಾರ್ಯ ನಡೆದಿದೆ. ಮುಂಬೈಯಲ್ಲಿರುವ ರಾಣಾ ಕಪೂರ್ ನಿವಾಸ ಮತ್ತು ಕಚೇರಿ ಆವರಣಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಡಿಎಚ್ಎಲ್ಎಫ್ ಗೆ ಯಸ್ ಬ್ಯಾಂಕ್ ನ ಮೂಲಕ ಹಣಕಾಸು ನೆರವು ಒದಗಿಸಲು ಅದರ ಪ್ರವರ್ತಕ ಕಪಿಲ್ ವಾದ್ವಾನ್ ಜೊತೆಗೆ ರಾಣಾ ಕಪೂರ್ ಕ್ರಿಮಿನಲ್ ಪಿತೂರಿ ನಡೆಸಿ ತನ್ನ ಮತ್ತು ತನ್ನ ಕುಟುಂಬಸ್ಥರಿಗೆ ಅನುಕೂಲ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸಿಬಿಐಯವರು ಸಲ್ಲಿಸಿರುವ ಎಫ್ಐಆರ್ ನಲ್ಲಿ 2018ರ ಏಪ್ರಿಲ್ ನಿಂದ ಜೂನ್ ಮಧ್ಯೆ ಹಗರಣ ನಡೆಯಲು ಆರಂಭವಾಗಿದ್ದು ಈ ಸಮಯದಲ್ಲಿ ದೇವನ್ ಹೌಸಿಂಗ್ ಫೈನಾನ್ಷಿಯಲ್ ಕಾರ್ಪೊರೇಷನ್ ಲಿ.(ಡಿಎಚ್ಎಫ್ಎಲ್) ನಲ್ಲಿ ಯಸ್ ಬ್ಯಾಂಕ್ 3,700 ಕೋಟಿ ರೂಪಾಯಿಗಳನ್ನು ಅಲ್ಪಾವಧಿಗೆ ಹೂಡಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ವದವನ್ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಡಾಲ್ಟ್ ಅರ್ಬನ್ ವೆಂಚರ್ಸ್(ಇಂಡಿಯಾ)ಪ್ರೈ.ಲಿ ಮೂಲಕ ಸಾಲದ ರೂಪದಲ್ಲಿ 600 ಕೋಟಿ ರೂಪಾಯಿ ಲಂಚ ನೀಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
