ದಾವಣಗೆರೆ:
ಕೆಲ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹುಸಿಯಾಗಲಿದ್ದು, ಎನ್ಡಿಎ ಕೂಟ ಸಮೀಕ್ಷೆಯಲ್ಲಿ ತೋರಿಸುತ್ತಿರುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ನಡೆದಿರುವ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹುಸಿಯಾಗಲಿದ್ದು, ಟೀವಿಗಳಲ್ಲಿ ಚರ್ಚೆಗಾಗಿ ಇಂತಹ ಸಮೀಕ್ಷೆಗಳನ್ನು ಮಾಡುತ್ತಾರಷ್ಟೇ. ಕರ್ನಾಟಕದಲ್ಲಿ ಬಿಜೆಪಿ 22-23 ಸ್ಥಾನ ಪಡೆಯಲು ಸಾಧ್ಯವೇ ಇಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು 16ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮೈತ್ರಿ ಅಂದ್ರೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವೆಂಬುದಕ್ಕೆ ಹಿಂದೆಲ್ಲಾ ಸಮ್ಮಿಶ್ರ ಸರ್ಕಾರಗಳು ಇದ್ದಾಗಾ ಏನೆಲ್ಲಾ ಆಗಿದೆಯೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮೈತ್ರಿ ಸರ್ಕಾರದಲ್ಲಿ ಉಭಯ ಪಕ್ಷಗಳ ಮುಖಂಡರ ಹೇಳಿಕೆಗಳು ಗೊಂದಲ ಪಡೆಯುತ್ತಿದ್ದು, ಮೈತ್ರಿಯಾದಾಗ ಹೊಂದಾಣಿಕೆ ಮಾಡಿಕೊಳ್ಳುವುದು ತುಸು ಕಷ್ಟವೇ ಎಂದರು.
ಜೆಡಿಎಸ್ ಪಕ್ಷದಲ್ಲಿ ಕೆಲವರು ಹಾಗೇ ನಡೆದುಕೊಂಡರೆ, ನಮ್ಮ ಪಕ್ಷದಲ್ಲೂ ಕೆಲವರು ಹೀಗೆ ನಡೆದುಕೊಂಡರು. ಈಗ ಸಮ್ಮಿಶ್ರ ಸರ್ಕಾರ ಎಲ್ಲಾ ವಿಷಯಗಳಲ್ಲೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದು, ಮುಂದೆ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ. ವಿಪಕ್ಷಗಳ ನಾಯಕರ ಗೊಂದಲದ ಹೇಳಿಕೆಗಳನ್ನೇ ಮಾಧ್ಯಮಗಳು ಅತೀ ಹೆಚ್ಚು ವೈಭವೀಕರಿಸಿ, ಸಿಎಂ ಕುಮಾರಸ್ವಾಮಿ ನಿದ್ದೆ ಯನ್ನೂ ಕಡೆಸಿವೆ.
ಯಾವುದಕ್ಕೂ ಎದೆಗುಂದದೇ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದು, ಮುಂದಿನ 4 ವರ್ಷ ಕಾಲ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಈ ಐದು ವರ್ಷದೊಳಗೆ ಸಿದ್ದರಾಮಯ್ಯ ಸಿಎಂ ಆಗಬೇಕೆಂದೇನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಮೈತ್ರಿ ಸರ್ಕಾರ 5 ವರ್ಷ ಅವಧಿ ಪೂರೈಸಿದ ನಂತರ ಜನರ ಆಶೀರ್ವಾದದಿಂದ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿ ಆಗಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ. ಈಗಲೇ ಕುಮಾರಸ್ವಾಮಿಗೆ ತೆಗೆದು ಹಾಕಿ, ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಮಾಡುವಂತೆ ಯಾರೂ ಹೇಳಿಲ್ಲ ಎಂದರು.
ನಾವು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಂತಹ ಜನರು. ಆದರೆ, ಬಿಜೆಪಿಯವರು ಆಪರೇಷನ್ ಕಮಲ ಮಾಡಿದಂತೆ ನಾವು ಆಪರೇಷನ್ ಹಸ್ತ ಮಾಡುವವರಲ್ಲ. ಶಾಸಕರನ್ನು ನಾಯಿ, ಕೋಣ, ಎಮ್ಮೆ, ಬೆಕ್ಕುಗಳಂತೆ ಬೆಲೆ ಕಟ್ಟಿ ಖರೀದಿಸಲು ನಾವು ಹೋಗುವುದಿಲ್ಲ ಎಂದು ಆಚಿಜನೇಯ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
