ಹೊಸದುರ್ಗ:
ತಾಲ್ಲೂಕಿನ ವಿವಿಧ ಮಠಾಧೀಶರು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದರು.ನಂತರ ಮಾತನಾಡಿದ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಕುಕ್ಕಸಮುದ್ರ ಕೆರೆಯ ಹಳ್ಳದ ಸಾಲಿನ ಮೂಲಕ ವೇದಾವತಿ ನದಿ ಪಾತ್ರದಲ್ಲಿ ಹರಿಯುತ್ತಿರುವ ಭದ್ರೆಯ ನೀರನ್ನು ಈಗಾಗಲೇ ತಾಲ್ಲೂಕಿನ ಜನರು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಬಯಲು ಸೀಮೆ ಹಾಗೂ ಬರದ ನಾಡಿನ ರೈತರ ಹಲವು ವರ್ಷಗಳ ಕನಸು ನನಸಾಗುವ ದಿನ ಸಮೀಪಿಸಿರುವುದು ಸಂತಸ ತಂದಿದೆ. ಇದೇ ರೀತಿ ನೀರು ಚಾನಲ್ನಲ್ಲಿ ಶಾಶ್ವತವಾಗಿ ಹಾಗೂ ನಿರಂತರವಾಗಿ ಹರಿಯಬೇಕಾದರೆ, ಸರ್ಕಾರ ಶೀಘ್ರ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು
ಒತ್ತಾಯಿಸಿದರು.
ಕನಕಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಈ ಭಾಗದ ಜನರಿಗೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗುವ ಬಹು ದೊಡ್ಡ ಯೋಜನೆ ಇದಾಗಿರುತ್ತದೆ. ಸರ್ಕಾರ ಇದಕ್ಕೆ ಹೆಚ್ಚು ಆದ್ಯತೆ ಕೊಟ್ಟು ಇದರ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು. ವಾಣಿವಿಲಾಸ ಸಾಗರಕ್ಕೆ ನೀರು ಕೊಡುತ್ತಿರುವುದು ತುಂಬಾ ದೊಡ್ಡ ಕೆಲಸ. ನೂರಾರು-ಸಾವಿರಾರು ಎಕರೆಗಳಿಗೆ ನೀರು ತುಂಬಿಸುವಂತ ಸುಮಾರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಅನುಕೂಲ ಒದಗಿಸುವ ಕಾಮಗಾರಿಯನ್ನು ಆದಷ್ಟು ಬೇಗ ಈ ಭಾಗದ ಜನಪ್ರತಿನಿಧಿ ಮತ್ತು ಸರ್ಕಾರ ಆಸಕ್ತಿ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿದರು.
ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಭದ್ರಾ ಮೇಲ್ದಂಡೆ ಕಾಮಗಾರಿ ಕೆಲಸ ಬಾಕಿ ಇರುವುದರಿಂದ ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಇತ್ತ ಕಡೆ ಗಮನ ಹರಿಸಿ ಕೆಲಸಮಾಡಬೇಕು. ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ರೈತರು, ಜನರು ನೀರನ್ನು ಅನುಕೂಲವಾಗುವಂತೆ ಬಳಸಿಕೊಳ್ಳಬೇಕು. ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ಕೆರೆಗಳಲ್ಲಿ ನೀರು ನಿಲ್ಲಿಸುವ ತಂತ್ರ ಮಾಡಬೇಕಾಗಿದೆ. ಮಳೆ ನೀರಿಗೆ ಕೆಲವೆಡೆ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ ಕುಸಿದಿದೆ ಎಂಬ ದೂರು ಕೇಳಿಬಂದಿದೆ. ಹಾಗಾಗಿ, ಕಾಮಗಾರಿ ಗುಣಮಟ್ಟ ಕಾಪಾಡಲು ಸರ್ಕಾರ ಮುಂದಾಗಬೇಕು. ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
