ರೋಗಗಳ ಹತೋಟಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಿ

ಚಿತ್ರದುರ್ಗ:

    ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರಬೇಕು. ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಸಾಂಕ್ರಮಿಕ ರೋಗಗಳ ಕುರಿತು ಹತೋಟಿ, ನಿಯಂತ್ರಣ ಹಾಗೂ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ ತಿಳಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿದೆ ಹಮ್ಮಿಕೊಂಡಿದ್ದ ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ ಡೆಂಗ್ಯು ಮತ್ತು ಚಿಕುಂಗುನ್ಯಾ ಬಗ್ಗೆ ಅಡ್ವೋಕೇಸಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಮಾಧ್ಯಮದ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಿದಾಗ ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಸಾಧ್ಯವಿದೆ. ಹಾಗಾಗಿ ಆರೋಗ್ಯ ಇಲಾಖೆಗಿಂತ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾಗಿದೆ. ಚಿಕುಂಗುನ್ಯಾ, ಮಲೇರಿಯಾ, ಡೆಂಗ್ಯು, ಆನೆಕಾಲು, ಮೆದುಳು ಜ್ವರ ಹೀಗೆ ಅನೇಕ ಸಾಂಕ್ರಾಮಿಕ ರೋಗಗಳ ಜೊತೆಗೆ ಬದುಕುತ್ತಿದ್ದೇವೆ. ಹಾಗೆಯೇ ಕೊರೊನಾ ಜೊತೆಯಲ್ಲಿ ನಾವು ಬದುಕಬೇಕು ಎಂದು ಹೇಳಿದರು.

    ಜೂನ್‍ನಲ್ಲಿ ಎಲ್ಲ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜುಲೈ ತಿಂಗಳಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಮಾಡುತ್ತೇವೆ. ಮತ್ತು ಆಗಸ್ಟ್ ತಿಂಗಳಲ್ಲಿ ಅಂತರಾಷ್ಟ್ರೀಯ ಸೊಳ್ಳೆ ದಿನಾಚರಣೆ ಆಚರಿಸಲಾಗುತ್ತಿದೆ. ಈಗಾಗಲೇ ಭಾರತ ಸರ್ಕಾರವು ಮಲೇರಿಯಾ ನಿವಾರಣೆಗೆ ಕ್ರಿಯಾ ಯೋಜನೆ ರೂಪಿಸಿದ್ದು, ರಾಷ್ಟ್ರದಲ್ಲಿ 2030ಕ್ಕೆ, ಹಾಗೂ ರಾಜ್ಯದಲ್ಲಿ 2025ಕ್ಕೆ ಮಲೇರಿಯಾ ನಿವಾರಣೆ ಗುರಿ ಹಾಕಿಕೊಂಡಿದೆ. ಜಿಲ್ಲೆಯು ಸಹ 2025ಕ್ಕೆ ಮಲೇರಿಯಾ ನಿವಾರಣೆ ಗುರಿ ಹೊಂದಲಾಗಿದೆ ಎಂದರು.

     ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಯಮ್ಮ ಮಾತನಾಡಿ, ಡೆಂಗ್ಯು, ಚಿಕುಂಗುನ್ಯಾ, ಮಲೇರಿಯಾ ರೋಗಗಳು ಜುಲೈನಿಂದ ಅಕ್ಟೋಬರ್‍ವರೆಗೆ ಕೀಟಜನ್ಯ ರೋಗಗಳು ಹೆಚ್ಚು ಪ್ರಸರಣಗೊಳ್ಳುತ್ತವೆ. ಪ್ರತಿವರ್ಷ ಶೇ 16 ರಷ್ಟು ಜನರು ಕೀಟಜನ್ಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಶೇ. ಅರ್ಧದಷ್ಟು ಜನರು ಕೀಟಜನ್ಯ ರೋಗ ಹರಡುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಸೊಳ್ಳೆಗಳ ಮೂಲಕ ರೋಗಗಳು ಹರಡುತ್ತವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

     ಜಿಲ್ಲೆಯಲ್ಲಿ 2019ರಲ್ಲಿ 436 ಡೆಂಗ್ಯು, 196 ಚಿಕುಂಗುನ್ಯಾ, 9 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ಸಾಲಿನ ಜೂನ್‍ವರೆಗೆ 126 ಡೆಂಗ್ಯು, 54 ಚಿಕುಂಗುನ್ಯಾ ಪ್ರಕರಣಗಳು, ಮಲೇರಿಯಾ 2 ಪ್ರಕರಣಗಳು ವರದಿಯಾಗಿದೆ. ಕಳೆದ ಎರಡು ದಶಕಗಳಲ್ಲಿ ಸಾಂಕ್ರಾಮಿಕ ರೋಗಗಳು ಎಂಟುಪಟ್ಟು ಹೆಚ್ಚಳವಾಗಿದೆ. 100ಕ್ಕಿಂತ ಹೆಚ್ಚು ದೇಶಗಳಲ್ಲಿ ಈ ರೋಗಗಳು ಹರಡಿವೆ. ಅತಿ ಹೆಚ್ಚು ಏಷ್ಯಾಖಂಡದಲ್ಲಿ ವರದಿಯಾಗಿದೆ ಎಂದರು.

    ವರ್ಷದ ಎಲ್ಲ ತಿಂಗಳುಗಳಲ್ಲಿಯೂ ಪ್ರಕರಣಗಳು ವರದಿಯಾಗುತ್ತಿವೆ. ಸಮುದಾಯದ ಸಹಭಾಗಿತ್ವವಿಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಜನರಿಗೆ ತಿಳುವಳಿಕೆ ಅಗತ್ಯವಾಗಿದೆ. ಸಮುದಾಯಕ್ಕೆ ಜಾಗೃತಿ ಮೂಡಿಸಲು ಮಾಧ್ಯಮದವರ ಪಾತ್ರ ಬಹುಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಮಾತನಾಡಿ, ಪತ್ರಕರ್ತರಿಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು, ಸಾಂಕ್ರಮಿಕ ರೋಗಗಳನ್ನು ತಡೆಯಲು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು ಎಂದರು. ಯಾವುದೇ ಸಾಂಕ್ರಮಿಕ ರೋಗವನ್ನು ತಡೆಗಟ್ಟಲು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಮಳೆಗಾಲ ಆರಂಭವಾಗಿದ್ದು, ಸಾಂಕ್ರಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.

   ಡೆಂಗ್ಯು, ಚಿಕುಂಗುನ್ಯಾ ಸಾಂಕ್ರಮಿಕ ರೋಗಗಳು ಹರಡುವ ಬಗೆ ಕುರಿತು ಆಶಾ ಕಾರ್ಯಕರ್ತೆರು ಇದೇ ಸಂದರ್ಭದಲ್ಲಿ ನಾಟಕ ಪ್ರದರ್ಶಿಸಿ, ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಉಪ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಕ್ಷೇತ್ರ ಆರೋಗ್ಯಾಧಿಕಾರಿ ಜಾನಕಿ, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ನಿರ್ದೇಶಕ ನರೇನಹಳ್ಳಿ ಅರುಣ್ ಕುಮಾರ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಮಾಧ್ಯಮದವರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link