ತುಮಕೂರು
ನಗರದ ತಾಲ್ಲೂಕು ಕಛೇರಿಯ ರೆಕಾರ್ಡ್ ಕೊಠಡಿ ಬಾಗಿಲು ತೆರೆದು, ಕಾರ್ಯನಿರ್ವಹಿಸಿ ವಾರವಾಯಿತು. ದಾಖಲಾತಿಗಾಗಿ ಹಣ ಪಾವತಿಸಿ, ರಸೀದಿ ಪಡೆದವರು ಅವಧಿ ಮುಗಿದರೂ ದಾಖಲಾತಿ ಸಿಗದೆ ಕಛೇರಿಗೆ ಅಲೆಯುವಂತಾಗಿದೆ. ದಾಖಲಾತಿಗಾಗಿ ಬಂದ ಸಾರ್ವಜನಿಕರು ಇಲಾಖೆ ಆಡಳಿತ ವೈಖರಿಗೆ ಆಕ್ರೋಶಗೊಂಡು ಪ್ರತಿಭಟಿಸಿದರು.
ಈ ಮೊದಲು ರೆಕಾರ್ಡ್ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮಯ್ಯ ಎಂಬುವವರನ್ನು ಚುನಾವಣೆ ಶಾಖೆಗೆ ವರ್ಗಾವಣೆ ಮಾಡಿ, ಇವರ ಸ್ಥಳಕ್ಕೆ ಶ್ರೀನಿವಾಸ್ ಎಂಬುವವರನ್ನು ನಿಯೋಜಿಸಲಾಗಿದೆ. ಇವರಿಗೆ ದಾಖಲಾತಿ ನಿರ್ವಹಣೆಯಲ್ಲಿ ಅನುಭವವಿಲ್ಲ, ಸಕಾಲದಲ್ಲಿ ದಾಖಲಾತಿ ಪಡೆಯಲಾಗದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾಗೇಂದ್ರ ಹೇಳಿದರು.
ಇದರಿಂದ ಆರ್ಟಿಸಿ, ಎಂಆರ್, ಜನನ-ಮರಣ ಪತ್ರ ಸೇರಿದಂತೆ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದರೆ ಅವರು ಸಮಸ್ಯೆ ಬಗೆಹರಿಸಲು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
ಶುಕ್ರವಾರ ರೆಕಾರ್ಡ್ ಕೊಠಡಿ ಬಂದ್ ಆಗಿತ್ತು. ಡಿ ದರ್ಜೆ ನೌಕಕರೊಬ್ಬರು ಕೊಠಡಿ ಬಾಗಿಲು ತೆರೆದು ಕಸಗುಡಿಸಿ ಬಾಗಿಲು ಹಾಕಿಕೊಂಡು ಹೋದರು ಹೊರತು, ಯಾವುದೇ ಸಾರ್ವಜನಿಕ ಕೆಲಸಗಳಾಗಲಿಲ್ಲ.
ಅನುಭವ ಇದ್ದವರನ್ನು ಇಲ್ಲಿಂದ ತೆಗೆದು, ಹೊಸಬರನ್ನು ನೇಮಕಮಾಡಲಾಗಿದೆ, ಜೊತೆಗೆ ಕೆಲ ದಿನಗಳಿಂದ ರಕಾರ್ಡ್ ರೂಮಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯತ್ತಿಲ್ಲ, ಇಲ್ಲಿ ಅಗತ್ಯ ಸಿಬ್ಬಂದಿ ನೇಮಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮುಖಂಡ ಶಿರಾಣಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ತಹಶೀಲ್ದಾರ್ ಕೆ ಅರ್ ನಾಗರಾಜು ಪ್ರತಿಕ್ರಿಯೆ ನೀಡಿ, ಇಲಾಖೆ ಕಾರಣಗಳಿಂದಾಗಿ ರೆಕಾರ್ಡ್ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಯ್ಯರನ್ನು ಬೇರೆ ಶಾಖೆಗೆ ನಿಯೋಜಿಸಿ, ರೆಕರ್ಡ್ ಶಾಖೆಗೆ ಮತ್ತೊಬ್ಬರನ್ನು ನೇಮಿಸಲಾಗಿದೆ. ಅವರು ಅನಾರೋಗ್ಯದ ಕಾರಣ ರಜೆಯಲ್ಲಿದ್ದಾರೆ, ಸೋಮವಾರದ ವೇಳೆಗೆ ಮತ್ತೊಬ್ಬ ಸಿಬ್ಬಂದಿ ನಿಯೋಜಿಸಿ, ಸಮಸ್ಯೆ ಸುಸೂತ್ರವಾಗಿ ಸಾರ್ವಜನಿಕ ಸೇವೆ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/DSC0957.gif)