ತುಮಕೂರಿನಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮುಖಂಡರುಗಳಿಂದಲೇ ಆಹ್ವಾನ: ದೇವೇಗೌಡರು

ತುಮಕೂರು

        ನಾನು ತುಮಕೂರು ಕ್ಷೇತ್ರದಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖಂಡರೇ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ನಾನಿಲ್ಲಿ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಬೆಂಬಲದಿಂದಲೇ ಈ ಕ್ಷೇತ್ರಕ್ಕೆ ಬರುತ್ತಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

       ಭಾನುವಾರ ಸಂಜೆ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿ ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ಭೇಟಿ ಮಾಡಿ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

         ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಈ ಹಿಂದೆಯೇ ಸೀಟುಗಳ ಹಂಚಿಕೆಯಾಗಿತ್ತು. ಮೈತ್ರಿ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಟ್ಟಿದ್ದಾರೆ. ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟನಂತರ ಕಾಂಗ್ರೆಸ್ ಮುಖಂಡರೇ ನನ್ನ ಸ್ಪರ್ಧೆಗೆ ಮನವಿ ಮಾಡಿದ್ದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೇ ನನ್ನ ಮನೆಗೆ ಬಂದು ತುಮಕೂರಿನಿಂದ ಸ್ಪರ್ಧಿಸುವುದಾದರೆ ನೀವೇ ಬಂದು ನಿಲ್ಲಿ ಎಂದು ಕೇಳಿಕೊಂಡಿದ್ದರು. ಅವರು ಸೇರಿದಂತೆ ಇಲ್ಲಿನ ಟಿ.ಬಿ.ಜಯಚಂದ್ರ ಮತ್ತಿತರರು ಕೇಳಿಕೊಂಡಿದ್ದಾರೆ.

      ಇಂದು ಸಹ ತುಮಕೂರಿನಲ್ಲಿ ಸಭೆ ಸೇರಿ ನನಗೆ ಆಹ್ವಾನ ನೀಡಿದ್ದಾರೆ. ಇದರಿಂದಾಗಿ ತುಮಕೂರಿನಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು.ಸೋಮವಾರ ಮಧ್ಯಾಹ್ನ 2 ರಿಂದ 2.15ರ ಸಮಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಹ ನನ್ನೊಂದಿಗೆ ಬರಲಿದ್ದಾರೆ ಎಂದರು. ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿ ಗದ್ದುಗೆಯ ಹಾಗೂ ಶ್ರೀಗಳ ದರ್ಶನ ಪಡೆದಿದ್ದೇನೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link