ಅಮರಾವತಿ
ತಮ್ಮ ಅಚ್ಚುಮೆಚ್ಚಿನ “ಪ್ರಜಾವೇದಿಕಾ ಸಭಾಂಗಣ” ವನ್ನು ಆಡಳಿತಾರೂಡ ವೈಎಸ್ ಆರ್ ಆರ್ ಸಿ ನೇತೃತ್ವದ ರಾಜ್ಯ ಸರ್ಕಾರ ದ್ವಂಸಗೊಳಿಸಿದ ಬೆನ್ನಲ್ಲೇ ಗುಂಟೂರು ಜಿಲ್ಲೆಯ ಉಂದವಳ್ಳಿಯ ಕೃಷ್ಣಾ ನದಿ ತೀರದಲ್ಲಿರುವ ತಮ್ಮ ನಿವಾಸ ತೆರವುಗೊಳಿಸಲು ವಿಧಾನಸಭೆಯ ವಿರೋಧ ಪಕ್ಷದ ನಾಯುಕ , ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಚಿಂತನೆ ನಡೆಸಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ತೆಲುಗುದೇಶಂ ಪಕ್ಷ ಹಿರಿಯ ನಾಯಕರೊಂದಿಗೆ ಈ ಸಂಬಂಧ ನಾಯ್ಡು ಸಮಾಲೋಚನೆ ನಡೆಸಿದರು.
ರಾಜ್ಯ ಟಿಡಿಪಿ ಅಧ್ಯಕ್ಷ ಕೆ. ಕಲಾ ವೆಂಕಟರಾವ್, ಮಾಜಿ ಸಚಿವ ದೇವಿನೇನಿ ಉಮಾಮಹೇಶ್ವರರಾವ್, ಸೋಮಿರೆಡ್ಡಿ ಚಂದ್ರಮೋಹನ್ ರೆಡ್ಡಿ ಹಾಗೂ ಮೇಲ್ಮನೆ ಸದಸ್ಯ ಬುದ್ದಾ ವೆಂಕಣ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ “ನಿವಾಸವ”ವನ್ನು ಸರ್ಕಾರ ಕೆಡವಲು ಮುಂದಾಗುವ ಮುನ್ನ ನಿವಾಸವನ್ನು ತೆರವುಗೊಳಿ ಸುವುದು ಬುದ್ದಿವಂತಿಕೆಯ ನಡೆ ಎಂದು ಚಂದ್ರಬಾಬು ನಾಯ್ಡು ಅವರಿಗೆ ಕೆಲ ಹಿರಿಯ ನಾಯಕರು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ತಮ್ಮ ನಿವಾಸದ ನನಿಹದಲ್ಲಿದ್ದ ಪ್ರಜಾವೇದಿಕಾ ಸಮ್ಮೇಳನ ಸಭಾಂಗಣವನ್ನು ರಾಜ್ಯ ಸರ್ಕಾರ ಬುಧವಾರ ಬೆಳಗಿನ ಜಾವ ಕೆಡವಿರುವ ಹಿನ್ನಲೆಯಲ್ಲಿ ನದಿ ತೀರದಲ್ಲಿರುವ ಚಂದ್ರಬಾಬು ನಾಯ್ಡು ನಿವಾಸ ಭವಿಷ್ಯ ಕುರಿತು ಟಿಡಿಪಿ ನಾಯಕರು ಸಭೆಯಲ್ಲಿ ಚರ್ಚೆ ನಡೆಸಿದರು.
ಕೃಷ್ಣಾ ನದಿಯಿಂದ ಕೇವಲ 50 ಮೀಟರ್ ದೂರದಲ್ಲಿ ಚಂದ್ರಬಾಬು ನಾಯ್ಡು ಅವರು ನಿವಾಸ ನಿರ್ಮಿಸಿಕೊಂಡಿದ್ದು, ಇದು ನದಿ ಸಂರಕ್ಷಣೆಯ ನಿಯಮಗಳಿಗೆ ವಿರುದ್ದವಾಗಿದೆ.ಪ್ರಸ್ತುತ ಚಂದ್ರಬಾಬು ನಾಯ್ಡು ಅವರು ವಾಸವಾಗಿರುವ ಮನೆ ಲಿಂಗಮನೇನಿ ನಿರ್ಮಾಣ ಸಂಸ್ಥೆಗೆ ಸೇರಿದ್ದಾಗಿದೆ. ಕಳೆದ ಮೂರು ವರ್ಷಗಳಿಂದ ಈ ಮನೆಯಲ್ಲಿ ಬಾಬು ವಾಸವಾಗಿದ್ದಾರೆ.
ಈಗಾಗಲೇ ನಗರ ಹೃದಯ ಭಾಗದಲ್ಲಿ ಪಂಚತಾರ ಹೋಟೆಲ್ ಸಮೀಪ ಮನೆಯೊಂದನ್ನು ಚಂದ್ರಬಾಬು ನಾಯ್ಡು ಅವರಿಗೆ ಹುಡುಕಲಾಗಿದೆ ಎಂದು ಮೂಲಗಳು ಹೇಳಿವೆ.
ತಮ್ಮ ನಾಯಕ ಚಂದ್ರ ಬಾಬು ನಾಯ್ಡು ಅವರಿಗೆ ಪಕ್ಷದ ನಾಯಕರು ಹಲವು ಮನೆಗಳನ್ನು ಹುಡುಕಿದ್ದು, ಈ ಪೈಕಿ ಒಂದು ಮನೆ ಅಮರಾವತಿ ನಗರ ಹೊರವಲಯದಲ್ಲಿ, ಮತ್ತೊಂದು ನಗರದೊಳಗೆ ಇದೆ ಎಂದು ಮೂಲಗಳು ಹೇಳಿವೆ ಚಂದ್ರಬಾಬು ನಾಯ್ಡು ವಾಸವಾಗಿರುವ ಮನೆ ಎಲ್ಲಾ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಲಾಗಿದ್ದು ಅದನ್ನು ಸರ್ಕಾರ ಖಂಡಿತವಾಗಿ ಕೆಡವಲಿದೆ ಎಂದು ವೈಎಸ್ ಆರ್ ಪಿಸಿ ಶಾಸಕ ಅಲ್ಲಾ ರಾಮ ಕೃಷ್ಣ ರೆಡ್ಡಿ ಸ್ಪಷ್ಟಪಡಿಸಿರುರುವದನ್ನು ಇಲ್ಲಿ ಗಮನಿಸಬಹುದಾಗಿದೆ