ದಾವಣಗೆರೆ
ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ಬಾಲ ಕಾರ್ಮಿಕರ ಮಿಷನ್, ಸ್ಪೂರ್ತಿ ಸಂಸ್ಥೆ ಹಾಗೂ ನೇಸರ ಸಂಸ್ಥೆಗಳ ಆಶ್ರಯದಲ್ಲಿ ‘ಚೈಲ್ಡ್ ಲೈನ್ ಸೆ ದೋಸ್ತಿ ಹಾಗೂ ಮಕ್ಕಳು ಹಕ್ಕುಗಳ ಸಪ್ತಾಹ’ದ ಅಂಗವಾಗಿ ಇಂದಿನಿಂದ (ನ.14ರಿಂದ) ನ.20ರ ವರೆಗೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಯೋಜಕ ಕೊಟ್ರೇಶ್ ಎಂ, ಇಂದು ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಮೋತಿವೀರಪ್ಪ ಶಾಲೆ ಆವರಣದಲ್ಲಿ ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್. ಬಡಿಗೇರ್, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೈ.ರಾಮ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಎಸ್, ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್ ಜಿ, ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಿರಿಲ್ ಸಗಾಯರಾಜ್, ಆಡಳಿತಾಧಿಕಾರಿ ಜೋಸ್ ಜೋಸೆಫ್, ಮೋತಿ ವೀರಪ್ಪ ಕಾಲೇಜಿನ ಉಪ ಪ್ರಾಂಶುಪಾಲೆ ಕಲ್ಪತಕುಮಾರಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಸರಕಾರದಿಂದ ಮಕ್ಕಳ ಸಿಗುವ ಯೋಜನೆ ಮಾಹಿತಿ ನೀಡುವುದು. ಕೇವಲ ಸರಕಾರ ಸಂಘ ಸಂಸ್ಥೆಗಳಿಂದ ಮಾತ್ರ ಮಕ್ಕಳ ಹಕ್ಕುಗಳ ಕಾರ್ಯಗತ ಸಾಧ್ಯವಿಲ್ಲ ಜೊತೆಗೆ ಸಮುದಾಯದ ಭಾಗಿತ್ವ ಅವಶ್ಯವಾಗಿದೆ ಎಂದರು.
ಸ್ಪೂರ್ತಿ ಸಂಸ್ಥೆಯ ಬಿ.ರೂಪಾ ನಾಯ್ಕ ಮಾತನಾಡಿ, ಚೈಲ್ಡ್ ಲೈನ್ ದೋಸ್ತಿ ಸಪ್ತಾಹದ ಪ್ರಯುಕ್ತ ನ.15ರಂದು ಬೆಳಿಗ್ಗೆ 6 ಗಂಟೆಗೆ ದಾವಣಗೆರೆಯ ವಿಶ್ವೇಶ್ವರಯ್ಯ ಉದ್ಯಾನವನ ಮತ್ತು ಹರಪನಹಳ್ಳಿ ಕ್ರೀಡಾಂಗಣದಲ್ಲಿ ಮಕ್ಕಳ ರಕ್ಷಣೆ ಮತ್ತು ಮಕ್ಕಳ ಸ್ನೇಹಿ ಸಮಾಜಕ್ಕಾಗಿ ನಮ್ಮ ನಡೆ, ಬೆಳಿಗ್ಗೆ 10.30ಕ್ಕೆ ಹರಿಹರದ ಶಿವಮೊಗ್ಗ ವೃತ್ತ, ಗೂಡ್ಸೆಡ್, ಚನ್ನಗಿರಿ-ತ್ಯಾವಣಿಗಿ, ಹೊನ್ನಾಳಿ-ನ್ಯಾಮತಿ ಖಾಸಗಿ ಬಸ್ ನಿಲ್ದಾಣಗಳಲ್ಲಿ ಹಾಗೂ ಹರಪನಹಳ್ಳಿಯ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದಲ್ಲಿ ಭಿಕ್ಷಾಟನೆಯಲ್ಲಿರುವ ಮಕ್ಕಳ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನ.16ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆ, ಹರಪನಹಳ್ಳಿಗಳಲ್ಲಿ ಅಂತರ್ಜಾಲ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಬೈಕ್ ಜಾಥಾ ಏರ್ಪಡಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಚನ್ನಗಿರಿ, ಹೊನ್ನಾಳಿಯಲ್ಲಿ ವಿದ್ಯಾರ್ಥಿಗಳ ರ್ಯಾಲಿ, ನ.17ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆ, ಚನ್ನಗಿರಿ, ಸಂತೆಬೆನ್ನೂರು, ಹೊನ್ನಾಳಿ, ಸವಳಂಗ, ಹರಪನಹಳ್ಳಿಯ ದೇವರ ತಿಮ್ಲಾಪುರದಲ್ಲಿ ಸುರಕ್ಷಾ ಬಂಧನ್ ಘೋಷಣೆಯಡಿ ಬಾಲ್ಯವಿವಾಹ ತಡೆ ಬಗ್ಗೆ ಜಾಗೃತಿ ಆಂದೋಲನ, ನ.18ರಂದು ವಿಶೇಷ ಚೇತನ ಮಕ್ಕಳ ಆಟೋಟ ಸ್ಪರ್ಧೆ, ನ.19ರಂದು ವಿಶ್ವ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ತಡೆ ದಿನ, ನ.20ರಂದು ಮಕ್ಕಳ ವಿಶೇಷ ಗ್ರಾಮ ಸಭೆ ನಡೆಯಲಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಂಜುನಾಥ.ಎಂ, ಎಚ್.ಸಿ.ಕೆಂಚಪ್ಪ, ಫಾದರ್ ಸಿರಿಲ್ ಸಗಾಯರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/13_dvg_06.gif)