ತುಮಕೂರು:
ವಿಶೇಷ ವರದಿ:-ಸಾ.ಚಿ.ರಾಜಕುಮಾರ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ತುಮಕೂರಿಗೂ ವ್ಯಾಪಿಸಿದ್ದು, ರಾಗಿ ಬೆಳೆ ನೆಲ ಕಚ್ಚುವ ಆತಂಕ ಶುರುವಾಗಿದೆ. ಶನಿವಾರ ರಾತ್ರಿಯಿಂದಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಕಟಾವು ಹಂತದಲ್ಲಿದ್ದ ರಾಗಿ ಫಸಲು ನೆಲಕ್ಕುರುಳಿದ್ದರೆ ಕಟಾವು ಮಾಡಿರುವ ರೈತರು ಹೊಲದಲ್ಲಿರುವ ಫಸಲು ಎತ್ತಿಕೊಳ್ಳಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಜಿಲ್ಲೆಯಾದ್ಯಂತ ಬೀಳುತ್ತಿರುವ ಈ ಮಳೆಯಿಂದಾಗಿ ಈಗ ರೈತರ ಬದುಕು ಮೂರಾಬಟ್ಟೆಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲೇ ಮಳೆಗೆ ಬೆಳೆದ ರಾಗಿ, ಜೋಳ, ಶೇಂಗಾ ಮತ್ತಿತರ ಧಾನ್ಯಗಳು ರೈತನ ಕೈಸೇರುವ ಮುನ್ನವೇ ನೆಲ ಕಚ್ಚುತ್ತಿವೆ. ಈ ಬಾರಿ ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಕೈ ಸೇರುವುದೆಂಬ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ಕಾರ್ಮೋಡ ಆವರಿಸಿದೆ. ಮಂದಹಾಸ ಮೂಡಬೇಕಿದ್ದ ರೈತರ ಮುಖದಲ್ಲಿ ದುಃಖದ ಛಾಯೆ ಆವರಿಸಿದೆ.
ಭರಣಿ ಮಳೆಗೆ ಬಿತ್ತನೆ ಮಾಡಿರುವ ರೈತರು ಈಗಾಗಲೇ ಹೊಲಗಳನ್ನು ಕಟಾವು ಮಾಡಿ ದವಸ ಧಾನ್ಯ ಮಾಡಿಕೊಂಡು ನೆಮ್ಮದಿಯಿಂದಿದ್ದಾರೆ. ಕೆಲವು ಕಡೆ ಕಳೆದ 15 ದಿನಗಳಿಂದಲೂ ರಾಗಿ ಬೆಳೆ ಕಟಾವಿನಲ್ಲಿ ರೈತರು ನಿರತರಾಗಿದ್ದು, ಬಣವೆಗಳನ್ನು ಹಾಕಿಕೊಂಡಿದ್ದಾರೆ. ಹೊಲದಿಂದ ಕಟಾವು ಮಾಡಿ ಬಣವೆ ಮಾಡಿಕೊಂಡಿರುವವರು ನೆಮ್ಮದಿಯಿಂದಿದ್ದರೆ ಈಗ ತಾನೇ ಕಟಾವಿಗೆ ಮುಂದಾಗಿದ್ದ ರೈತರು ಮುಂದೇನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಈ ವೇಳೆಗಾಗಲೇ ಬಹಳಷ್ಟು ಕಡೆಗಳಲ್ಲಿ ಕಟಾವು ಆಗಬೇಕಿತ್ತು. ಆದರೆ ವಿಳಂಬವಾಗಲು ಕೆಲವು ಕಾರಣಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದಿನಂತೆ ಈಗ ಆಳುಗಳು ಸಿಗುತ್ತಿಲ್ಲ. ಇದಕ್ಕೆ ಪರ್ಯಾಯ ಎಂಬಂತೆ ಮುಯ್ಯಾಳು (ಒಬ್ಬರ ಕೆಲಸ ಮುಗಿದ ಬಳಿಕ ಇನ್ನೊಬ್ಬರಿಗೆ ನೆರವಾಗುವ) ಪದ್ಧತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಒಬ್ಬರ ಕೃಷಿ ಕಾರ್ಯ ಮುಗಿದು ಮತ್ತೊಬ್ಬರಿಗೆ ನೆರವಾಗಲು ಬಹಳ ದಿನಗಳೇ ಹಿಡಿಯತ್ತಿವೆ.
ಹೀಗಾಗಿ ಕಟಾವು ಪ್ರಕ್ರಿಯೆ ವಿಳಂಬವಾಗಿದೆ. ಕೆಲವು ಕಡೆಗಳಲ್ಲಿ ಕೂಲಿ ಆಳುಗಳು ಲಭ್ಯವಾದರೂ ನಿಗದಿತ ದಿನದಂದು ಕೆಲಸಕ್ಕೆ ಬರುವುದು ಸಾಧ್ಯವಾಗದು. ನಾಲ್ಕೈದು ಕಡೆಗಳಲ್ಲಿ ಮುಂಚಿತವಾಗಿಯೇ ಒಪ್ಪಿಕೊಂಡಿರುತ್ತಾರೆ. ಅವರ ಕೆಲಸ ಮುಗಿಸಿ ಬರುಷ್ಟರಲ್ಲಿ ದಿನಗಳೇ ಉರುಳಿ ಹೋಗುತ್ತಿವೆ. ಇಂತಹ ಹಲವು ಹತ್ತು ಸಮಸ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಿದ್ದು, ರೈತರು ತಮ್ಮ ಕೃಷಿ ಕಾರ್ಯಗಳಿಗಾಗಿ ಅವರಿವರನ್ನು ಅಂಗಲಾಚುವ ಪರಿಸ್ಥಿತಿ ಎದುರಾಗಿದೆ.
ಉತ್ತಮ ಮಳೆಯಾಗಿ ಬೆಳೆ ಸಿಗುತ್ತದೆ ಎಂಬ ಆಶಾಭಾವ ಇದ್ದರೂ ಬೆಳೆ ತೆಗೆದು ಮನೆಗೆ ಸಾಗಿಸುವಷ್ಟರಲ್ಲಿ ಆತ ಹೈರಾಣಾಗಿ ಹೋಗುತ್ತಿದ್ದಾನೆ. ಪ್ರಸ್ತುತ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಮುಖ್ಯವಾಗಿ ರಾಗಿ ಬೆಳೆಯುವ ಪ್ರದೇಶಗಳಲ್ಲಿನ ರೈತರು ಚಿಂತಾಕ್ರಾಂತರಾಗಿದ್ದಾರೆ. ಮಳೆಗೆ ನೆನೆಯುವ ರಾಗಿ ಮುಂದೆ ಯಾವುದಕ್ಕೂ ಬಾರದು. ನೆಲದಲ್ಲಿಯೇ ರಾಗಿಕಾಳು ಮೊಳಕೆಯೊಡೆದರೆ ಹುಲ್ಲನ್ನು ದನಗಳು ತಿನ್ನಲು ಯೋಗ್ಯವಾಗಿರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಅಥವಾ ಟಾರ್ಪಾಲಿನ್ ಹೊದಿಕೆಗಳು ಹೆಚ್ಚು ಬೇಡಿಕೆಯಾಗಿದ್ದು, ಎಲ್ಲರೂ ಇವುಗಳನ್ನು ಆಶ್ರಯಿಸುವಂತಾಗಿದೆ. ದುಬಾರಿ ಬೆಲೆ ತೆತ್ತು ಎಲ್ಲರೂ ಇದನ್ನು ಹೊಂದಲು ಸಾಧ್ಯವಾಗಿಲ್ಲ. ಈಗ ಎಲ್ಲರಿಗೂ ಬೇಕಿರುವುದರಿಂದ ಇದರ ಬೆಲೆಯೂ ಹೆಚ್ಚಳವಾಗಿದೆ. ಅಲ್ಲದೆ, ರಾಗಿ ಪೈರನ್ನು ಹೊಲದಲ್ಲಿ ಇಂತಹ ಪ್ಲಾಸ್ಟಿಕ್ ಹೊದಿಕೆಗಳಿಂದ ಮುಚ್ಚಲು ಸಾಧ್ಯವಾಗದು.
ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕೊರಟಗೆರೆ, ತುಮಕೂರು, ಕುಣಿಗಲ್ ಈ ಭಾಗಗಳಲ್ಲಿ ಹೆಚ್ಚು ರಾಗಿ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಚಿ.ನಾ.ಹಳ್ಳಿ, ತಿಪಟೂರು, ಗುಬ್ಬಿ ಭಾಗಗಳಲ್ಲಿ ಇದನ್ನು ಪ್ರಮುಖ ಬೆಳೆಯಾಗಿ ಹೊಲದ ತುಂಬೆಲ್ಲಾ ಭರ್ಜರಿಯಾಗಿ ಬೆಳೆಯಲಾಗುತ್ತದೆ. ಈಗ ಈ ಬೆಳೆ ನೆಲ ಕಚ್ಚುವಂತಾಗಿದ್ದು, ಕೈಗೆ ಸಿಕ್ಕಿದ ಬೆಳೆ ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ರಾಗಿಯ ಕತೆ ಹೀಗಾದರೆ ಇನ್ನು ಜೋಳ, ಶೇಂಗಾ ಮತ್ತಿತರ ಬೆಳೆ ಸ್ಥಿತಿಯೂ ಇದೇ ಆಗಿದೆ. ಮಳೆಯಿಂದ ಈ ಬೆಳೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಆವರಿಸಿದೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಅನಾಹುತಗಳಾಗುವ ಲಕ್ಷಣಗಳು ಕಂಡುಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
