ಬೆಂಗಳೂರು
ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ, ನೆರೆ ಪರಿಸ್ಥಿತಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಅಣಿಯಾಗುತ್ತಿದೆ.
ಕೆಪಿಸಿಸಿ ವತಿಯಿಂದ ನೆರೆ ಕುರಿತು ಅಧ್ಯಯನಕ್ಕೆ ಹಾಲಿ ಮಾಜಿ ಶಾಸಕರನ್ನೊಳಗೊಂಡ ತಂಡ ರಚನೆಯಾಗಲಿದ್ದು, ಈ ತಂಡ ಕೆಪಿಸಿಸಿ ಸೂಚಿಸಿದ ಜಿಲ್ಲೆಗಳಲ್ಲಿ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಲಿದ್ದಾರೆ.
ಕಳೆದ ಬಾರಿಯಂತೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಮಲೆನಾಡು, ಉತ್ತರ ಕರ್ನಾಟಕದ ಕೆಲ ಭಾಗಗಳು ಹಾಗೂ ಕೊಡಗು, ಕರಾವಳಿ ಜಿಲ್ಲೆಗಳು ತತ್ತರಿಸಿವೆ. ನೆರೆ ಅವಲೋಕನಕ್ಕೆ ಕೆಪಿಸಿಸಿ ಮುಂದಾಗಿದ್ದು, ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡು ದಿನ ಕೊಡಗಿಗೆ ಭೇಟಿ ನೀಡಲಿದ್ದಾರೆ.ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇಂದು ಕೊಡಗಿಗೆ ತೆರಳುತ್ತಿದ್ದು,ನಾಳೆಯಿಂದ ಎರಡು ದಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಮಟ್ಟದಲ್ಲಿ ಮಾಹಿತಿ ಪಡೆಯುವುದಾಗಿ ಹೇಳಿದರು.
ನೆರೆ ಅಧ್ಯಯನಕ್ಕಾಗಿ ಕೆಪಿಸಿಸಿಯಿಂದ ತಂಡ ರಚಿಸಲಾಗುತ್ತಿದ್ದು,ಸರ್ಕಾರ ನೆರೆ ವಿಚಾರದಲ್ಲಿ ಏನು ಮಾಡಿದೆ. ಕಾಂಗ್ರೆಸ್ ಏನು ಮಾಡಬೇಕೆನ್ನುವ ವರದಿ ನೀಡಲು ಸೂಚಿಸಲಾಗವುದು ಎಂದರು.ಕಾವೇರಿ ಜಲ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ.ಮಖ್ಯಮಂತ್ರಿಗಳು ಆಸ್ಪತ್ರೆಯಲ್ಲಿಯೇ ಇದ್ದು ಪರಿಹಾರ ಘೋಷಣೆ ಮಾಡಿದ್ದಾರೆ.ಸಚಿವರಿಗೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಹೇಳಿದ್ದಾರೆ.ಆದರೆ ಬಹುತೇಕ ಸಚಿವರು ತಮ್ಮ ಜಿಲ್ಲೆಯಲ್ಲಿಯೇ ಉಳಿದಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಸಚಿವ ಕೆ.ಎಸ್.ಈಶ್ವರಪ್ಪ ನೆರೆ ವಿಚಾರ ಬಿಟ್ಟು ಬಾಕಿ ಎಲ್ಲಾ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಡಿಕೆಶಿ ಕಿಡಿಕಾರಿದರು.
ಸಚಿವರು ಜಿಲ್ಲೆಗಳಿಗೆ ಹೋಗಿ ಬೇರೆ ಕೆಲಸ ಮಾಡುತ್ತಿದ್ದಾರೆ.ನೆರೆಗಿಂತಲೂ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಕಾಂಗ್ರೆಸ್ ನಾಯಕರು ಇದುವರೆಗೂ ನೆರೆ ಬಗ್ಗೆ ಮಾತನಾಡಿಯೇ ಇಲ್ಲ.ಆದರೂ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಮಾತ್ರ ಕುಂಬಳಕಾಯಿ ಕಳ್ಳ ಎಂದರೆ ತಮ್ಮ ಹೆಗಲು ಮುಟ್ಟಿಕೊಂಡ ಎಂಬಂತೆ ಮಾತನಾಡುತ್ತಿದ್ದಾರೆ. ಅವರೇ ಮೈಮೇಲೆ ವಿವಾದ ಎಳೆದುಕೊಳ್ಳುತ್ತಿದ್ದಾರೆ ಎಂದರು.
ಕೆಲ ಸಚಿವರು ಇನ್ನೂ ಜಿಲ್ಲೆಗಳಿಗೆ ಹೋಗಿಲ್ಲ.ಅವರಿನ್ನೂ ಬೆಂಗಳೂರಲ್ಲಿನಲ್ಲಿಯೇ ಮಲಗಿದ್ದಾರೆ. ಇಲ್ಲಿಯೇ ಮಲಗಲಿ ಬಿಡಿ ಎಂದು ಕುಹಕವಾಡಿದರು.ಸರ್ಕಾರದಲ್ಲಿ ಯಡಿಯೂರಪ್ಪ ಅವರ ಸಂಪುಟದ ಸದಸ್ಯರೇ ಮುಖ್ಯಮಂತ್ರಿಗಳನ್ನೇ ಡಿಗ್ರೇಡ್ ಮಾಡಲು ಹೊರಟಿದ್ದಾರೆ.ಯಾರೇನೇ ಮಾತನಾಡಿದರೂ ತಮಗೆ ಮಾಹಿತಿ ಸಿಗುತ್ತದೆ.ಅವರ ವಿರುದ್ಧ ನಾವು ಟೀಕೆ ಮಾಡಲು ಹೊಗುವುದಿಲ್ಲ. ನಮ್ಮ ಬಗ್ಗೆ ಯಾರೇನೇ ಮಾತನಾಡಿದರೂ ಎಲ್ಲವೂ ಗೊತ್ತಾಗುತ್ತದೆ. ಬಿಜೆಪಿಯವರು ಏನು ಮಾತನಾಡಿದರು,
ನಮ್ಮವರು ಏನು ಮಾತನಾಡಿದರೆನ್ನುವುದು ಎಲ್ಲಾ ಗೊತ್ತಾಗುತ್ತದೆ.ಅವರು ಏನೇನೋ ಮಾತನಾಡಿದರೆ ಹೇಗೆ?ಎಂದು ಪರೋಕ್ಷವಾಗಿ ಅಶ್ವತ್ಥ ನಾರಾಯಣ ವಿರುದ್ಧ ಮಾರ್ಮಿಕವಾಗಿ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ