ದಾವಣಗೆರೆ :
ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಿ, ಪರಿಸರ ಸಂರಕ್ಷಣೆಯತ್ತ ಗಮನ ಹರಿಸಿದರೆ, ಭಾರತವನ್ನು ಇನ್ನೂ ಮೇಲ್ಮಟ್ಟಕ್ಕೆ ಕೊಂಡ್ಡೊಯ್ಯಬಹುದಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಸೋಮವಾರ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಶಿವಮೊಗ್ಗ, ಮಂಗಳೂರು (ವಾರ್ತಾ ಮತ್ತು ಪ್ರಸಾರ ಸಚಿವಾಲಯ), ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕ-ಎ ಮತ್ತು ಬಿ, ಮಹಾನಗರ ಪಾಲಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಚ್ಛ ಭಾರತ (ನಗರ) ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮುಂದಾದರೆ, ದೇಶವನ್ನು ಇನ್ನೂ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂದ ಅವರು, ಸ್ವಚ್ಛ ಭಾರತ ಕಾರ್ಯಕ್ರಮ ಮುಂಚೆ ಇಂದಲೂ ಇದೆ. ಆದರೆ, ಇತ್ತೀಚೆಗೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇದಕ್ಕೆ ಹೆಚ್ಚು ಒತ್ತು ನೀಡಿ, ಸ್ವಚ್ಛ ಭಾರತ ಅಭಿಯಾನಕ್ಕೆ ಹೊಸ ರೂಪ ನೀಡಿದ್ದಾರೆಂದು ಹೇಳಿದರು.
ಕರ್ನಾಟಕಕ್ಕೂ ಕೆಟ್ಟ ಸ್ಥಿತಿಯಲ್ಲಿದ್ದ ದೆಹಲಿಯಲ್ಲಿ ಮೋದಿ ಅವರೇ ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛತೆಗೆ ಚಾಲನೆ ಕೊಟ್ಟರು. ಬಳಿಕ ಕರ್ನಾಟಕ ಮಾತ್ರವಲ್ಲ. ಇಡೀ ಭಾರತದಲ್ಲೇ ಸ್ವಚ್ಛ ಭಾರತ ಯಶಸ್ವಿಯಾಗಿ ನಡೆಯುತ್ತಿದೆ. ಸ್ವಚ್ಛತೆಗೆ ಮೋದಿಯಿಂದ ಹಿಡಿದು ಸಾರ್ವಜನರಿಕರ ವರೆಗೂ ಆದ್ಯತೆ ನೀಡಲಾಗುತ್ತಿರುವ ಕಾರಣ ಹಿಂದೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದ ಕಸ, ತ್ಯಾಜ್ಯಗಳು ಕಸದ ಬುಟ್ಟಿ ಸೇರುತ್ತಿವೆ ಎಂದರು.
ಈ ಐಟಿಐ ಕಾಲೇಜನ್ನು 60ನೇ ಇಸವಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಮರಗಳನ್ನು ಹಿರಿಯರು ಸಾಕಿ ಬೆಳೆಸಿದ್ದಾರೆ. 23 ಎಕರೆ ಪ್ರದೇಶ ಇರುವ ಈ ಆವರಣದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್ ಬಾಗ್ಗೂ ಕಡಿಮೆ ಇಲ್ಲದ ರೀತಿ ಗಿಡ-ಮರಗಳ ಪೋಷಿಸಿ ಬೆಳೆಸಿ, ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತರಬೇತಿ ಸಂಸ್ಥೆಯ ಪ್ರಾಚಾರ್ಯ ಎನ್. ಏಕನಾಥ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶೋಭಾ ಪಲ್ಲಾಗಟ್ಟಿ, ಉಪ ಮೇಯರ್ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಪಿ.ಕೆ. ಲಿಂಗರಾಜು, ಸ್ವಚ್ಛ ಭಾರತ ಸಂಯೋಜಕಿ ಡಾ. ಹೆಚ್.ಎಸ್. ಶಾಂತಭಟ್, ಪಾಲಿಕೆ ಆರೋಗ್ಯ ನಿರೀಕ್ಷಕ ಕೆ.ಆರ್. ಮಹಾಂತೇಶ್, ಶಿವಮೊಗ್ಗ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕಾರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ