ಶಿರಾ ನಿವೃತ್ತ ನೌಕರರ ಭವನದಲ್ಲಿ ಸೂಲಗಿತ್ತಿ ನರಸಮ್ಮನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಶಿರಾ:

        ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಲ್ಲದ ಕಾಲದಲ್ಲಿ ವೈದ್ಯರಾಗಿ ಹೆರಿಗೆ ತಜ್ಞೆಯಾಗಿ 1500 ಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿದ ಕೀರ್ತಿಗೆ ಭಾಜನರಾಗಿರುವ ಸೂಲಗಿತ್ತಿ ನರಸಮ್ಮನರ ಸೇವೆ ಆದರ್ಶನೀಯವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೋ. ಕೆ.ಹನುಮಂತರಾಯಪ್ಪನವರು ತಿಳಿಸಿದರು.

         ಅವರು ನಗರದ ನಿವೃತ್ತ ನೌಕರರ ಭವನದಲ್ಲಿ ಸರಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸೂಲಗಿತ್ತಿ ನರಸಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇವರ ಸೇವೆಯನ್ನು ಗುರ್ತಿಸಿ ಕೇಂದ್ರ ಸರಕಾರ ನೀಡಿದ ಪದ್ಮಶ್ರೀ ಪ್ರಶಸ್ತಿ ಇವರ ಜೀವಿತಾವಧಿಯಲ್ಲೇ ನೀಡಿ ಗೌರವಿಸಿರುವುದು ಸ್ಮರಣೀಯವಾಗಿದೆ ಎಂದರು.

       ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಕಳುವರಹಳ್ಳಿ ಡಿ.ಎಸ್.ಕೃಷ್ಣಮೂರ್ತಿ ಮಾತನಾಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರ ಮೂಲದವರಾದ ಸೂಲಗಿತ್ತಿ ನರಸಮ್ಮ ಅವರು ಚಿಕ್ಕ

       ವಯಸ್ಸಿಗೆ ಮದುವೆಯಾಗಿ 12 ಮಕ್ಕಳಿಗೆ ತಾಯಿಯಾಗಿ, ಸಮಾಜದ ಸೇವೆಯನ್ನೂ ತಮ್ಮ ಜೀವಿತಾವಧಿಯಲ್ಲಿ ಮಾಡಿ ಜೀವನದ ಸಾರ್ಥಕತೆಯನ್ನು ಪಡೆದಿದ್ದಾರೆ ಎಂದರು.ನಿವೃತ್ತ ಮುಖ್ಯ ಶಿಕ್ಷಕ ಕೆ.ನರಸಿಂಹಯ್ಯ ಅವರು ಮಾತನಾಡಿ ಸೂಲಗಿತ್ತಿ ನರಸಮ್ಮ ಅವರ ಬಳಿಗೆ ಅದೆಷ್ಟೋ ಮಹಿಳೆಯರು ತೆರಳಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧ ತಯಾರಿಸಿ ಕೊಡುತ್ತಿದ್ದರು. ಗರ್ಭಿಣಿಯರ ಭ್ರೂಣದ ನಾಡಿಮಿಡಿತ ಅರ್ಥ ಮಾಡಿಕೊಂಡು ಮಗುವಿನ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಅವರು ಸಲಹೆ ನೀಡುತ್ತಿದ್ದರು. ಅನಕ್ಷರಸ್ಥ ಮಹಿಳೆಯಾಗಿ ಪದ್ಮಶ್ರಿ ಪ್ರಶಸ್ತಿ ಪಡೆದ ಏಕೈಕ ಮಹಿಳೆ ಸೂಲಗಿತ್ತಿ ನರಸಮ್ಮನವರು ಎಂದರು.

         ಕಾರ್ಯಕ್ರಮದಲ್ಲಿ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ, ಕಟಾವೀರನಹಳ್ಳಿ ಪ್ರೋ. ಹನುಮಂತರಾಯಪ್ಪ, ಕಾರ್ಯದರ್ಶಿ ಕರೆಜವನಹಳ್ಳಿ ಲಿಂಗಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮಯ್ಯ, ಪಾತಲಿಂಗಪ್ಪ, ಸಿದ್ದಗಂಗಮ್ಮ, ಬಡೇನಹಳ್ಳಿ ಗೋವಿಂದಪ್ಪ, ಹೆಚ್.ಜಯರಾಮಯ್ಯ, ಎಲ್.ರಂಗಯ್ಯ, ಕೆಂಚಪ್ಪ, ಬಿ.ಜೆ.ಕರಿಯಪ್ಪ, ನಾನ್ಯಾನಾಯಕ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link