ಬೆಂಗಳೂರು
ಚೀಟಿ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದ ಮಹಿಳೆಯು ತನ್ನ 12 ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೆಚ್ಎಎಲ್ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಹೆಚ್ಎಎಲ್ನ ವಿಭೂತಿಪುರದ ಎಸ್ಎಲ್ಎನ್ ಸ್ಕೂಲ್ ಬಳಿಯ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಸುರೇಶ್ ಬಾಬು ಅವರ ಪತ್ನಿ ಗೀತಾಬಾಯಿ (45) ಹಾಗೂ ಅವರ ಪುತ್ರ ವರುಣ್(12)ಎಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗನನ್ನು ಗುರುತಿಸಲಾಗಿದೆ
ಮನೆಯ ಒಂದೇ ಕೊಠಡಿಯ ಫ್ಯಾನಿಗೆ ತಾಯಿ ಅದರ ಹತ್ತಿರದಲ್ಲಿಯೇ ಮತ್ತೊಂದೆಡೆಯಿದ್ದ ಫ್ಯಾನಿನ ಹುಕ್ಕಿಗೆ ಮಗ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ತಾಯಿಯೇ ಮಗನಿಗೆ ನೇಣು ಬಿಗಿದು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇಲ್ಲವೇ ಎನ್ನುವುದು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಲಿದೆ ಎಂದು ಹೆಚ್ಎಎಲ್ ಪೊಲೀಸರು ತಿಳಿಸಿದ್ದಾರೆ.
ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಗೀತಾಬಾಯಿ, ಅದರ ಜತೆ ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದು, ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಚೀಟಿ ಹಾಕಿದವರು ಹಣಕ್ಕಾಗಿ ಒತ್ತಡ ತರುತ್ತಿದ್ದರಿಂದ ನೊಂದಿದ್ದ ಆಕೆ, ರಾತ್ರಿ 12ರ ವೇಳೆ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೀತಾಬಾಯಿ ಅವರ ಮಗಳು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರೆ, ಪತಿ ಸ್ವಿಗ್ಗಿಯಲ್ಲಿ ರಾತ್ರಿ ಪಾಳಯದ ಕೆಲಸಕ್ಕೆ ಹೋಗಿದ್ದಾಗ ರೂಮಿನಲ್ಲಿ ಮಗನೊಂದಿಗೆ ಇದ್ದ ಗೀತಾಬಾಯಿ ಈ ಕೃತ್ಯ ನಡೆಸಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಹೆಚ್ಎಎಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
