ಹೊನ್ನಾಳಿ:
ಅನ್ನದಾತನ ಬದುಕಿಗೆ ಭದ್ರತೆ ಒದಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕಮ್ಮಾರಗಟ್ಟೆ ತಾಂಡಾದಲ್ಲಿ ಸಾಲಭಾದೆ ತಾಳಲಾರದೇ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ಸಂತೋಷ್ನಾಯ್ಕ(35) ಅವರ ಮನೆಗೆ ಭೇಟಿ ನೀಡಿ ರೈತನ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ ಅವರು ಮಾತನಾಡಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹಸಿರು ಶಾಲು ಹೊದ್ದು ಘೋಷಣೆ ಮಾಡಿದ್ದರು. ಆದರೆ, 6 ತಿಂಗಳಾದರೂ ತಮ್ಮ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರೈತರ ಮೂಗಿಗೆ ತುಪ್ಪ ಸವರಿ ಅನ್ನದಾತರನ್ನು ಬೀದಿಗೆ ತಂದಿದ್ದಾರೆ. ಸರಕಾರದ ರೈತ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇ ಈ ಸರಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.
ಸಾಲ ಬಾಧೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ನಾಯ್ಕ ಎಂಬ ರೈತ ಪತ್ನಿ ಸಾಕಿಬಾಯಿ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಹೊಂದಿದ್ದಾನೆ. ಕುಟುಂಬ ನಿರ್ವಹಣೆಗೆ 6.5 ಎಕರೆಯಷ್ಟು ಖುಷ್ಕಿ ಜಮೀನು ಹೊಂದಿದ್ದು, ಬಿತ್ತಿದ ಮೆಕ್ಕೆಜೋಳ ಮಳೆಯಿಲ್ಲದೇ ನಾಶವಾಗಿತ್ತು ಎನ್ನಲಾಗಿದೆ. ಕೃಷಿಗಾಗಿ ಖಾಸಗಿ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ 6 ಲಕ್ಷ ರೂ.ಗಳಷ್ಟು ಸಾಲ ಮಾಡಿದ್ದ ಎನ್ನಲಾಗಿದೆ.
ಇತ್ತ ಕುಟುಂಬ ನಿರ್ವಹಣೆ ಜೊತೆಗೆ ಬೆಳೆಯೂ ನಷ್ಟವಾಗಿ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬ ಬೀದಿ ಪಾಲಾಗಿದೆ. ಸರಕಾರದ ಜನವಿರೋಧಿ ನೀತಿಯಿಂದಾಗಿ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದರೂ, ಈ ಸರಕಾರ ಕೇವಲ ಕುರ್ಚಿಗಾಗಿ ದಿನ ನಿತ್ಯ ಕಿತ್ತಾಡುತ್ತಿದ್ದು, ಅಭಿವೃದ್ಧಿ ಶೂನ್ಯವಾಗಿ ಈವರೆಗೂ ಯಾವುದೇ ಕಾಮಗಾರಿಗಳಿಗೆ ಬಿಡಿಗಾಸೂ ಕೂಡ ಬಿಡುಗಡೆಯಾಗಿಲ್ಲ ಎಂದರು.
ಮೃತ ರೈತನ ಕುಟುಂಬ ವರ್ಗದವರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
