ಬೆಂಗಳೂರು:
ಕಳೆದ ಭಾನುವಾರ ಮಧ್ಯರಾತ್ರಿ ಸಿನಿಮಾ ನೋಡಿಕೊಂಡು ಮನೆಗೆ ಬರುತ್ತಿದ್ದ ಅಲ್ಲಾಳಸಂದ್ರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಅಲಿಯಾಸ್ ಕ್ಯಾಟ್ ಅರುಣ್ನನ್ನು ಕೊಲೆಗೈದ ಪ್ರಮುಖ ಆರೋಪಿಗೆ ಈಶಾನ್ಯ ವಿಭಾಗದ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಬಂಧಿಸಲು ಬೆನ್ನಟ್ಟಿ ಹೋದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಆರೋಪಿ ಮನೋಜ್ ಅಲಿಯಾಸ್ ಕೆಂಚನ ಮೇಲೆ ಈಶಾನ್ಯ ವಿಭಾಗದ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು ಗುಂಡು ಹೊಡೆದು ಬಲೆಗೆ ಕೆಡವಿದ್ದಾರೆ.
ಪೊಲೀಸ್ ಅಧಿಕಾರಿಗಳ ಗುಂಡೇಟು ತಗುಲಿ ಕಾಲು ಮತ್ತು ಕೈಗೆ ಗಾಯಗೊಂಡಿರುವ ಅಲ್ಲಾಳಸಂದ್ರದ ಮನೋಜ್ ಅಲಿಯಾಸ್ ಕೆಂಚ(22)ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೆಂಚ ಡ್ರ್ಯಾಗರ್ನಿಂದ ಚುಚ್ಚಿ ಗಾಯಗೊಂಡಿರುವ ಪೇದೆ ಮಹದೇವಮೂರ್ತಿ ಹಾಗೂ ಮುಖ್ಯಪೇದೆ ಉದಯ್ಕುಮಾರ್ ಆಸ್ಪತ್ರೆ ಪಡೆದು ಮನೆಗೆ ಮರಳಿದ್ದಾರೆ.ಕೆಂಚ ಈತನ ಜೊತೆಗಿದ್ದ ಮತ್ತೊಬ್ಬ ಕೊಲೆ ಆರೋಪಿ ಚೆನ್ನರಾಯಪಟ್ಟಣದ ಮಂಜೇಗೌಡ(23)ನನ್ನು ಬಂಧಿಸಿ ಉಳಿದ ಮೂವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಸಿಸಿ ಕ್ಯಾಮಾರದಲ್ಲಿ ಸುಳೀವು
ಕಳೆದ ಭಾನುವಾರ ತಡರಾತ್ರಿ ಸ್ನೇಹಿತರ ಜೊತೆ ಸಿನೆಮಾ ನೋಡಿಕೊಂಡು ಅಲ್ಲಾಳಸಂದ್ರಗೇಟ್ ಬಳಿ ಸ್ನೇಹಿತರ ಕಾರಿನಿಂದ ಇಳಿದು ತನ್ನ ಕಾರಿನತ್ತ ನಡೆದು ಹೋಗುತ್ತಿದ್ದ ಅರುಣ್ ಅವರನ್ನು ಸುಮಾರು 2 ಕಿ.ಮೀ ವರೆಗೆ ಅಟ್ಟಾಡಿಸಿಕೊಂಡು ಹೋಗಿ ಕೆಂಚ,ಮಂಜೇಗೌಡ ಐವರು ಮಚ್ಚು-ಲಾಂಗ್ಗಳಿಂದ ಕೊಚ್ಚಿ ಪರಾರಿಯಾಗಿದ್ದರು.
ಭಯಾನಕವಾಗಿ ನಡೆದಿದ್ದ ಈ ಕೃತ್ಯವನ್ನು ಪತ್ತೆಹಚ್ಚಲು ಯಲಹಂಕ ಪೊಲೀಸ್ ಇನ್ಸ್ಪೆಕ್ಟರ್ ಮಂಜೇಗೌಡ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಮೂರ್ತಿ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು ತಂಡವು ಮಂಗಳವಾರ ಬೆಳಿಗ್ಗೆಯಿಂದಲೇ ಆರೋಪಿಗಳ ಮಾಹಿತಿ ಪಡೆದು ಪತ್ತೆ ಕಾರ್ಯ ಕೈಗೊಂಡಿತ್ತು.
ಸಿಸಿ ಕ್ಯಾಮಾರದಲ್ಲ್ಲಿ ಸೆರೆಯಾಗಿದ್ದ ಕೆಂಚ, ಮಂಜೇಗೌಡನ ಜೊತೆ ಅರುಣ್ನನ್ನು ಕೊಲೆ ಮಾಡಲು ಬಳಸಿದ್ದ ಸ್ವಿಫ್ಟ್ ಕಾರಿನಲ್ಲಿ ಮಧ್ಯರಾತ್ರಿ ಅಲ್ಲಾಳಸಂದ್ರದಿಂದ ಚಿಕ್ಕಜಾಲ ಕಡಗೆ ಹೋಗುತ್ತಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದೆ.
ಎರಡು ಗುಂಡೇಟು
ಕಾರನ್ನು ಅಡ್ಡಗಟ್ಟಿ ಬಂಧಿಸಲು ಮುಂದಾದಾಗ ಕೆಂಚ ಪೊಲೀಸ್ ಪೇದೆ ಮಹದೇವಮೂರ್ತಿ ಹಾಗೂ ಮುಖ್ಯಪೇದೆ ಉದಯ್ಕುಮಾರ್ ಅವರಿಗೆ ಡ್ರಾಗರ್ನಿಂದ ಇರಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ ಎಚ್ಚರಿಕೆ ನೀಡಿದರೂ ಮತ್ತೆ ಪೊಲೀಸರತ್ತ ನುಗ್ಗುತ್ತಿದ್ದ ಕೆಂಚನ ಮೇಲೆ ಇನ್ಸ್ಪೆಕ್ಟರ್ಗಳಾದ ಮಂಜೇಗೌಡ ಹಾಗೂ ರಾಮಮೂರ್ತಿ ಆತ್ಮರಕ್ಷಣೆಗೆ ತಲಾ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡುಗಳು ಕೈ ಹಾಗೂ ಕಾಲಿಗೆ ತಗುಲಿ ಕೆಂಚ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದು ಆತನನ್ನು ವಶಕ್ಕೆ ಪಡೆದು ಜೊತೆಯಲ್ಲಿದ್ದ ಮಂಜೇಗೌಡನನ್ನು ಬಂಧಿಸಿದ್ದಾರೆ.ಅರುಣ್ ಕೊಲೆಗೈದ ಗುಂಡ,ರಘು ಹಾಗೂ ನಂದನ್ ಪರಾರಿಯಾಗಿದ್ದು ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.ಕೆಂಚ ಡ್ರ್ಯಾಗರ್ನಿಂದ ಚುಚ್ಚಿ ಗಾಯಗೊಂಡಿರುವ ಪೇದೆ ಮಹದೇವಮೂರ್ತಿ ಹಾಗೂ ಮುಖ್ಯಪೇದೆ ಉದಯ್ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.
ಮೊದಲು ಬ್ಯಾಟರಾಯನಪುರದಲ್ಲಿ ವಾಸಿಸುತ್ತಿದ್ದ ಕೆಂಚ ಮೂರು ಕೊಲೆಯತ್ನ, ಒಂದು ಅಪಹರಣ ಸೇರಿ 4 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.ಕೆಲವೆಡೆ ಅಪಹರಣ,ಸುಲಿಗೆ ಬೆದರಿಕೆ ಹಾಕಿದ್ದ ಈತನ ವಿರುದ್ದ ದೂರು ನೀಡಲು ಹೆದರಿದ್ದರು.ಚಿಕ್ಕ ವಯಸ್ಸಿಗೆ ಅಪರಾಧ ಕೃತ್ಯಗಳನ್ನು ನಡೆಸಿ ಕುಖ್ಯಾತಿ ಪಡೆಯಲು ಯತ್ನಿಸುತ್ತಿದ್ದ ಕೆಂಚ ಮೊದಲು ಅರುಣ್ನ ಸ್ನೇಹಿತನಾಗಿದ್ದ.ಹಣಕಾಸಿನ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದ ಅರುಣ್ ನಿಂದ ಆವಾಜ್ ಹಾಕಿಸಿಕೊಂಡು ಕೆಂಚ ದೂರನಾಗಿದ್ದನು.
ಆವಾಜ್ ಹಾಕಿ ಕೆಟ್ಟ
ನನಗೆ ಆವಾಜ್ ಹಾಕಿದವನನ್ನು ಸುಮ್ಮನೆ ಬಿಡಬಾರದೆಂದು ಅರುಣ್ ಕೊಲೆಗೆ ಸಂಚು ರೂಪಿಸಿದ್ದ ಕೆಂಚ ಕೆಪಿ ಅಗ್ರಹಾರದಲ್ಲಿನ ಡಕಾಯಿತಿಯತ್ನ ಕೃತ್ಯದಲ್ಲಿ ಭಾಗಿಯಾಗಿದ್ದ ಮಂಜೇಗೌಡನನ್ನು ಜಾಮೀನಿಗೆ ಹಣಕೊಟ್ಟು ಬಿಡುಗಡೆ ಮಾಡಿಸಿಕೊಂಡು ಬಂದು ಅರುಣ್ನ ಕೊಲೆಗೆ ಬಳಸಿಕೊಂಡಿದ್ದ ಇವರ ಜೊತೆಗೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗುಂಡ,ರಘು ಹಾಗೂ ಬೆದರಿಕೆ ಕೃತ್ಯದಲ್ಲಿ ಭಾಗಿಯಾಗಿದ್ದ ನಂದನ್ ಸೇರಿಕೊಂಡಿದ್ದನು.
ಅರುಣ್ನ ಕೊಲೆಗೆ ಸಂಚು ರೂಪಿಸಿದ ಐವರು ಸ್ವಿಫ್ಟ್ ಕಾರಿನಲ್ಲಿ ಕಳೆದ ಸೆ.24 ರಂದು ಮಧ್ಯರಾತ್ರಿ ಅಳ್ಳಾಳಸಂದ್ರ ಗೇಟ್ ಬಳಿ ಅರುಣ್ ಬಂದಿಳಿಯುವುದನ್ನು ಕಾದು ನೋಡಿ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದರು ಹತ್ಯೆ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಆರೋಪಿಗಳನ್ನು ಜಾಡು ಹಿಡಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/handcuffs_hands.gif)