ಕೇಂದ್ರದ ಅಘೋಷಿತ ತುರ್ತು ಪರಿಸ್ಥಿತಿಗೆ ದೊಡ್ಡ ಬೆಲೆ ತೆರಬೇಕಾದೀತು : ಸಿದ್ದರಾಮಯ್ಯ

ಬೆಂಗಳೂರು

     ದೇಶದಲ್ಲಿ ಬಹಿರಂಗವಾಗಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಶ್ರೀಮತಿ ಇಂದಿರಾಗಾಂಧಿ ಬೆಲೆ ತೆತ್ತಿದ್ದಾರೆ.ಈಗ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ,ಎನ್‍ಆರ್‍ಸಿ ಮೂಲಕ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದು ಇದಕ್ಕಾಗಿ ದೊಡ್ಡ ಮಟ್ಟದ ಬೆಲೆ ತೆರಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

      ವಿಧಾನಸಭೆ ಕಲಾಪದಲ್ಲಿಂದು ಭಾಗವಹಿಸಿ ನಿಯಮ 60 ರ ಅಡಿ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿ ಮಾತನಾಡಿದ ಅವರು,ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲು ಏನು ಕಾರಣ?ಯಾಕಾಗಿ ಅವರು ಈ ನಿರ್ಧಾರಕ್ಕೆ ಬಂದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.ಆದರೆ ತುರ್ತು ಪರಿಸ್ಥಿತಿ ಹೇರಿದ ಪರಿಣಾಮವಾಗಿ ಇಂದಿರಾಗಾಂಧಿ ಬೆಲೆ ತೆತ್ತರು,ಆದರೆ ಮುಂದೆ ಅದ್ಧೂರಿಯಾಗಿ ಗೆಲುವು ಗಳಿಸಿ ಪ್ರಧಾನಿಯಾದರು ಎಂದರು.

      ಅವತ್ತು ತುರ್ತು ಸ್ಥಿತಿಯನ್ನು ವಿರೋಧಿಸಿ ನಾನು ಜೈಲಿಗೆ ಹೋಗಿದ್ದೆ ಎಂದವರು ಹೇಳಿದಾಗ ಮೇಲೆದ್ದು ನಿಂತ ಸಚಿವ ಈಶ್ವರಪ್ಪ ಮತ್ತಿತರರು,ವಾಕ್ ಸ್ವಾತಂತ್ರ್ಯ,ಪತ್ರಿಕಾಸ್ವಾತಂತ್ರ್ಯದ ಹರಣವನ್ನು ವಿರೋಧಿಸಿ ನಾವೂ ಜೈಲಿಗೆ ಹೋಗಿದ್ದೆವು.ನಾವೂ ದೇಶಭಕ್ತರು,ದೇಶ ವಿರೋಧಿಗಳಲ್ಲ ಎಂದಾಗ ಸಿದ್ಧರಾಮಯ್ಯ ಕೆಂಡಾಮಂಡಲವಾದರು.

     ಈ ದೇಶದ ನೂರಾ ಮೂವತ್ತೈದು ಕೋಟಿ ಜನರೂ ದೇಶಭಕ್ತರೇ.ಅದನ್ನು ನೀವೇನೂ ಗುತ್ತಿಗೆಗೆ ತೆಗೆದುಕೊಂಡಿಲ್ಲ ಎಂದು ಗುಡುಗಿದರಲ್ಲದೆ,ಬಹಿರಂಗ ತುರ್ತು ಸ್ಥಿತಿಗೂ,ಅಘೋಷಿತ ತುರ್ತು ಸ್ಥಿತಿಗೂ ಇರುವ ಅಂತರವನ್ನು ಗಮನಿಸಿ ಎಂದು ಟೀಕಿಸಿದರು.
ಇಂದಿರಾಗಾಂಧಿ ಅವರೇನೂ ಅಘೋಷಿತ ತುರ್ತು ಸ್ಥಿತಿ ಹೇರಿರಲಿಲ್ಲ.ಬಹಿರಂಗವಾಗಿಯೇ ತುರ್ತು ಸ್ಥಿತಿ ಹೇರಿದ್ದರು.ಆದರೆ ಈಗ ಇರುವುದು ಅಘೋಷಿತ ತುರ್ತು ಸ್ಥಿತಿ.ಸಿಎಎ,ಎನ್‍ಆರ್‍ಸಿ ಮೂಲಕ ಹೇರಿರುವ ಈ ಅಘೋಷಿತ ತುರ್ತು ಸ್ಥಿತಿಯ ವಿರುದ್ಚ ಇಡೀ ದೇಶ ಹೋರಾಡುತ್ತಿದೆ.ಯಾವುದೋ ಒಂದು ವರ್ಗ ಸಿಎಎ,ಎನ್‍ಆರ್‍ಸಿಯನ್ನು ವಿರೋಧಿಸುತ್ತಿಲ್ಲ.ಬದಲಿಗೆ ಎಲ್ಲ ವರ್ಗಗಳು,ಮಹಿಳೆಯರು,ವಿದ್ಯಾರ್ಥಿಗಳು ,ಬುದ್ಧಿಜೀವಿಗಳು ಸೇರಿದಂತೆ ಎಲ್ಲರೂ ವಿರೋಧಿಸುತ್ತಿದ್ದಾರೆ.

    ಹೀಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ,ಎನ್‍ಆರ್‍ಸಿ ಕಾಯ್ದೆಯ ವಿರುದ್ದ ಪ್ರತಿಭಟಿಸುವುದು ತಪ್ಪೇನಲ್ಲ.ಆದರೆ ಇಲ್ಲಿ ಪ್ರತಿಭಟಿಸಿದವರ ವಿರುದ್ಧ ರಾಜದ್ರೋಹದ ಆರೋಪ ಹೊರಿಸಿ ಬಂಧಿಸಲಾಗುತ್ತಿದೆ.ಇದನ್ನು ಕೇಂದ್ರ ಸರ್ಕಾರವೂ ಮಾಡುವಂತಿಲ್ಲ.ರಾಜ್ಯ ಸರ್ಕಾರವೂ ಮಾಡುವಂತಿಲ್ಲ.ಸಂವಿಧಾನವೂ ಮಾಡುವಂತಿಲ್ಲ ಎಂದರು.

      ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತಲ್ಲದೆ ಪಾಕಿಸ್ತಾನದ ಪರವಾಗಿ ಮಾತನಾಡುವವರು,ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರ ಬಗ್ಗೆ ಏರಿದ ಧ್ವನಿಯಲ್ಲಿ ಕಚ್ಚಾಟ ನಡೆಯಿತು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು,ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿರುವಾಗ ಬೇರೆಯವರು ಮಾತನಾಡಬೇಡಿ ಎಂದಾಗ ಅವರ ಮಾತನ್ನು ಪ್ರಶಂಸಿಸಿದ ಸಿದ್ಧರಾಮಯ್ಯ:ಇತಿಹಾಸದ ಬಗ್ಗೆ ಅನುಭವ ಇರುವವರು ಮಾತ್ರ ಹೀಗೆ ಮಾತನಾಡಲು ಸಾಧ್ಯ.ಉಳಿದವರಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ ಎಂದು ಆಡಳಿತ ಪಕ್ಷದ ಸಚಿವರು,ಶಾಸಕರನ್ನು ಕುಟುಕಿದರು.

      ತದನಂತರ ತಮ್ಮ ಮಾತನ್ನು ಮುಂದುವರಿಸಿ,ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು.ಆ ಹಕ್ಕನ್ನು ಕಿತ್ತುಕೊಳ್ಳುವುದು ನ್ಯಾಯಾಲಯದಿಂದಾಗಲೀ,ಸಂಸತ್ತಿನಿಂದಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟು,ಪ್ರತಿಭಟನೆಯ ಹಕ್ಕನ್ನು ಯಾರೂ ಕಿತ್ತುಕೊಳ್ಳಲಾಗದು.ಪ್ರತಿಭಟನೆ ಮಾಡುವುದು ಸಂವಿಧಾನಬದ್ಧ ಹಕ್ಕು ಎಂದು ಹೇಳಿದೆ.ಈಗಲೂ ಅದು ಅನ್ವಯವಾಗುತ್ತದೆ ಎಂದರು.

      ಆದರೆ ಮಂಗಳೂರು,ಬೀದರ್ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸಿಎಎ,ಎನ್‍ಆರ್‍ಸಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲೀಸರು ಪ್ರತಿಭಟನಾಕಾರರು ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ.ನಾವು ಪೋಲೀಸರನ್ನು ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಗಾಗಿ ಇಟ್ಟುಕೊಂಡಿದ್ದೇವೆಯೇ ಹೊರತು ಸರ್ಕಾರದ ಏಜೆಂಟರನ್ನಾಗಿ ಇಟ್ಟುಕೊಂಡಿಲ್ಲ.ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರವೂ ಸರ್ಕಾರಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಪ್ರತಿಭಟನೆ ನಡೆಸಲು ಮಂಗಳೂರಿನಲ್ಲಿ ಪರವಾನಗಿ ನೀಡಿ ಇದ್ದಕ್ಕಿದ್ದಂತೆ 144 ಸೆಕ್ಷನ್ ಪ್ರಕಾರ ನಿಷೇದಾಜ್ಞೆ ಹೇರಲಾಯಿತು.ಇದು ಸರಿಯಲ್ಲ.ಒಂದು ಕಡೆ ಪ್ರತಿಭಟನೆಗೆ ಪರವಾನಗಿ ನೀಡುವುದು.ನಂತರ ನಿಷೇದಾಜ್ಞೆ ಹೇರುವುದು ಯಾವ ನೀತಿ?ಎಂದು ಅವರು ಪ್ರಶ್ನಿಸಿದರು.ಈ ನಿಷೇದಾಜ್ಞೆಯನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಲಾಯಿತು.ಆದರೆ ಮಂಗಳೂರು ಹೊರತುಪಡಿಸಿದಂತೆ ಬೆಂಗಳೂರು,ಗುಲ್ಬರ್ಗ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯಿತು.ಆದರೆ ಅಲ್ಲೆಲ್ಲೂ ಅಶಾಂತಿ ಸೃಷ್ಟಿಯಾಗಲಿಲ್ಲ.ಆದರೆ ಮಂಗಳೂರಿನಲ್ಲಿ ಪೋಲೀಸರು ವಿನಾಕಾರಣ ಲಾಠಿ ಚಾರ್ಜ್ ಮಾಡಿದ ಕ್ರಮದಿಂದ ಸಿಟ್ಟಿಗೆದ್ದ ಜನ ತಿರುಗಿ ಬಿದ್ದರು ಎಂದರು.

      ಪೋಲೀಸರು ಹೀಗೆ ಲಾಠಿ ಚಾರ್ಜ್ ಮಾಡುವ ಮುನ್ನ ಕನಿಷ್ಟ ಯೋಚನೆ ಮಾಡಬೇಕಿತ್ತು.ಎಂತಹ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಬೇಕು ಎಂಬ ಬಗ್ಗೆ ನ್ಯಾಯಾಲಯಗಳ ಹಲವು ಆದೇಶಗಳಿವೆ.ಇದನ್ನು ಗಮನಿಸದೆ ಮಂಗಳೂರು ಪೋಲೀಸರು ಮುಂದುವರಿದ ಪರಿಣಾಮವಾಗಿ ಅಹಿತಕರ ಘಟನೆ ನಡೆಯಿತು.

     ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದಾಗ ನಿಷೇದಾಜ್ಞೆ ಹೇರಬಾರದು.ಇದು ನ್ಯಾಯಯುತ ಮಾರ್ಗವಲ್ಲ.ಇಂತಹ ಅನೀತಿಯುತ ಮಾರ್ಗವನ್ನು ಪೋಲೀಸರು ಯಾಕೆ ಹಿಡಿದರು?ಎಂದು ಪ್ರಶ್ನಿಸಿದರು.ಇದರಿಂದಾಗಿ ಜನ ಆಕ್ರೋಶಗೊಂಡರು.ಈ ಸಂದರ್ಭದಲ್ಲಿ ಪೋಲೀಸರು ನಡೆಸಿದ ಗೋಲಿಬಾರ್‍ಗೆ ಅಮಾಯಕರಾದ ಜಲೀಲ್,ನೌಶೀದ್ ಎಂಬುವವರು ತೀರಿಕೊಂಡರು ಎಂದು ವಿಷಾದ ವ್ಯಕ್ತಪಡಿಸಿದರು.

    ಈ ಕುರಿತು ಪರಿಶೀಲನೆ ನಡೆಸಲು ನಾನು ಮುಂದಾದರೆ ನನಗೆ ಮಂಗಳೂರಿಗೆ ಹೋಗಲು ಅನುಮತಿ ನೀಡಲಿಲ್ಲ.ಹಾಗೆ ಹೋಗುವುದು ನನ್ನ ಹಕ್ಕಾಗಿತ್ತು.ಆದರೆ ಇವರು ನನ್ನ ಹಕ್ಕನ್ನು ಮೊಟಕು ಮಾಡಿದರು.ಹಾಗೆಯೇ ನಮ್ಮ ಪಕ್ಷದ ನಾಯಕರಾದ ರಮೇಶ್ ಕುಮಾರ್ ಮತ್ತಿತರರು ಹೋದರೆ ಅವರಿಗೆ ಹತ್ತಿರ ಸುಳಿಯಲು ಬಿಡಲಿಲ್ಲ.ಸಾಲದೆಂಬಂತೆ ನಮಗೆ ನೋಟೀಸು ಕೂಡಾ ಕೊಟ್ಟರು ಎಂದು ವಿಷಾದಿಸಿದರು.

     ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧ ಒಂದು ನಾಟಕ ನಡೆಯುತ್ತದೆ.ಹನ್ನೊಂದು ವರ್ಷದ ಬಾಲಕಿಯೊಬ್ಬಳು ಅದರಲ್ಲಿ ಪಾತ್ರ ವಹಿಸಿ:ಈ ಕಾಯ್ದೆ ಜಾರಿಗೆ ಬಂದರೆ ನಮ್ಮ ತಾತ,ಮುತ್ತಾತಂದಿರ ದಾಖಲೆ ಕೇಳುತ್ತಾರೆ.ಆದರೆ ಅವರೀಗ ಸತ್ತು ಸಮಾಧಿಯಲ್ಲಿದ್ದಾರೆ.ಹೀಗಾಗಿ ಯಾರಾದರೂ ಅವರ ದಾಖಲೆ ಕೇಳಲು ಬಂದರೆ ನಾನು ದಾಖಲೆ ಕೊಡುವುದಿಲ್ಲ.ಬದಲಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎನ್ನುತ್ತಾಳೆ.

      ಅಷ್ಟಕ್ಕೆ ಸರ್ಕಾರ ಇದನ್ನು ರಾಜದ್ರೋಹದ ಪ್ರಕರಣವನ್ನು ದಾಖಲಿಸಿ ಆ ನಾಟಕ ಮಾಡಿಸಿದ ಶಾಲೆಯ ಮುಖ್ಯೋಪಾಧ್ಯಯರು ಮತ್ತು ಆ ಹುಡುಗಿಯ ತಾಯಿಯನ್ನು ಜೈಲಿಗೆ ಕಳಿಸುತ್ತದೆ.ಇದು ಸರಿಯಲ್ಲ.ಹಿಂದೆ ಹಲವು ನಾಟಕಗಳಲ್ಲಿ ಸರ್ಕಾರವನ್ನು ಟೀಕೆ ಮಾಡುವ ಕೆಲಸ ನಡೆಯುತ್ತಿತ್ತು.ಅದರಲ್ಲೂ ಕಟು ಟೀಕೆಗಳು ಇರುತ್ತಿದ್ದವು.ಆದರೆ ಈ ವಿಷಯದಲ್ಲಿ ಯಾವ ಸರ್ಕಾರಗಳೂ ಸಂಬಂಧಪಟ್ಟವರ ಮೇಲೆ ಮೊಕದ್ದಮೆ ಹೂಡಲಿಲ್ಲ ಎಂದರು.

      ಸಿಎಎ,ಎನ್‍ಆರ್‍ಸಿ ವಿರೋಧಿಸಿದರು ಎಂಬ ಕಾರಣಕ್ಕಾಗಿ ಮಾಜಿ ಸಚಿವ ಖಾದರ್ ಮೇಲೆ ಕೇಸ್,ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಯಾರೋ ಭಿತ್ತಿ ಚಿತ್ರ ಹಿಡಿದುಕೊಂಡಿದ್ದರು ಎಂದು ಕೇಸ್ ಹಾಕಿಸಿದರು.ಇದೆಲ್ಲದರ ಹಿಂದೆ ಬಿಜೆಪಿಯವರ ಕೈವಾಡ ಇದೆ.ಹೀಗಾಗಿ ಇದರ ಕುರಿತು ಕೂಲಂಕುಶವಾಗಿ ಚರ್ಚಿಸಬೇಕು ಎಂದು ಹೇಳಿದರು.

     ಆದರೆ ಸಂಸತ್ತಿನಲ್ಲಿ ಅಂಗೀಕಾರವಾದ ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆಯ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಅಡಿ ಚರ್ಚಿಸಲು ಬರುವುದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರತಿಯುತ್ತರ ನೀಡಿದಾಗ,ಈ ವಿಷಯದ ಬಗ್ಗೆ ನಿಯಮ 69 ರಡಿ ಚರ್ಚಿಸಲು ಸಭಾಧ್ಯಕ್ಷರು ಅನುಮತಿ ನೀಡಿದರು.

    ಆದರೆ ಚರ್ಚೆಗೆ ತಕ್ಷಣವೇ ಅನುಮತಿ ನೀಡಬೇಕೆಂಬ ಕಾಂಗ್ರೆಸ್ ಬೇಡಿಕೆಯನ್ನು ಸಭಾಧ್ಯಕ್ಷರು ಈಡೇರಿಸಲಿಲ್ಲ. ಬುಧವಾರ ಮಧ್ಯಾಹ್ನ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು. ಇದನ್ನು ಪ್ರತಿಘಟಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap