ನೇಣು ಹಾಕಿಕೊಂಡ ಕೋಚ್

ಬೆಂಗಳೂರು

       ಕಬಡ್ಡಿ ಆಟಗಾರ್ತಿಯ ಜತೆ ಅಸಭ್ಯ ವರ್ತನೆಯ ಪ್ರಕರಣ ತನಿಖೆ ಎದುರಿಸುತ್ತಿದ್ದ ಕಬ್ಬಡ್ಡಿ ತರಬೇತುದಾರ(ಕೋಚ್)ರೊಬ್ಬರು ಅವಮಾನ ತಾಳಲಾರದೇ ಡೆತ್‍ನೋಟ್ ಬರೆದಿಟ್ಟು ದಾವಣಗೆರೆಯ ಹರಿಹರದ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

      ಆತ್ಮಹತ್ಯೆ ಮಾಡಿಕೊಂಡವರನ್ನು ಉತ್ತರ ಕರ್ನಾಟಕ ಮೂಲದ ರುದ್ರಪ್ಪ ವಿ ಹೊಸಮನಿ ಎಂದು ಗುರುತಿಸಲಾಗಿದೆ. ಮಹಿಳಾಕಬ್ಬಡ್ಡಿ ಆಟಗಾರ್ತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ರುದ್ರಪ್ಪ ಹೊಸಮನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಿಂದ ನೊಂದಿದ್ದ ಅವರು ಹರಿಹರ ನಗರದ ಎಸ್.ಎಂ.ಲಾಡ್ಜ್‍ನಲ್ಲಿ ನೇಣಿಗೆ ಶರಣಾಗಿದ್ದು ಮೂರು ದಿನಗಳ ಹಿಂದೆಯೇ ನಡೆದಿರುವ ಆತ್ಮಹತ್ಯೆಯು ಮಂಗಳವಾರ ಬೆಳಕಿಗೆ ಬಂದಿದೆ.

       ರುದ್ರಪ್ಪ ಅವರು ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಕೋಚ್ ಆಗಿದ್ದರು. ರೂಮ್‍ನಲ್ಲಿ ಆಟಗಾರ್ತಿಯರು ಬಟ್ಟೆ ಬದಲಿಸುವಾಗ ಇಣುಕಿ ನೋಡಿದ್ದರು ಎನ್ನುವ ಆರೋಪವನ್ನು ಅವರು ಎದುರಿಸುತ್ತಿದ್ದರು. ಜೊತೆಗೆ ಅಸಭ್ಯ ವರ್ತನೆಯಡಿ ರುದ್ರಪ್ಪ ಅವರ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

       ಈ ಹಿನ್ನಲೆಯಲ್ಲಿ ಸಾಯಿ ರುದ್ರಪ್ಪ ಅವರನ್ನು ಅಮಾನತು ಮಾಡಿ, ದೆಹಲಿ ಕಚೇರಿಗೆ ಹೋಗುವಂತೆ ಆದೇಶ ನೀಡಲಾಗಿತ್ತು. ಅವಮಾನಕ್ಕೆ ಒಳಗಾಗಿದ್ದ ಅವರು ಮನೆಯಲ್ಲಿ ದೆಹಲಿಗೆ ಹೋಗುವುದಾಗಿ ಹೇಳಿ ಹರಿಹರಕ್ಕೆ ಬಂದಿದ್ದರು. ಮೂರು ದಿನಗಳ ಹಿಂದೆ ಎಂ.ಎಸ್.ಲಾಡ್ಜ್ ನಲ್ಲಿ ರೂಂ ಮಾಡಿಕೊಂಡಿದ್ದ ಅವರು, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನನ್ನು ಕ್ಷಮಿಸಿ

        ಆತ್ಮಹತ್ಯೆಗೆ ಮುನ್ನ ದೇವಿಕಾ, ರಾಕೇಶ್ ನನ್ನ ಕ್ಷಮಿಸಿ. ನಿಮಗೆ ಬಹಳ ತೊಂದರೆ ಕೊಟ್ಟುಬಿಟ್ಟೆ. ನಿಮ್ಮನ್ನ ನೋಡಬೇಕು ಅನಿಸಿತ್ತು. ನನ್ನ ಬಳಿ ಮೊಬೈಲ್ ಇಲ್ಲ, ಪರ್ಸ್ ನಲ್ಲಿ ನಿಮ್ಮಬ್ಬರ ಫೋಟೋ ಕೂಡಾ ಇಲ್ಲದಾಗಿದೆ.

       ರಾಕೇಶ್ ಅಮ್ಮನ ಕಾಳಜಿ ತಗೆದುಕೋ, ನಿನ್ನ ಕೆಲಸದಲ್ಲಿ ಇನ್ನೂ ವೇಗವಾಗಿ ಧನ್ಯನಾಗಿ, ಮುಂದುವರಿ. ದೇವರು ಒಳ್ಳೆಯದನ್ನು ಮಾಡುತ್ತಾನೆ. ನನ್ನ ಆತ್ಮೀಯ ಬಂಧುಗಳಿಗೆ ಹಾಗೂ ಎಲ್ಲ ಗೆಳೆಯರಿಗೆ ಧನ್ಯವಾದಗಳು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ, ನನ್ನ ದೇಹವನ್ನು ಯಾವುದಾದರು ಆಸ್ಪತ್ರೆಗೆ ದಾನ ಮಾಡಿ ಎಂದು ಬರೆದುಕೊಂಡಿದ್ದಾರೆ. ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link