ತುಮಕೂರು
ನಗರ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸುವ ವಿಷಯದಲ್ಲಿ ಸರ್ಕಾರಿ ಸುತ್ತೋಲೆ ಬಂದ ಬಳಿಕವಷ್ಟೇ ತುಮಕೂರು ಮಹಾನಗರ ಪಾಲಿಕೆಯು ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸಬೇಕು ಎಂಬ ಸಲಹೆಯನ್ನು ಕೈಗಾರಿಕೋದ್ಯಮಿಗಳು ಪಾಲಿಕೆಯ ಮುಂದಿಟ್ಟರು.
ತುಮಕೂರು ಮಹಾನಗರ ಪಾಲಿಕೆಯ 2020-21 ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿಯಾಗಿ ನಗರದ ಸಂಘ-ಸಂಸ್ಥೆಗಳ ಹಾಗೂ ನಾಗರಿಕರ ಸಲಹೆ ಪಡೆಯುವ ಸಲುವಾಗಿ ಶನಿವಾರ ಬೆಳಗ್ಗೆ ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಮೇಯರ್ ಫರೀದಾಬೇಗಂ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರೂ ಆದ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್ ಅವರು ಈ ಸಲಹೆ ನೀಡಿದರು.
ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ಸತ್ಯಮಂಗಲ ಕೈಗಾರಿಕಾ ಪ್ರದೇಶವು ನಿಯಮಾನುಸಾರವಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರ ಆಗಿಲ್ಲ. ಪಾಲಿಕೆಯಿಂದ ಅಲ್ಲಿಗೆ ಮೂಲ ಸೌಕರ್ಯಗಳೂ ದೊರೆತಿಲ್ಲ. ನಗರದ ಬಿ.ಎಚ್.ರಸ್ತೆಯಲ್ಲೇ ಇರುವ ಕೈಗಾರಿಕಾ ಪ್ರದೇಶದಲ್ಲೂ ನೀರಿನ ಸೌಲಭ್ಯವಿಲ್ಲ ಹಾಗೂ ಕಸ ವಿಲೇವಾರಿ ಆಗುತ್ತಿಲ್ಲ. ಹೀಗಿರುವಾಗ ಇಲ್ಲಿನ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಗ್ರಾಮೀಣ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ತೆರಿಗೆ ವಿಧಿಸುವ ಬಗ್ಗೆ ಸರ್ಕಾರಿ ಸುತ್ತೋಲೆ ಇದ್ದು, ಅದರ ಪ್ರಕಾರ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ನಗರ ಪ್ರದೇಶದಲ್ಲಿರುವ ಕೈಗಾರಿಕಾ ಪ್ರದೇಶದ ತೆರಿಗೆ ವಿಷಯದಲ್ಲಿ ವಿವಾದ ಉಳಿದುಕೊಂಡಿದೆ. ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ರವರು ಇಲ್ಲಿಗೆ ಆಗಮಿಸಿದ್ದಾಗ, ಈ ಸಮಸ್ಯೆಯ ಬಗ್ಗೆ ನಾವು ಅವರ ಗಮನ ಸೆಳೆದಿದ್ದೇವೆ.
ಅವರೂ ಸಹ ಇದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದು, ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ತೆರಿಗೆಯ ಸ್ಲಾಬ್ ರಚಿಸುವ ನಿಟ್ಟಿನಲ್ಲಿ ಸುತ್ತೋಲೆ ಅಗತ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ ಕಾರಣ ಹೊಸ ಸುತ್ತೋಲೆ ಬರುವವರೆಗೂ ಪಾಲಿಕೆಯಿಂದ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು.
ತೆರಿಗೆ ಪಾವತಿಸಲು ಎಲ್ಲ ಕೈಗಾರಿಕೋದ್ಯಮಿಗಳೂ ಸಿದ್ಧರಿದ್ದಾರೆ. ಆದರೆ ಅದು ಇಲ್ಲಿನ ಕೈಗಾರಿಕೋ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಈಗಲೇ ಎಲ್ಲರಿಂದಲೂ ತೆರಿಗೆ ಪಡೆದುಕೊಳ್ಳಬೇಕೆಂದಿದ್ದರೆ, ಸದ್ಯಕ್ಕೆ ಗ್ರಾಮೀಣ ಪ್ರದೇಶದ ಸುತ್ತೋಲೆಗೆ ಅನುಗುಣವಾಗಿ ಪಡೆಯಲು ನಮ್ಮ ಅಭ್ಯಂತರವೇನೂ ಇಲ್ಲ. ಹೊಸ ಸುತ್ತೋಲೆ ಬಂದ ಬಳಿಕ ಅದಕ್ಕೆ ಅನುಗುಣವಾಗಿ ನಾವು ತೆರಿಗೆ ಸಲ್ಲಿಸಲು ಸಿದ್ದರಿದ್ದೇವೆ ಎಂದು ಎಚ್.ಜಿ.ಚಂದ್ರಶೇಖರ್ ಸ್ಪಷ್ಟಪಡಿಸಿದರು.
ಇವರ ಮಾತಿಗೆ ಪೂರಕವಾಗಿ ಮಾತನಾಡಿದ ಮತ್ತೋರ್ವ ಕೈಗಾರಿಕೋದ್ಯಮಿ ರಾಜಗೋಪಾಲ್ ಅವರು ತುಮಕೂರು ನಗರದ ಬಿ.ಎಚ್.ರಸ್ತೆಯ ಕೈಗಾರಿಕಾ ಪ್ರದೇಶದ ದುಸ್ಥಿತಿಯನ್ನು ಸಭೆಯ ಗಮನಕ್ಕೆ ತಂದರು. ಇಲ್ಲಿ ಶೇ. 60 ರಿಂದ 70 ರಷ್ಟು ಆಸ್ತಿಗಳಿಗೆ ಖಾತೆ ಆಗಿದೆ. ಆದರೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮತ್ತು ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ಇಲ್ಲಿ ಕಂದಾಯ ಪಾವತಿಸುವವರಿಗಾದರೂ ನೀರು, ಒಳಚರಂಡಿ ಸೌಲಭ್ಯ ಕಲ್ಪಿಸಿಕೊಡಿ. ಇಲ್ಲೊಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಿ. ಈ ಬಾರಿಯ ಬಜೆಟ್ನಲ್ಲಿ ಇವುಗಳಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಂಡರು.
ಪಾಲಿಕೆ ಬೋರ್ವೆಲ್ಗಳ ರೀಚಾರ್ಜ್ಗೆ ಕ್ರಮ ಅಗತ್ಯ
ನಗರಾದ್ಯಂತ ಮಹಾನಗರ ಪಾಲಿಕೆ ವತಿಯಿಂದ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಅನೇಕ ಕೊಳವೆ ಬಾವಿಗಳು ನೀರಿಲ್ಲದೆ ನಿರುಪಯುಕ್ತವಾಗಿದ್ದು, ಇಂತಹ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ದೊರಕುವಂತೆ ಮಾಡಲು ಸದರಿ ಕೊಳವೆ ಬಾವಿಗಳಲ್ಲಿ ಜಲಮರುಪೂರಣಕ್ಕೆ (ಬೋರ್ವೆಲ್ ರೀಚಾರ್ಜ್) ಕಾರ್ಯಕ್ರಮ ರೂಪಿಸಬೇಕು. ಇದೇ ರೀತಿ ನಗರಾದ್ಯಂತ ಸೆಲ್ಲರ್ ನಿಯಮ ಉಲ್ಲಂಘಿಸಿರುವ ವಾಣಿಜ್ಯ ಕಟ್ಟಡಗಳಿಗೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಬಾರದು. ಈ ನಿಟ್ಟಿನಲ್ಲಿ ಹೊಸ ಬಜೆಟ್ನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಿ ಎಂದು ಹೋರಾಟಗಾರ ಸುಧೀಂದ್ರ ಕೋರಿದರು.
ಹೋಟೆಲ್ ಮಾಲೀಕರ ಸಂಘದ ಪರವಾಗಿ ಜಿ.ಕೆ.ಶ್ರೀನಿವಾಸ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಂದ ತೆರಿಗೆದಾರರಾದ ಹೋಟೆಲ್ ಮಾಲೀಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಎಲ್ಲೆಂದರಲ್ಲಿ ಬೀದಿಬದಿ ವ್ಯಾಪಾರ ಮಾಡುವುದನ್ನು ನಿಯಂತ್ರಿಸಬೇಕು. ನಗರದ ಆಯ್ದ ಭಾಗಗಳಲ್ಲಿ ವೆಂಡರ್ಜೋನ್ ರೂಪಿಸಿ, ಅಲ್ಲಿ ಮಾತ್ರ ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಬೇಕು. ಅವರಿಂದಲೂ ತೆರಿಗೆ ಸಂಗ್ರಹಿಸಬೇಕು.
ಲಕ್ಷಾಂತರ ರೂ. ವಿನಿಯೋಗಿಸಿ ಹೊಸ ಹೊಸ ಫುಟ್ಪಾತ್ಗಳನ್ನು ನಿರ್ಮಿಸುತ್ತಿದ್ದು, ಇವುಗಳು ಪಾದಚಾರಿಗಳಿಗೆ ಬಳಕೆಯಾಗಬೇಕೇ ವಿನಃ, ಬೀದಿಬದಿ ವ್ಯಾಪಾರಿಗಳಿಗಲ್ಲ ಎಂದು ಒತ್ತಿ ಹೇಳಿದರು. ಪಾಲಿಕೆಯ ಬಗ್ಗೆ ಪ್ರತಿವರ್ಷ ಆಡಿಟ್ ವರದಿ ಬರುತ್ತಿದ್ದು, ಅದರಲ್ಲಿ ಪಾಲಿಕೆಯ ಅನೇಕ ಕ್ರಮಗಳ ಬಗ್ಗೆ ಆಡಿಟ್ ವರದಿಯಲ್ಲಿ ತೀವ್ರ ಆಕ್ಷೇಪಗಳಿರುವುದು ಕಂಡುಬರುತ್ತದೆ. ಆದರೆ ಒಮ್ಮೆಯೂ ಇದಕ್ಕೆ ಕಾರಣರಾದ ಅಧಿಕಾರಿ/ಸಿಬ್ಬಂದಿ ಮೇಲೆ ಕ್ರಮ ಕೈಗೊಂಡ ಉದಾಹರಣೆಯೇ ಕಂಡುಬರುತ್ತಿಲ್ಲ ಎಂಬ ಬಗ್ಗೆ ಅವರು ಸಭೆಯ ಗಮನ ಸೆಳೆದರು.
ಪದ ಬಳಕೆಗೆ ಗರಂ, ಪದ ವಾಪಸ್ಗೆ-ಕ್ಷಮೆಗೆ ಆಗ್ರಹ
ಪಾಲಿಕೆಯ ತೆರಿಗೆ ಪದ್ಧತಿ ಬಗ್ಗೆ ಆಕ್ಷೇಪಿಸುತ್ತಿದ್ದ ನಾಗರಿಕ ಜಿ.ಎಸ್.ಬಸವರಾಜು ಮಾತಿನ ನಡುವೆ ಪಾಲಿಕೆಯು ಹಗಲು ದರೋಡೆ ಮಾಡುತ್ತಿದೆ.. ಬ್ಲಾಕ್ಮೇಲ್ ಮಾಡುತ್ತಿದೆ ಎಂದು ಏರಿದ ದನಿಯಲ್ಲಿ ಪದೇ ಪದೇ ಆರೋಪಿಸಿದಾಗ, ವೇದಿಕೆಯಲ್ಲಿದ್ದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಗರಂ ಆದರು. ನೀವು ಆ ರೀತಿ ಮಾತನಾಡುವುದು ಸರಿಯಲ್ಲ. ಹಗಲು ದರೋಡೆ, ಬ್ಲಾಕ್ಮೇಲ್ ಎಂದರೆ ಏನರ್ಥ? ನೀವು ಆ ಪದಗಳನ್ನು ವಾಪಸ್ ಪಡೆಯಬೇಕು. ಈ ಸಭೆಯ ಕ್ಷಮೆ ಕೇಳಬೇಕು ಎಂದು ಏರಿದ ದನಿಯಲ್ಲಿ ಪ್ರತಿಕ್ರಿಯಿಸಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲೇ ಇದ್ದ ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮೌನವಾಗುಳಿದ ಕಾರಣ, ಆ ವಿಷಯ ಅಷ್ಟಕ್ಕೇ ತಣ್ಣಗಾಯಿತು.
ನನ್ನ ಕಸ-ನನ್ನ ಜವಾಬ್ದಾರಿ
ರಂಗಕರ್ಮಿ ಡಮರುಗ ಉಮೇಶ್ ಸಭೆಯಲ್ಲಿ ಮಾತನಾಡುತ್ತ, ನಗರದ ಸ್ವಚ್ಛತೆ ಕಾಪಾಡಲು ಹಾಗೂ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಈ ಬಾರಿಯ ಬಜೆಟ್ನಲ್ಲಿ ನನ್ನ ಕಸ-ನನ್ನ ಜವಾಬ್ದಾರಿ ಎಂಬ ಹೊಸ ಕಾರ್ಯಕ್ರಮವನ್ನು ಘೋಷಿಸಬೇಕು ಎಂಬ ಸಲಹೆಯಿತ್ತರು. ಈ ರೀತಿ ಮಾಡಿದಲ್ಲಿ ಮನೆ-ಮನೆ ಹಂತದಲ್ಲೇ ಕಸ ವಿಂಗಡಣೆಗೊಂಡು, ಕಸವಿಲೇವಾರಿಯ ಮುಂದಿನ ಪ್ರಕ್ರಿಯೆಗಳು ಸರಾಗವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತೆರಿಗೆ ಏರಿಸದಿರಿ
ಮಾಜಿ ನಗರಸಭಾ ಸದಸ್ಯ ಕೆ.ಪಿ. ಮಹೇಶ್, ಆಸ್ತಿ ತೆರಿಗೆಯನ್ನು ಈ ಬಾರಿ ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಈ ಬಾರಿ ಜನಸ್ನೇಹಿ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು. ವಾರ್ಡ್ ಸಮಿತಿ ರಚಿಸಿ, ಪಾಲಿಕೆ ಕಚೇರಿ ಪೇಪರ್ಲೆಸ್ ಆಗಲಿ, ಭೌಗೋಳಿಕ ಆಸ್ತಿ ಸಮೀಕ್ಷೆ ಕೈಗೊಳ್ಳಿ, ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ, ಫುಟ್ಪಾತ್ ಅಭಿವೃದ್ಧಿಗೊಳಿಸಿ ಎಂದು ಬಜೆಟ್ ಆದ್ಯತೆಗಳ ಬಗ್ಗೆ ಪಟ್ಟಿ ಮಾಡಿದರು.
ಸಭೆಯಲ್ಲಿ ಮಾಜಿ ನಗರಸಭಾ ಸದಸ್ಯೆ ಸುಜಾತಾ ಚಂದ್ರಶೇಖರ್, ಹೋರಾಟಗಾರ ಇಮ್ರಾನ್ ಪಾಷ, ಶ್ರೀನಿಧಿ ರಾಜಣ್ಣ, ರಾಜು, ಅಂಜನ್, ಅರುಣ್, ನಾಗೇಶ್, ಆಶಾರಾಣಿ, ರೇಖಾ, ಜಾಕಿರ್ ಪಾಷ, ಸೈಯದ್ ರಫೀಕ್ ಮೊದಲಾದವರು ಮಾತನಾಡಿ ಹಲವು ವಿಷಯಗಳ ಬಗ್ಗೆ ಪಾಲಿಕೆಯ ಗಮನ ಸೆಳೆದರು.
ಸಭೆಯಲ್ಲಿ ಮೇಯರ್ ಫರೀದಾಬೇಗಂ ಮತ್ತು ಆಯುಕ್ತ ಟಿ.ಭೂಬಾಲನ್ ಸಾರ್ವಜನಿಕರ ಅನಿಸಿಕೆಗಳಿಗೆ ಪ್ರತಿಕ್ರಿಯಿಸಿದರು. ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಹಣಕಾಸು ಸ್ಥಾಯಿಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪಾಲಿಕೆಯ ಲೆಕ್ಕಾಧಿಕಾರಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್ ಮತ್ತು ಬಿ.ಎಸ್.ಮಂಜುನಾಥ್ ಸಭೆಯಲ್ಲಿ ಸಾರ್ವಜನಿಕರೊಂದಿಗೆ ಕುಳಿತು, ಸಾರ್ವಜನಿಕರ ಮಾತುಗಳನ್ನು ಆಲಿಸಿದರು. ಇದು ಬಜೆಟ್ ಪೂರ್ವಭಾವಿ ಸಭೆಯಾಗಿದ್ದು, ಬಜೆಟ್ಗೆ ಸಂಬಂಧಿಸಿದ ಸಲಹೆ-ಸೂಚನೆ ನೀಡಲು ಸಾರ್ವಜನಿಕರನ್ನು ಆಹ್ವಾನಿಸಲಾಗಿತ್ತಾದರೂ, ಸಭೆಯು ಬಹುತೇಕ ದೂರು-ದುಮ್ಮಾನ ಹೇಳಿಕೊಳ್ಳುವ ಸಭೆಯಾಗಿ ಮಾರ್ಪಟ್ಟಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
