ಹವಾಗುಣ ಅನುಗುಣಕ್ಕೆ ಕೃಷಿ ಪದ್ಧತಿ ಬದಲಾಗಬೇಕು : ವಿನೊತ್ ಪ್ರಿಯಾ

ಚಿತ್ರದುರ್ಗ  :
     ಚಿತ್ರದುರ್ಗ ಜಿಲ್ಲೆಯ ಮಳೆಯ ಪ್ರಮಾಣ ಆಧರಿಸಿ, ಇಲ್ಲಿನ ಹವಾಗುಣಕ್ಕೆ ಅನುಗುಣವಾಗಿ ರೈತರು ಕೃಷಿ ಚಟುವಟಿಕೆ ಕೈಗೊಂಡು, ಆರ್ಥಿಕವಾಗಿ ಸಬಲರಾಗಲು ಕೃಷಿ ಹಾಗೂ ತೋಟಗಾರಿಕೆ ತಜ್ಞರು ಅಧ್ಯಯನ ಕೈಗೊಂಡು ಸಕಾಲಿಕವಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರಿಗೆ ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ಕೃಷಿಕರ ಆದಾಯ ದ್ವಿಗುಣಗೊಳಿದುವ ಕುರಿತು ಮಾರ್ಗೋಪಾಯ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚಿತ್ರದುರ್ಗ ಜಿಲ್ಲೆ ಮಳೆಯ ಕೊರತೆಯಿಂದ ಇಲ್ಲಿನ ರೈತರ ಕೃಷಿ ಬದುಕು ವರ್ಷದಿಂದ ವರ್ಷಕ್ಕೆ ಆತಂಕದಲ್ಲಿಯೇ ಮುಂದುವರೆದಿದೆ.  
     ಜಿಲ್ಲೆಯಲ್ಲಿ ನೀರಾವರಿಯ ಶಾಶ್ವತ ಮೂಲಗಳು ಲಭ್ಯವಿಲ್ಲ. ರೈತರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದು, ಪ್ರತಿ ವರ್ಷ ಮಳೆಯ ಕೊರತೆಯಿಂದ ಬಿತ್ತಿದ ಬೆಳೆ ರೈತನ ಕೈ ಸೇರುತ್ತಿಲ್ಲ. ಜಮೀನು ಇದ್ದರೂ ಕೃಷಿ ಚಟುವಟಿಕೆ ನಡೆಸಲಾಗುತ್ತಿಲ್ಲ.  ಹೀಗಾಗಿ ಕೃಷಿಯಿಂದ ವಿಮುಖರಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಕೃಷಿಕರಿಗೆ ನೆರವಾಗಿ ಜಿಲ್ಲೆಯಲ್ಲಿ ಕೃಷಿ ರಕ್ಷಿಸುವುದು ಅತಿಮುಖ್ಯವಾಗಿದೆ ಎಂದು ಹೇಳಿದರು
 
      ಜಿಲ್ಲೆಯಲ್ಲಿನ ಹಿಂದಿನ ಮಳೆಯ ಪ್ರಮಾಣ, ಹವಾಗುಣ ಹಾಗೂ ಭೂಮಿಯ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ತಜ್ಞರು, ವಿಜ್ಞಾನಿಗಳು, ಸಂಶೋಧನೆ ನಡೆಸಿ, ಇಲ್ಲಿನ ರೈತರು ಯಾವ ಬೆಳೆಗಳನ್ನು ಬೆಳೆಯಬೇಕು. ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಕೃಷಿ, ಹೈನುಗಾರಿಕೆಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು, ಬೆಳೆಗಳ ಮಾದರಿ ಕುರಿತು ಅಧ್ಯಯನ ನಡೆಯಬೇಕಿದೆ ಎಂದರು 
      ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿರುವ ಹವಾಗುಣ ಹಾಗೂ ಬೆಳೆ ಪದ್ಧತಿ, ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳಿಗಿಂತಲೂ ಭಿನ್ನವಿದೆ. ಕೆಲವೆಡೆ ಅಡಿಕೆ, ತೆಂಗು, ರಾಗಿ ಮತ್ತಿತರೆ ಬೆಳೆ ಬೆಳೆಯುತ್ತಿದ್ದರೆ, ಉಳಿದೆಡೆ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಬೆಳೆಗಳನ್ನೇ ನೆಚ್ಚಿಕೊಂಡಿದ್ದಾರೆ.
 
      ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಮಳೆಯೂ ಕಡಿಮೆ, ಅಂತರ್ಜಲವೂ ಸಮೃದ್ಧಿಯಾಗಿಲ್ಲ.  ಇಲ್ಲಿ ಅನೇಕ ವರ್ಷಗಳಿಂದ ಶೇಂಗಾ ಬೆಳೆ ಬೆಳೆಯಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇಳುವರಿಯೂ ಕಡಿಮೆಯಾಗಿ ಲಾಭ ತರುತ್ತಿಲ್ಲ. ಖರ್ಚು ಹೆಚ್ಚು, ಆದಾಯ ಕಡಿಮೆ, ಕೂಲಿಕಾರ್ಮಿಕರ ಕೊರತೆ ಹೀಗೆ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. 
 
      ಹೀಗೆ ಒಂದೇ ಬಗೆಯ ಬೆಳೆಯನ್ನು ಬೆಳೆಯುವ ಬದಲಿಗೆ, ಪರ್ಯಾಯ ಬೆಳೆ ಬೆಳೆಯುವುದು, ಕೋಳಿಸಾಕಾಣಿಕೆ, ಹೈನುಗಾರಿಕೆ, ಕಡಿಮೆ ನೀರಿನಲ್ಲೂ ಆದಾಯ ತರಬಹುದಾದ ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಕೃಷಿ ಬೆಳೆ ಬೆಳಯುವತ್ತ ರೈತರನ್ನು ಉತ್ತೇಜಿಸಬೇಕಿದೆ. ಅಲ್ಲದೆ ಅವರ ಮನವೊಲಿಸುವ ಕಾರ್ಯವೂ ಆಗಬೇಕಿದೆ.  ರೈತರು ಕೇವಲ ಕೃಷಿಯ ಮೇಲೆ ಅವಲಂಬಿತರಾಗದೆ, ಜೊತೆಗೆ ಹೈನುಗಾರಿಕೆ, ಪುಷ್ಪಕೃಷಿ, ಅಣಬೆ ಕೃಷಿ, ಮುಂತಾದ ನಿತ್ಯವೂ ಆದಾಯ ತರಬಲ್ಲ ಉಪ ಕಸುಬನ್ನು ಕೈಗೊಳ್ಳಲು ರೈತರಿಗೆ ಅಗತ್ಯ ಸಲಹೆ ಹಾಗೂ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ದೊರಕಿಸಬೇಕು ಎಂದು ಸೂಚಿಸಿದರು
 
      ಹವಾಗುಣಕ್ಕೆ ಸೂಕ್ತ ಬೆಳೆ ಪದ್ಧತಿ, ಬೇಸಾಯ ಕ್ರಮ, ತಾಂತ್ರಿಕ ನೆರವು, ಬೀಜ, ಗೊಬ್ಬರಗಳ ಬಳಕೆ ಕುರಿತು ಅಧ್ಯಯನ ಕೈಗೊಳ್ಳುವುದು ಅಗತ್ಯವಾಗಿದೆ.  ಜೈವಿಕ ಇಂಧನದ ಬೆಳೆಗಳಾದ ಹೊಂಗೆ, ಪೊಂಗಿಮಿಯ, ಬೇವು ಕೃಷಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ.  ಈ ಕೃಷಿ ಅಳವಡಿಸಿಕೊಂಡವರಿಗೆ ಇದರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನೂ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೃಷಿ ತಜ್ಞರಿಗೆ ಹೊಣೆ : 
     ಹೈನುಗಾರಿಕೆ, ಜೈವಿಕ ಇಂಧನ, ಹನಿ ನೀರಾವರಿ, ಅರಣ್ಯ ಕೃಷಿ ಹೀಗೆ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶಗಳಿದ್ದು, ತೋಟಗಾರಿಕೆ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರಿನಲ್ಲಿರುವ ಕೃಷಿ ತರಬೇತಿ ಕೇಂದ್ರ, ಕೃಷಿ ಅಧಿಕಾರಿಗಳು ಹಾಗೂ ಕೃಷಿ ತಜ್ಞರನ್ನು ಒಳಗೊಂಡಂತೆ ತಂಡ ರಚಿಸಲಾಗುತ್ತಿದ್ದು, ಈ ಅಧಿಕಾರಿಗಳು, ತಜ್ಞರು ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದಲ್ಲಿ ಅಧ್ಯಯನ ನಡೆಸಿ, ರೈತರ ಆದಾಯ ಹೆಚ್ಚಿಸುವುದಕ್ಕೆ ಸಂಬಂಧಿಸಿದ ಶಿಫಾರಸ್ಸುಗಳು, ಅಗತ್ಯವಿರುವ ಸೌಲಭ್ಯ ಕುರಿತಂತೆ ಸೂಕ್ತ ವರದಿಯನ್ನು ಸಿದ್ಧಪಡಿಸಿ ಸಕಾಲಿಕವಾಗಿ ಸಲ್ಲಿಸಬೇಕು ಎಂದು ಹೇಳಿದರು
   
     ಹವಾಮಾನ ಬದಲಾವಣೆ ಆಧಾರಿತ ಬೆಳೆ ಪದ್ಧತಿ ಕುರಿತು ಪ್ರಯೋಗಾತ್ಮಕ ಚಟುವಟಿಕೆ ನಡೆಸಲು ನಬಾರ್ಡ್ ಕೂಡ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದೆ.  ಇದನ್ನೆ ಬಳಸಿಕೊಂಡು, ರೈತರ ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ, ಪ್ರಾಜೆಕ್ಟ್ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈರುಳ್ಳಿ ಸಂಗ್ರಹಕ್ಕೆ ತಂತ್ರಜ್ಞಾನ : 
     ಜಿಲ್ಲೆಯಲ್ಲಿರುವ ಬಾಬಾ ಅಣುವಿಜ್ಞಾನ ಸಂಶೋಧನಾ ಕೇಂದ್ರ (ಬಾರ್ಕ್) ದವರು ಕಟಾವು ಮಾಡಿದ ಈರುಳ್ಳಿ ಬೆಳೆ ಕೆಡದಂತೆ ಹೆಚ್ಚು ದಿನಗಳ ಕಾಲ ಸಂರಕ್ಷಿಸಿ ಇಡಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ತಂತ್ರಜ್ಞಾನದ ಪ್ರಯೋಜನವನ್ನು ಇಲ್ಲಿನ ರೈತರಿಗೆ ಪ್ರಾಯೋಗಿಕವಾಗಿ ನೀಡಲು ಸಿದ್ಧರಿದ್ದಾರೆ.  ನಿಜಕ್ಕೂ ಇದು, ಈರುಳ್ಳಿ ಬೆಳೆಯುವ ರೈತರಿಗೆ ಸಹಕಾರಿಯಾಗಲಿದ್ದು, ಈ ಕುರಿತು ಬಾರ್ಕ್ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ, ಇದನ್ನು ಜಿಲ್ಲೆಯಲ್ಲಿ ಯಾವ ರೀತಿ ಕಾರ್ಯಗತಗೊಳಿಸಬೇಕು ಎನ್ನುವುದರ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದರು.
 
    ಸಭೆಯಲ್ಲಿ ಜಂಟಿಕೃಷಿ ನಿರ್ದೇಶಕ ಸದಾಶಿವ, ಲೀಡ್ ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಘನಶ್ಯಾಮ್,  ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಕೃಷಿ ತಜ್ಞರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ