ಶಿರಾ
ಮಳೆಯೂ ಇಲ್ಲದೆ, ಕೊರಸಿದ ಕೊಳವೆ ಬಾವಿಗಳಲ್ಲಿ ಹನಿ ನೀರೂ ಇಲ್ಲದೆ ಅಂತರ್ಜಲ ಭತ್ತಿದ ಪರಿಣಾಮ ರೈತನೊಬ್ಬನು ಬೆಳೆದ ಅಡಿಕೆ ಹಾಗೂ ತೆಂಗಿನ ತೋಟ ನಾಶಗೊಂಡು ಸದರಿ ರೈತ ಮಹಿಳೆಯೊಬ್ಬರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಶಿರಾ ತಾಲ್ಲೂಕಿನ ಕೊಟ್ಟ ಗ್ರಾ.ಪಂ. ವ್ಯಾಪ್ತಿಯ ಕೊಟ್ಟ ಗ್ರಾಮದ ಪದ್ದಮ್ಮ ಎಂಬ ರೈತ ಮಹಿಳೆಯು 344/1 ಎ ಸ.ನಂ.ನಲ್ಲಿ ಒಂದು ಎಕರೆ ಜಮೀನನ್ನು ಹೊಂದಿದ್ದು ಕೊಳವೆ ಬಾವಿ ಕೊರೆಸಿ ಲಭ್ಯವಾದ ನೀರಿನಿಂದ ತೆಂಗಿನ ಗಿಡ ಹಾಗೂ ಅಡಿಕೆ ಗಿಡಗಳನ್ನು ಬೆಳೆಸಿದ್ದಳು.
ಕಳೆದ ಎರಡು ತಿಂಗಳ ಹಿಂದೆ ಇದ್ದ ಕೊಳವೆ ಬಾವಿಯ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು ಒಂದು ಹನಿ ನೀರೂ ಕೂಡಾ ಲಭ್ಯವಾಗದಂತಾಯಿತು. ಹೊಸ ಕೊಳವೆ ಬಾವಿ ಕೊರೆಸಲು ಕೊರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟವನ್ನೂ ಅನುಭವಿಸಬೇಕಾಯಿತು. ಬಿಡಿಗಾಸು ಇಲ್ಲದೆ, ಹೊಸ ಕೊಳವೆ ಬಾವಿ ಕೊರೆಸಲೂ ಆಗದೆ ರೈತ ಮಹಿಳೆ ಕೈಚೆಲ್ಲಿ ಕೂರುವುದು ಅನಿವಾರ್ಯವಾಗಿತ್ತು.
ದಿನ ಕ್ರಮೇಣ ಅಡಿಕೆ ಹಾಗೂ ತೆಂಗಿನ ಮರಗಳಿಗೆ ನೀರು ಲಭ್ಯವಾಗದೆ ಇದೀಗ ಸಂಪೂರ್ಣ ಒಣಗಿ ಹೋಗಿದ್ದು ಸರ್ಕಾರದ ನೆರವಿಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಈ ಮಹಿಳೆ ಎಡತಾಕುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡಾ ಲಭ್ಯವಾಗುತ್ತಿಲ್ಲ.ಕೂಡಲೇ ಸರ್ಕಾರ ತನ್ನ ಸಮಸ್ಯೆಗೆ ಸ್ಪಂಧಿಸಬುದೆಂಬ ನಿರೀಕ್ಷೆಯಲ್ಲಿರುವ ರೈತ ಮಹಿಳೆ ತನ್ನ ಕುಟುಂಬದ ನಿರ್ವಹಣೆಯನ್ನು ಕಷ್ಟದಿಂದ ಸವೆಸುತ್ತಿದ್ದಾಳೆ. ಇನ್ನಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈಕೆಯ ಸಮಸ್ಯೆಗೆ ಸ್ಪಂಧಿಸುವರೇನೋ ಕಾದು ನೋಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
