ಮಧುಗಿರಿ
ನಿವೇಶನಕ್ಕಾಗಿ ಆಗ್ರಹಿಸಿ ಸ್ಮಶಾನದ ಸಮೀಪ ಸುಮಾರು ಒಂದು ವರ್ಷದಿಂದ ಗುಡಿಸಲು ಕಟ್ಟಿಕೊಂಡು ಹೋರಾಟ ನಡೆಸುತ್ತಿರುವ ಬ್ಯಾಲ್ಯ ಗ್ರಾಮದ ಸ್ಥಳಕ್ಕೆ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿದ್ದರು.
ಸೆ.14 ರಿಂದ ಮೈಸೂರು ಜಿಲ್ಲೆಯ ಹುಣಸೂರಿನ ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರ ಸಮಾಧಿ ಬಳಿಯಿಂದ ಆರಂಭವಾಗಿರುವ 2ನೆ ಮಾರ್ಗದ ಜಾಥಾದ ಪದಾಧಿಕಾರಿಗಳ ತಂಡ ಸೆ.17ರಂದು ಗೌರಿಬಿದನೂರು ಮಾರ್ಗವಾಗಿ ಮಧುಗಿರಿ ತಾಲ್ಲೂಕಿನ ಬ್ಯಾಲ್ಯ ಗ್ರ್ರಾಮಕ್ಕೆ ಭೇಟಿ ನೀಡಿತ್ತು.
ಸರಕಾರಿ ರಜಾದಿನವಾಗಿದ್ದರ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದ ರೂಪು ರೇಷೆಗಳನ್ನು ಒಳಗೊಂಡಿರುವ ಹಾಗೂ ಸೆ.21 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರೈತ, ದಲಿತ ಕಾರ್ಮಿಕರ ಬೃಹತ್ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ನಂತರ ಪಾವಗಡದ ಕಡೆ ಜಾಥಾವನ್ನು ಮುಂದುವರೆಸಿದರು.
ಬ್ಯಾಲ್ಯ ಗ್ರಾಮದಲ್ಲಿ ಸಶ್ಮಾನದ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿರುವ ನಿವೇಶನ ರಹಿತರ ಸಮಸ್ಯೆಗಳನ್ನು ಅರಿತು ಕೊಂಡ ತಂಡವು ಆದಷ್ಟು ಬೇಗ ಸರಕಾರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹೋರಾಟದ ಬೆಂಗಳೂರು ನಗರದ ಅಧ್ಯಕ್ಷ ಮರಿಯಣ್ಣ, ಚೆನ್ನಮ್ಮ, ರಾಜಶೇಖರ ಎಸ್.ಅಂಗಡಿ ಮತ್ತು ತಿಮ್ಮರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/17-madhugiri-02.gif)