ಬೆಂಗಳೂರು
ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಡಾ.ಶಿವಕುಮಾರ ಶ್ರೀಗಳಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ, ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮ ಸುಧೀರ್ಘ ಜೀವಿತಾವಧಿಯಲ್ಲಿ ಅವರು ಸಲ್ಲಿಸಿದ ಸಮಾಜ ಸೇವೆಗೆ ಸ್ವಯಂ ಪ್ರೇರಿತವಾಗಿ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವ ಸಲ್ಲಿಸಬೇಕಿತ್ತು.ಆದರೆ ರಾಜ್ಯದ ಬಗ್ಗೆ ಕೇಂದ್ರ ಅಸಡ್ಡೆಯ ಧೋರಣೆ ಮುಂದುವರೆಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,ಸ್ವಾತಂತ್ರ್ಯಪೂರ್ವದಿಂದಲೂ ಸರ್ಕಾರ ಮಾಡಲಾರದ ಕೆಲಸವನ್ನು ತಮ್ಮ ಸೇವಾ ಸಂಸ್ಥೆಗಳ ಮೂಲಕ ಅಕ್ಷರ ಜಾಗೃತಿ ಮೂಡಿಸಿ, ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ನೀಡಿ ಈ ಭಾಗವನ್ನು ಬೆಳಗಿದ 111ವರ್ಷಗಳ ಪರಮಪೂಜ್ಯರ ಸೇವೆಯನ್ನು ಅಪಮಾನಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸರ್ಕಾರ ಈ ದೇಶದ ಅತ್ಯುನ್ನತ “ಭಾರತ ರತ್ನ ಪ್ರಶಸ್ತಿಯನ್ನು ಅಪಮೌಲ್ಯಕ್ಕೆ ಈಡು ಮಾಡಿದೆ ಎಂದು ದೂರಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡಬೇಕೆಂದು ಕಾಲ-ಕಾಲಕ್ಕೆ ವಿವಿಧ ವೇದಿಕೆಗಳಲ್ಲಿ ರಾಜಕಾರಣಿಗಳು ಪಕ್ಷಾತೀತವಾಗಿ, ವಿವಿಧ ಮಠಾಧೀಶರು, ಬುದ್ದಿಜೀವಿಗಳು ವಿನಂತಿಸಿಕೊಂಡಿದ್ದಾರೆ. ಆದರೆ ನಿನ್ನೆ ಪ್ರಕಟಿಸಿದ ಭಾರತ ರತ್ನ ಪ್ರಶಸ್ತಿ ಪಟ್ಟಿಯಲ್ಲಿ ಪೂಜ್ಯಶ್ರೀಗಳ ಹೆಸರಿಲ್ಲದಿರುವುದು ಇಡೀ ನಾಡಿಗೆ ದಿಗಿಲು ಬಡಿದಂತಾಗಿದೆ ಎಂದು ಹೇಳಿಕೆಯಲ್ಲಿ ಗೃಹ ಸಚಿವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ