ಬೆಂಗಳೂರು
ವಿಧಾನಸಭೆ ವಿರೋಧ ಪಕ್ಷದ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ನಡೆಯುತ್ತಿರುವ ಬೆನ್ನೆಲ್ಲೆ, ಪರಿಷತ್ ವಿಪಕ್ಷ ಸ್ಥಾನಕ್ಕೂ ಲಾಭಿ ಶುರುವಾಗಿದೆ.
ಪರಿಷತ್ ವಿಪಕ್ಷ ಸ್ಥಾನ ನೀಡುವಂತೆ ಸಿ.ಎಂ ಇಬ್ರಾಹಿಂ ಬೆಂಬಲಿಗರಿಂದ ಲಾಬಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಮೂಲಕ ಮನವಿ ಕೂಡ ಮಾಡಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿದ್ದು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗ ಪರಿಷತ್ ಸದಸ್ಯರಾಗಿರುವ ಸಿ.ಎಂ ಇಬ್ರಾಹಿಂಗೆ ಪ್ರತಿ ಪಕ್ಷದ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಹೈಕಮಾಂಡ್ ಗೆ ನಿಮ್ಮ ಬೇಡಿಕೆಯನ್ನು ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ದಯನೀಯ ಸೋಲು ಹಾಗೂ ರಾಜ್ಯ ಮೈತ್ರಿ ಸರ್ಕಾರದ ಪತನದ ನಂತರ ಕಾಂಗ್ರೆಸ್ ಪಕ್ಷ ಕಳೆದುಕೊಂಡಿರುವ ವರ್ಚಸ್ಸನ್ನು ಮರುಸ್ಥಾಪಿಸಲು ಹಾಗೂ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಗುರಿ ಹೊಂದಿರುವ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಪ್ರಮುಖ ಹುದ್ದೆಗಳ ನಾಯಕತ್ವವನ್ನು ಬದಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ಕೂಡ ಬದಲಾಗಲಿದ್ದು, ಹಲವು ಪರಿಷತ್ ಸದಸ್ಯರು ಈ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಡಾ ಜಯಮಾಲಾ, ಎಚ್ಎಂ ರೇವಣ್ಣ, ಎಸ್. ಆರ್. ಪಾಟೀಲ್ ಮತ್ತಿತರರ ಸಾಲಿಗೆ ಇದೀಗ ಸಿಎಂ ಇಬ್ರಾಹಿಂ ಸೇರ್ಪಡೆ ಆಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/C-M-Ibrahim-hea9164_0.gif)