ಸಂವಿಧಾನ ಬದಲಾವಣೆಯ ಮಾತು ತರವಲ್ಲ

ಚಿತ್ರದುರ್ಗ:

      ಸಂವಿಧಾನದಡಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಅನಂತಕುಮಾರಹೆಗಡೆ ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ಸಂವಿಧಾನವನ್ನು ವಿರೋಧಿಸುವ ಉಲ್ಲಂಘಿಸುವ ಹೇಳಿಕೆ ನೀಡಿರುವುದು ನಿಜಕ್ಕೂ ಭಾರತದ ಸಂವಿಧಾನಕ್ಕೆ ಅಪಚಾರವೆಸಗಿದಂತೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಿಸ್ಟಿನ ಗೌರವ ಕಾರ್ಯದರ್ಶಿ ಹೆಚ್.ಹನಮಂತಪ್ಪ ವಿಷಾಧಿಸಿದರು.

      ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಅಖಿಲ ಕರ್ನಾಟಕ ವಿಚಾರ ವೇದಿಕೆಗಳ ಸಂಘ ಮತ್ತು ತಾರಾ ಮಂಡಲ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಸೀಬಾರದಲ್ಲಿರುವ ಎಸ್.ಎನ್.ರವರ ಸ್ಮಾರಕದ ಬಳಿ ಪದವಿ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಗುರುವಾರ ಏರ್ಪಡಿಸಲಾಗಿದ್ದ ಭಾರತ ಸಂವಿಧಾನ: ಅರ್ಥ, ಅರಿವು, ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

      ರಾಜಕೀಯಕ್ಕೆ ಅಸ್ತಿತ್ವ ಸಿಗುವುದು ಸಂವಿಧಾನದಿಂದ ಹಾಗಾಗಿ ದೇಶದ ಮುಂದಿನ ಪ್ರಜೆಗಳಾದ ನೀವುಗಳು ಸಂ ವಿಧಾನ ಎಂದರೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

       ಸಂವಿಧಾನದ ಕರಡು ಸಮಿತಿ ಸದಸ್ಯರಾಗಿದ್ದ ಎಸ್.ನಿಜಲಿಂಗಪ್ಪನವರು ಹದಿನಾಲ್ಕು ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ, ಸ್ಟೇಟ್ ಪಾಲಿಸಿ, ಸಂವಿಧಾನದ ಆಶಯದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾತ್ರ ಏನು ಎಂಬುದನ್ನು ಆಳವಾಗಿ ಅಧ್ಯಯನ ನಡೆಸಿದ್ದರು ಎಂದು ಎಸ್.ಎನ್.ರವರು ಸಂವಿಧಾನಕ್ಕೆ ನೀಡಿರುವ ಕೊಡುಗೆಯನ್ನು ನೆನಪಿಸಿಕೊಂಡ ಹೆಚ್.ಹನುಮಂತಪ್ಪನವರು ಸಂವಿಧಾನವನ್ನು ತಿರುಚುವ ಕೆಲಸಕ್ಕೆ ಯಾರು ಕೈಹಾಕುವುದು ಸರಿಯಲ್ಲ ಎಂದರು.

       ಬ್ರಿಟೀಷರ ಗುಲಾಮಗಿರಿ, ದಬ್ಬಾಳಿಕೆ ವಿರುದ್ದ ಲಕ್ಷಾಂತರ ಮಂದಿಯ ತ್ಯಾಗ ಬಲಿದಾನವಿದೆ. ಅನೇಕರು ಜೈಲು ವಾಸ ಅನುಭವಿಸಿದ್ದಾರೆ. 2 ವರ್ಷ, 11 ತಿಂಗಳು, 18 ದಿನ ಸಂವಿಧಾನವನ್ನು ರಚಿಸಿ ರಾಜ್ಯಾಂಗ ರಚನೆ ಮಾಡಲಾಗಿದೆ.

       ಸಂವಿಧಾನ ರಚನೆ ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದರು, ರಾಜೇಂದ್ರಪ್ರಸಾದ್ ಸಮಿತಿಯ ಅಧ್ಯಕ್ಷರಾಗಿದ್ದರು. ಅದರಲ್ಲಿ ಒಬ್ಬರು ಮೃತಪಟ್ಟರು, ಮತ್ತೊಬ್ಬರು ರಾಜೀನಾಮೆ ಕೊಟ್ಟರು, ಇನ್ನೊಬ್ಬರು ಅಮೇರಿಕಾದಲ್ಲಿದ್ದರು, ಮತ್ತೊಬ್ಬರಿಗೆ ಅನಾರೋಗ್ಯವಾಗಿತ್ತು. ಹೀಗೆ ಒಂದೊಂದು ಕಾರಣಗಳಿಂದ ಎಲ್ಲರೂ ಸಮಿತಿಯಿಂದ ಹಿಂದೆ ಸರಿದಾಗ ಕೊನೆಗೆ ಉಳಿದುಕೊಂಡ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದರು.

       ಅಜ್ಞಾನ, ಬಡತನ, ಅಸಮಾನತೆ, ನಿರುದ್ಯೋಗ ಹೋಗಲಾಡಿಸಬೇಕೆಂಬುದು ಅಂಬೇಡ್ಕರ್‍ರವರ ಆಸೆಯಾಗಿತ್ತು. ಸಂವಿಧಾನ ಚೆನ್ನಾಗಿದೆ. ಬದಲಾವಣೆ ಮಾಡುವ ಅಗತ್ಯವಿಲ್ಲ. 1949, ಜ.26 ರಂದು ಸಂವಿಧಾನವನ್ನು ರಾಜ್ಯಾಂಗಕ್ಕೆ ಒಪ್ಪಿಸಲಾಯಿತು. ಭಾರತ ದೊಡ್ಡ ದೇಶ. ತಾಂತ್ರಿಕವಾಗಿ ಬೆಳೆಯುತ್ತಿದೆ. ಭ್ರಷ್ಟಾಚಾರ ತುಂಬಿದೆ, ಶಾಸನಸಭೆ, ಪಾರ್ಲಿಮೆಂಟ್, ನ್ಯಾಯಾಂಗ ಎಲ್ಲಿಯೂ ಯತಿಕ್ಸ್ ಉಳಿದಿಲ್ಲ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿರುವುದರಿಂದ ನೀವುಗಳು ಒಬ್ಬೊಬ್ಬರು ರಾಜ್ಯಾಂಗದ ಸಮರ್ಥರಾಗಬೇಕು ಎಂದು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಜಾಗೃತಿ ಮೂಡಿಸಿದರು.

     ಆಡಳಿತ ನಡೆಸುವವರು ತಪ್ಪು ಮಾಡುತ್ತಿದ್ದಾರೆ. ಜಾತಿ-ಜಾತಿ ನಡುವೆ ದ್ವೇಷ, ಅಸಮಾನತೆ, ಸ್ವಾರ್ಥ ಎಲ್ಲೆಡೆ ತಾಂಡವವಾಡುತ್ತಿದೆ. ಸರ್ವರಿಗೂ ಸಮಬಾಳು ಸಮಪಾಲು ಸಿಗುತ್ತಿಲ್ಲವಾದ್ದರಿಂದ ದೇಶದ ಸಮಗ್ರತೆ ಸ್ವಾಭಿಮಾನಕ್ಕೆ ಒತ್ತುಕೊಡಿ ಎಂದು ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಒಪ್ಪಿಸುವಾಗ ಹೇಳಿದ್ದಾರೆ. ಹಿರಿಯರ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ ಉಳಿಯಬೇಕು. ದೇಶ ಕಟ್ಟಬೇಕಾದವರು ನೀವು, ನಿಮ್ಮ ಕೈಯಲ್ಲಿ ದೇಶದ ಭವಿಷ್ಯವಿದೆ. ಸರಿಹಾದ ಹಾದಿಯಲ್ಲಿ ಸಾಗಿ ಎಂದು ಹೇಳಿದರು

      ಭಾರತದ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಸುಭಾಷ್‍ಚಂದ್ರಬೋಸ್ ಇವರುಗಳು ನೆಹರುರವರಿಗಿಂತಲೂ ಮೊದಲು ಭಾರತದ ಪ್ರಧಾನಿಗಳಾಗಬೇಕಿತ್ತು. ಅವಕಾಶ ಕೊಡಲಿಲ್ಲ ಎಂಬ ಟೀಕೆ ವಿರೋಧಿಗಳಿಂದ ಕೇಳಿ ಬರುತ್ತಿದೆ. ಆದರೆ 1950 ಜ.26 ರಂದು ರಾಜ್ಯಾಂಗ ರಚನೆಯಾಯಿತು. 1952 ರಲ್ಲಿ ಮೊದಲ ಚುನಾವಣೆ ನಡೆದಾಗ ಸರ್ದಾರ್ ವಲ್ಲಭಾಯಿಪಟೇಲ್ ಹಾಗೂ ಸುಭಾಷ್‍ಚಂದ್ರಬೋಸ್ ಇವರುಗಳು ಜೀವಂತವಾಗಿರಲಿಲ್ಲ. ಸ್ವಾತಂತ್ರ ಹೋರಾಟಗಾರರು ಯಾರು ಇವರುಗಳನ್ನು ಕಡೆಗಣಿಸಿರಲಿಲ್ಲ ಎಂದರು.

        ಸಾಮಾಜಿಕ ಸಂವಹನಕಾರ ಪ್ರೊ.ಅಬ್ದುಲ್ ರೆಹಮಾನ್ ಪಾಷರವರು ಭಾರತ ಸಂವಿಧಾನ ಅರ್ಥ-ಅರಿವು-ಜಾಗೃತಿ ಕುರಿತು ಭಾರತದ ಮೇಲೆ ಬ್ರಿಟೀಷರ ನೇರ ಆಳ್ವಿಕೆ, ಬ್ರಿಟೀಷರ ನಿಯಂತ್ರಣದಲ್ಲಿ ಸ್ಥಳೀಯ ರಾಜರ ಆಳ್ವಿಕೆ 565 ಪ್ರಾಂತ್ಯಗಳು, ಸಂವಿಧಾನದ ರಚನೆ ಸಂಬಂಧಿಸಿದಂತೆ ಗಾಂಧಿ, ನೆಹರು, ಅಂಬೇಡ್ಕರ್ ಎಸ್.ಎನ್.ರವರು ಹಲವು ಸಭೆಗಳು ನಡೆಸಿದ ದೃಶ್ಯಗಳನ್ನು ಸ್ಲೈಡ್ಸ್ ಮೂಲಕ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಪ್ರದರ್ಶಿಸಿ ಸಂವಿಧಾನ ಎಂದರೆ ಏನು ಎಲ್ಲರೂ ಏಕೆ ಸಂವಿಧಾನವನ್ನು ಗೌರವಿಸಬೇಕು ಎಂಬುದನ್ನು ತಿಳಿಸಿದರು.ವಿಚಾರವಾದಿಗಳಾದ ಶಿವಮೊಗ್ಗ ರಮೇಶ್, ನಾಗೇಶ್, ತಾರಾಮಂಡಲದ ಚಳ್ಳಕೆರೆ ಯರ್ರಿಸ್ವಾಮಿ ಕಾರ್ಯಾಗಾರದಲ್ಲಿ ಹಾಜರಿದ್ದರು.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap