ತುರುವೇಕೆರೆ:
ತಾಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾ.ಪಂ. ಒಳಪಟ್ಟ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ದಾಳಿ ಮಾಡಿ ಒಂದೂವರೆ ವರ್ಷದ ಹೆಣ್ಣು ಕರುವೊಂದನ್ನು ಬಲಿ ತೆಗೆದುಕೊಂಡಿದ್ದು ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗಂಗನಹಳ್ಳಿ ಗ್ರಾಮದ ರೈತ ಕೆಂಪಣ್ಣ ಎಂಬುವವರು ಗಂಗನಹಳ್ಳಿಯಲ್ಲಿ ವಾಸವಿದ್ದು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ತಮ್ಮ ತೋಟದ ಕೊಟ್ಟಿಗೆಯಲ್ಲಿ ಎರಡು ನಾಟಿ ಹಸುಗಳು ಹಾಗೂ ಒಂದೂವರೆ ವರ್ಷದ ಹೆಣ್ಣು ಕರುವನ್ನು ಕಟ್ಟಿದ್ದರು. ಭಾನುವಾರ ರಾತ್ರಿ ಚಿರತೆ ದಾಳಿ ಮಾಡಿ ಎರಡು ಹಸುಗಳನ್ನು ಬಿಟ್ಟು ಕೇವಲ ಕರುವನ್ನು ಮಾತ್ರ ಸುಮಾರು 200 ಮೀಟರ್ವರೆಗೆ ಹೊತ್ತೊಯ್ದ ಸಾಯಿಸಿ ತಿಂದಿದೆ.
ಮಾಲೀಕ ಕೆಂಪಯ್ಯ ಬೆಳಿಗ್ಗೆ ಬಂದು ಕೊಟ್ಟಿಗೆ ಬಾಗಿಲು ತೆರೆದು ನೋಡಲಾಗಿ ಕರು ಕಾಣಿಸದ್ದರಿಂದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸುಮಾರು 200 ಮೀಟರ್ ಅಂತರದಲ್ಲಿ ಅರ್ಧಂಬರ್ದ ತಿಂದ ಕರುವಿನ ಕಳೇಬರಹ ಪತ್ತೆಯಾಗಿದೆ.ಸುಮಾರು 15 ದಿನಗಳ ಹಿಂದಷ್ಟೇ ಅದೇ ಗ್ರಾವiದ ಕಿಟ್ಟಿ ಎಂಬುವವರು ಕೊಟ್ಟಿಗೆಗೆ ಕಟ್ಟಿದ್ದ ಎಮ್ಮೆ ಕರುವನ್ನು ಚಿರತೆ ಹೊತ್ತೊಯ್ದಿದ್ದು ಅದರ ಕಳೇಬರಹ ಇನ್ನೂ ಪತ್ತೆಯಾಗಿಲ್ಲ. ಇದರಿಂದ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಛಾಗಿದ್ದು ಜನರು ಭಯ ಭೀತರಾಗಿದ್ಧಾರೆ.
ಗ್ರಾಮದ ಸುತ್ತಮುತ್ತ ಒಂದು ಹೆಣ್ಣು ಚಿರತೆ ಹಾಗೂ ಎರಡು ಮರಿಗಳು ಓಡಾಡುವುದನ್ನು ಅನೇಕ ಬಾರಿ ಕಣ್ಣಾರೆ ನೋಡಿರುವುದಾಗಿ ಗ್ರಾಮಸ್ಥ ಚಂದ್ರೇಗೌಡ ತಿಳಿಸಿದ್ದು ರಾತ್ರಿ ವೇಳೆ ರೈತರು ತಮ್ಮ ಜಮೀನಿಗೆ ಹೋಗಲು ಭಯಪಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಶೀಘ್ರ ಬೋನಿಟ್ಟು ಕ್ರಮ ಕೈಗೊಂಡು ಚಿರತೆಗಳನ್ನು ಹಿಡಿಯುವ ಮೂಲಕ ಸಾರ್ವಜನಿಕರಲ್ಲಿನ ಆತಂಕ ದೂರಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
