ಶಿರಾ : ಬೆಂಬಿಡದೆ ಬೆನ್ನು ಹತ್ತಿದ ಕೊರೋನಾ ಸೋಂಕು

ಶಿರಾ:

   ಆಂದ್ರದ ಹಿಂದೂಪರ, ಬೆಂಗಳೂರಿನ ಪಾದರಾಯನಪುರ…ಹೀಗೆ ವಿವಿಧ ಭಾಗಗಳಿಂದ ಶಿರಾ ತಾಲ್ಲೂಕಿಗೆ ಬಂದು ವಕ್ಕರಿಸಿದ ಕೋರೋನಾ ಸೋಂಕಿಗೆ ಇಡೀ ತಾಲ್ಲೂಕು ಕಳೆದ ನಾಲ್ಕು ತಿಂಗಳಿಂದಲೂ ತತ್ತರಿಸಿ ಹೋಗಿದೆ.

    ಒಂದೊಂದೇ ಭಾಗದಿಂದ ಬಂದು ಶಿರಾ ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಓಡಾಡಿಕೊಂಡು ಬಂದಿದ್ದವರಿಂದ ಹಂತ ಹಂತವಾಗಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ತಾಲ್ಲೂಕು ಆಡಳಿತಕ್ಕೂ ತಲೆ ನೋವಾಗಿ ಪರಿಣಮಿಸಿದೆ.
ಹೊದೆಯಾ ಪಿಶಾಚಿ ಅಂದ್ರೆ…..ಬಂದೆ ಗವಾಕ್ಷೀಲಿ ಎಂಬ ನಾಣ್ಣುಡಿಯಂತೆ ಸೋಂಕು ತಗುಲಿದ ಮಂದಿ ಗುಣಮುಖರಾಗಿ ಮನೆ ಸೇರಿಕೊಂಡರು ಎಂದು ತಾಲ್ಲೂಕು ಆಡಳಿತ ನಿಶ್ಚಿಂತೆಯಿಂದ ಇರುವ ಹೊತ್ತಿಗೆ ಮತ್ತೊಂದು ಕಡೆಯಿಂದ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಹೋಗಿ ಬಂದವರು ಸೋಂಕನ್ನು ಹೊತ್ತು ತಂದು ಮಳೆಗಾಲದ ಬೀಜದಂತೆ ಬಿತ್ತುತ್ತಿರುವುದು ಇಡೀ ತಾಲ್ಲೂಕಿನ ಜನತೆಯ ಆತಂಕಕ್ಕೆ ಕಾರಣವೂ ಆಗಿದೆ.

    ಈ ಹಿಂದೆ ಹಿಂದೂಪುರದಿಂದ ಶಿರಾ ನಗರಕ್ಕೆ ಆಗಮಿಸಿದ್ದ ಸೋಂಕಿತ ವ್ಯಕ್ತಿ ಸೂಪರ್ ಸ್ಪ್ರೈಡರ್ ಆಗಿಬಿಡುತ್ತಾನೇನೋ ಎಂಬ ಆತಂಕದಿಂದ ನಗರದ ಅನೇಕ ರಸ್ತೆಗಳನ್ನು ಸೀಲ್‍ಡೌನ್ ಮಾಡುವ ಮೂಲಕ ರೋಗ ನಿಯಂತ್ರಣ ಮಾಡುವಲ್ಲಿ ಕೊನೆಗೂ ತಾಲ್ಲೂಕು ಆಡಳಿತ ಯಶಸ್ವಿಗೊಂಡಿತ್ತು.

   ಹೊರ ರಾಜ್ಯಗಳಿಂದ ಬಂದಿದ್ದ ಸೋಂಕಿತರಿದ್ದ ಇನ್ನೂ ಕೆಲ ಬಡಾವಣೆಗಳ ರಸ್ತೆಗಳನ್ನು ಈವರೆವಿಗೂ ಸೀಲ್‍ಡೌನ್ ತೆರವುಗೊಳಿಸಿಲ್ಲ ವಾದರೂ ಒಂದಲ್ಲ ಒಂದು ರೀತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವೂ ಆಗುತ್ತಿರುವುದು ಆರೋಗ್ಯ ಇಲಾಖೆ, ನಗರಸಭೆ ಹಾಗೂ ಇಡೀ ತಾಲ್ಲೂಕು ಆಡಳಿತಕ್ಕೆ ಸವಾಲಿನ ಸಂಗತಿಯಾಗಿ ಕಾಣತೊಡಗಿದೆ.

   ಶುಕ್ರವಾರ ಒಂದೇ ದಿನದಲ್ಲಿ ತಾಲ್ಲೂಕಿನಲ್ಲಿ ಒಟ್ಟು ಮೂವರಿಗೆ ಸೋಂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಶಿರಾ ನಗರದಲ್ಲಿ ಇಬ್ಬರು ಹಾಗೂ ಪ.ನಾ.ಹಳ್ಳಿ ಸಮೀಪದ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮತ್ತೊರ್ವ ವ್ಯಕ್ತಿಗೆ ಸೋಂಕು ದೃಢಗೊಂಡಿದೆ.ರಾಜಸ್ಥಾನದಿಂದ ಶಿರಾ ನಗರಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ನಗರವನ್ನೂ ಪ್ರವೇಶಿಸದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೇನ್‍ನಲ್ಲಿದ್ದರು. ಇವರ ಗಂಗಲು ದ್ರವ ಪರೀಕ್ಷೆ ಕಳುಹಿಸಲಾಗಿದ್ದು ಜೂನ್:26 ರಂದು ಈಕೆಯ ಫಲಿತಾಂಶವೂ ಪಾಸಿಟೀವ್ ಬಂದಿದೆ ಎನ್ನಲಾಗಿದೆ.

   ಶಿರಾ ನಗರದ ಸಿಂಗ್ ಲೇಔಟ್‍ನ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಹೋಗಿ ಮರಳಿ ಬಂದಿದ್ದು ಗಂಟಲು ನೋವಿನಿಂದ ಚಕಿತ್ಸೆ ಪಡೆದಿದ್ದು ಇವರ ಸ್ವಾಬ್‍ನ್ನು ಕೂಡಾ ಪರೀಕ್ಷೆಗೆ ಕಳುಹಿಸಲಾಗಿದ್ದು ಜೂನ್:26 ರಂದು ಸದರಿ ವ್ಯಕ್ತಿಗೂ ಸೋಂಕು ದೃಢಗೊಂಡಿದೆ .ಕಾಮಗೊಂಡನ ಹಳ್ಳಿಯ ಸೋಂಕಿತ ವಿದ್ಯಾರ್ಥಿಯ ತಂದೆಗೂ ಸೋಂಕು ದೃಢಗೊಂಡಿದ್ದು ಶುಕ್ರವಾರ ಒಂದೇ ದಿನ ಶಿರಾ ತಾಲ್ಲೂಕಿನಲ್ಲಿ ಒಟ್ಟು ಮೂರು ಪ್ರಕರಣಗಳು ದೃಢಗೊಂಡಿದ್ದು ಹಂತ ಹಂತವಾಗಿ ಗ್ರಾಮೀಣ ಭಾಗಕ್ಕೂ ಸೋಂಕು ಅಂಬೆಗಾಲಿಟ್ಟು ಸಾಗುತ್ತಿರುವುದು ಅಚ್ಚರಿ ಮೂಡಿಸಿದೆ.

    ಇವೆಲ್ಲದರ ನಡುವೆ ಪಟ್ಟನಾಯಕನಹಳ್ಳಿ ಸಮೀಪದ ಕಾಮಗೊಂಡನಹಳ್ಳಿಗೆ ವಕ್ಕರಿಸಿದ ಆಂದ್ರದ ರಾಯದುರ್ಗದ ಸೋಂಕು ಬಹುತೇಕ ಶಿಕ್ಷಣ ಇಲಾಖೆಯ ಸಿಬ್ಬಂಧಿಯನ್ನು ಗಾಬರಿ ಹುಟ್ಟಿಸಿದೆ. ಕಾಮಗೊಂಡನಹಳ್ಳಿಯಲ್ಲಿ ವಾಸವಿದ್ದ ಶಿಕ್ಷಕರೊಬ್ಬರು ರಜೆಗಾಗಿ ಆಂದ್ರದ ರಾಯದುರ್ಗಕ್ಕೆ ಹೋದವರು ಮಗನನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಸಲು ಹಾಗೂ ತಾವೂ ಕೂಡಾ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಜೂನ್:23 ರಂದು ಗ್ರಾಮಕ್ಕೆ ವಾಪಸ್ ಬಂದಿದ್ದರು.

    ತನ್ನ ಮಗ ಪರೀಕ್ಷೆ ಬರೆಯುತ್ತಿರುವುದರಿಂದ ಪರೀಕ್ಷಾ ಕೇಂದ್ರದಿಂದ ತನ್ನನ್ನು ಬಿಡುಗೊಡೆಗೊಳಿಸುವಂತೆಯೂ ಶಿಕ್ಷಣ ಇಲಾಖೆಗೆ ಸದರಿ ಶಿಕ್ಷಕರು ಮನವಿ ಮಾಡಿದ್ದರು. ವಿದ್ಯಾರ್ಥಿಗೆ ಸೋಂಕು ಇರುವುದು ದೃಢಗೊಂಡಾಗ ಕೂಡಲೇ ವಿದ್ಯಾರ್ಥಿಯ ತಂದೆಯ ಸ್ವಾಬ್ ಸಂಗ್ರಹಿಸಿ ಕ್ವಾರಂಟೇನ್‍ನಲ್ಲಿಡಲಾಗಿತ್ತು. ಜೂನ್:26 ರಂದು ಸದರಿ ಶಿಕ್ಷಕರ ಸ್ವಾಬ್ ಫಲಿತಾಂಶವೂ ಪಾಸಿಟೀವ್ ಬಂದಿದ್ದು ಇದೀಗ ಶಿಕ್ಷಣ ಇಲಾಖೆಯ ಅನೇಕ ಸಿಬ್ಬಂಧಿಯೂ ಕೂಡಾ ಗಾಬರಿಪಡುವಂತಾಗಿದೆ.

    ಸೋಂಕಿತ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದ ಪ.ನಾ.ಹಳ್ಳಿಯ ಪ್ರೌಢಶಾಲೆಯ ಶಿಕ್ಷಕರು, ಪರೀಕ್ಷಾ ಮೇಲ್ವಿಚಾರಕರು, ಡಿ.ಗ್ರೂಪ್ ನೌಕರರು ಸೇರಿದಂತೆ ಒಟ್ಟು 14 ಮಂದಿ ಶಿಕ್ಷಣ ಇಲಾಖೆಯ ಸಿಬ್ಬಂಧಿಯನ್ನು ಕ್ವಾರಂಟೇನ್‍ಗೆ ಒಳಪಡಿಸಲಾಗಿದೆ.

ಸೀಲ್‍ಡೌನ್:

   ಶಿರಾ ನಗರದ ಶಿರಾ-ತುಮಕೂರು ರಸ್ತೆಯ ಸಿಂಗ್ ಲೇಔಟ್‍ನಲ್ಲಿ ವಾಸವಿದ್ದ ಸೋಂಕಿತೆಯ ಮನೆಯ ವ್ಯಾಪ್ತಿಯ 100 ಮೀಟರ್ ವ್ಯಾಪ್ತಿಯನ್ನು ಶುಕ್ರವಾರ ಸೀಲ್‍ಡೌನ್ ಮಾಡಲಾಗಿದ್ದು ಸ್ಯಾನಿಟೈಸರ್ ಕೂಡಾ ಮಾಡಲಾಗಿದೆ. ತಹಶೀಲ್ದಾರ್ ಶ್ರೀಮತಿ ನಾಹಿದಾ ಜಮ್ ಜಮ್, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿ ಭೇಟಿ ನೀಡಿ ಸದರಿ ಬಡಾವಣೆಯ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.

ಬುಕ್ಕಾಪಟ್ಟಣದಲ್ಲಿ ಆತಂಕ:

    ಶುಕ್ರವಾರ ಮಧ್ಯಾನ್ಹನದ ನಂತರ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆತಂಕದ ವಾತಾವರಣ ಸೃಷ್ಠಿಯಾಯಿತು. ಶುಕ್ರವಾರ ಮಧ್ಯಾನ್ಹ ದಿಡೀರನೆ ಇಡೀ ಸರ್ಕಾರಿ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಿ ಯಾರನ್ನೂ ಆಸ್ಪತ್ರೆಯೊಳಗೆ ಬಿಡದಂತೆ ಜಾಗ್ರತೆ ವಹಿಸಿದ ಸಂಗತಿಯನ್ನು ಕಂಡು ಸಾರ್ವಜನಿಕರಲ್ಲಿ ಒಂದಿಷ್ಟು ಗಾಬರಿಯೂ ಆಗಿದೆ ಎನ್ನಲಾಗಿದೆ.

      ಕಳೆದ ಮೂರು ದಿನಗಳ ಹಿಂದೆ ಇದೇ ಗ್ರಾಮದ ಮಹಿಳೆಯೊಬ್ಬರು ತನ್ನ ಪತಿಯ ಮನೆಯಿಂದ ತವರು ಮನೆಗೆ ಬಂದಿದ್ದು ಬೆಂಗಳೂರಿಗೂ ಹೋಗಿ ಬಂದಿದ್ದ ಈಕೆ ಕಳೆದ ಮೂರು ದಿನಗಳಿಂದಲೂ ಗಂಟಲು ನೋವು, ಜ್ವರ ಎಂದು ಬುಕ್ಕಾಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

     ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆ ಶುಕ್ರವಾರ ಮಧ್ಯಾನ್ಹ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಾಗ ಆಸ್ಪತ್ರೆಯ ಸಿಬ್ಬಂಧಿ ಸೇರಿದಂತೆ ಗ್ರಾಮದ ಜನತೆಗೂ ಆತಂಕ ಶುರುವಾಗಿದೆ. ಕೂಡಲೇ ಮೃತ ಮಹಿಳೆಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ಇಡೀ ಆಸ್ಪತ್ರೆಯ ಸಿಬ್ಬಂಧಿ ಹಾಗೂ ತಾಲ್ಲೂಕು ಆಡಳಿತ ತಡ ರಾತ್ರಿಯವರೆಗೂ ಮೃತ ಮಹಿಳೆಯ ಸ್ವಾಬ್‍ನ ಫಲಿತಾಂಶಕ್ಕಾಗಿ ನಿರೀಕ್ಷೆಯಲ್ಲಿದ್ದರು. ಫಲಿತಾಂಶ ಲಭ್ಯವಾಗುವವರೆಗೂ ಮೃತ ದೇಹವನ್ನು ಕುಟುಂಬಸ್ಥರಿಗೆ ನೀಡದೆ ಕಾಯುವುದು ಕೂಡಾ ಅನಿವಾರ್ಯವಾಗಿತ್ತು.

ಕಟ್ಟುನಿಟ್ಟಿನ ಕ್ರಮ:

   ಶಿರಾ ನಗರದ ತಹಶೀಲ್ದಾರ್ ಕಛೇರಿಗೆ ದಿನ ನಿತ್ಯವೂ ಬಂದು ಹೋಗುವ ಫಲಾನುಭವಿಗಳ ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಇಡೀ ಕಛೇರಿಯನ್ನು ಸ್ಯಾನಿಟರೈಸ್ ಮಾಡಲಾಗಿದೆಯಲ್ಲದೆ ನಗರದ ಕ್ಷೇತ್ರ ಶಿಕ್ಷಣ ಇಲಾಖೆಗೆ ಸೋಂಕಿತ ಶಿಕ್ಷಕ ಬಂದು ಹೋಗಿದ್ದರು ಎಂಬ ಕಾರಣಕ್ಕಾಗಿ ಶಿಕ್ಷಣ ಇಲಾಖೆಯನ್ನೂ ಸ್ಯಾನಿಟರೈಸ್ ಮಾಡಲಾಗಿದ್ದು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link