ಬೆಂಗಳೂರು
ವರುಣನ ಕಣ್ಣಾಮುಚ್ಚಾಲೆ, ಮೋಡ ಮುಸುಕಿದ ವಾತಾವರಣ ಹಾಗೂ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಡಿಸುತ್ತಿರುವ ಜಾಗೃತಿ ಕ್ರಮಗಳಿಂದ ನಗರದಲ್ಲಿ ದೀಪಾವಳಿ ಸಂಭ್ರಮದಲ್ಲಿ ಸಿಡಿಸುವ ಪಟಾಕಿಗೆ ಬೇಡಿಕೆ ಕಡಿಮೆಯಾಗಿದೆ ಸಾಮಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟ ಭರಾಟೆ ಜೋರಿರುತ್ತದೆ. ಆದರೆ, ಕೆಲ ವರ್ಷಗಳಿಂದ ಪಟಾಕಿಯ ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವುದು ಹೆಚ್ಚಾಗಿದೆ. ಜತೆಗೆ ಕೆಲ ಶಾಲೆಗಳಲ್ಲಿ ಪಟಾಕಿ ಹೊಡೆಯದಂತೆ ಮಕ್ಕಳಿಂದ ಪ್ರತಿಜ್ಞೆ ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳು ಪಟಾಕಿಯಿಂದ ವಿಮುಖರಾಗಿರುವುದು ಪಟಾಕಿ ಬೇಡಿಕೆ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.
ಪಟಾಕಿಯಿಂದಾಗುವ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಇವುಗಳ ಬಗ್ಗೆ ಈಗ ಎಲ್ಲೆಡೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಇದು ಪಟಾಕಿ ಖರೀದಿಗೆ ಹೊಡೆತ ಬಿದ್ದಿದ್ದರೆ, ಮೋಡ ಮುಸುಕಿದ ವಾತಾವರಣ ಸಹ ಪಟಾಕಿ ಖರೀದಿಯ ಉತ್ಸಾಹಕ್ಕೆ ತಣ್ಣೀರು ಎರೆಚಿದೆ .ಸಾವಿರಾರು ಉಪಾಯಗಳನ್ನು ಬಂಡವಾಳ ಹೂಡಿ, ಪಟಾಕಿ ಮಳಿಗೆಗಳನ್ನು ತೆರೆದಿದ್ದೇವೆ, ಆದರೆ. ಪಟಾಕಿ ಕೊಳ್ಳಲು ಜನರೇ ಇಲ್ಲ, ಮೊದಲೆಲ್ಲ ಪಟಾಕಿಗೆ ಜನ ಹಬ್ಬಕ್ಕೆ ಮೊದಲೇ ಮುಗಿ ಬೀಳುತ್ತಿದ್ದರು. ಈಗ ಹಬ್ಬಕ್ಕೆ 1 ದಿನ ಇದ್ದರೂ ಇನ್ನೂ ಪಟಾಕಿ ಮಾರಾಟ ಬಿರುಸಾಗಿಲ್ಲ ಎಂದು ಪಟಾಕಿ ಮಾರಾಟಗಾರರು ಅಲವತ್ತುಕೊಂಡಿದ್ದು, ನಾಳೆ ಹಬ್ಬದ ದಿನ ಪಟಾಕಿ ಮಾರಾಟ ಹೆಚ್ಚಾಗಬಹುದು ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ಪಟಾಕಿ ಮಾರಾಟ ಜೋರಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವರ್ಷ ವರ್ಷ ಪಟಾಕಿ ಬೇಡಿಕೆ ಕುಸಿಯುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೆ ಪಟಾಕಿ ಅಂಗಡಿ ತೆಗೆಯುವುದು ಕಷ್ಟ. ಹಾಕಿದ ಬಂಡವಾಳವೇ ಬಾರದಿದ್ದರೆ ಹೇಗೆ? ಮಾರಾಟವಾಗದೆ ಉಳಿದ ಪಟಾಕಿಯನ್ನು ಸಂಗ್ರಹಿಸಿಡುವುದೂ ಕಷ್ಟ ಎಂದು ಪಟಾಕಿ ಮಾರಾಟ ಕುಸಿತದ ಬೇಸರದಲ್ಲಿ ಹೇಳಿದರು.
ಈಗ ಪಟಾಕಿ ಬದಲು ಸಿಹಿ ತಿನಿಸುಗಳನ್ನು ಹಂಚಲಾಗುತ್ತಿದ್ದು, ಸಿಹಿ ತಿನಿಸುಗಳ ಬೇಡಿಕೆ ಹೆಚ್ಚಿದೆ. ಸಿಹಿ ತಿನಿಸು ಮಾರಾಟಗಾರರಿಗೆ ದೀಪಾವಳಿ ಹಬ್ಬ ಶುಕ್ರದೆಸೆ ತಂದಿದೆ ಎಂದರೆ ತಪ್ಪಾಗಲಾರದು.
ಹೂವು-ಹಣ್ಣು ದುಬಾರಿ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಯಥಾಪ್ರಕಾರ ಹೂವು ಮತ್ತು ಹಣ್ಣು ದುಬಾರಿಯಾಗಿದೆ. ನೆರೆಯಿಂದ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚಿನ ಹೂವು ಬಾರದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಜಾಸ್ತಿಯಾಗಿ ಬೆಲೆ ಗಗನಕ್ಕೇರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
