ದಾವಣಗೆರೆ:
ರಾಜ್ಯದ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಡಿ.17ರಂದು ಬೆಳಗಾವಿಯ ಸುವರ್ಣಸೌಧದ ಎದುರು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ನೇತೃತ್ವಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ನಾಯ್ಕ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲೆಯಿಂದ 25 ಬಸ್ಸು, 14 ಟ್ರ್ಯಾಕ್ಸ್ ಮತ್ತು 25 ಕಾರ್ಗಳ ಮೂಲಕ ಸುಮಾರು 2 ಸಾವಿರ ಜನ ತೆರಳಲಿದ್ದಾರೆಂದು ಹೇಳಿದರು.
ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಮಸ್ಯೆಗಳನ್ನು ಪರಿಹರಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆರ್ಟಿಒ ಅಧಿಕಾರಿಗಳೇ ಹೆಚ್ಚು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಕ್ವಾರಿ ಮತ್ತು ಕ್ರಷರ್ ಮಾಲೀಕರು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆಯುವ ಸಂದರ್ಭದಲ್ಲಿ ಪ್ರಸ್ತುತ ಐದು ವರ್ಷಕ್ಕೆ ನೀಡುತ್ತಿರುವ ಅನುಮತಿಯನ್ನು 20 ವರ್ಷಗಳಿಗೆ ವಿಸ್ತರಿಸಬೇಕು. ಕಟ್ಟಡದ ಕಲ್ಲನ್ನು ಮೈನರ್ ಮಿನರಲ್ಸ್ನಿಂದ ತೆಗೆದು ಎಸೆನ್ಸಿಯಲ್ ಕಮಾಡಿಟಿ ವ್ಯಾಪ್ತಿಗೆ ತರಬೇಕು. 10 ಹೆಕ್ಟರ್ ವರೆಗೆ ಕಲ್ಲು ಗಣಿ ಗುತ್ತಿಗೆಗೆ ಇಸಿ ತೆಗೆದುಕೊಡುವುದರ ಜತೆಗೆ ಕಲ್ಲು ಗಣಿ ಗುತ್ತಿಗೆಯನ್ನು 30 ವರ್ಷ ಅವಧಿಗೆ ವಿಸ್ತರಿಸಬೇಕು.
ಕಟ್ಟಡದ ಕಲ್ಲಿಗೆ ಎಂಡಿಪಿಯನ್ನು ತೆಗೆದು ಹಾಕಿ, ರಾಜಧನವನ್ನು ಕೊನೆ ಬಳಕೆದಾರರಿಂದ ಸಂಗ್ರಹಿಸಬೇಕು. ಡ್ರೋನ್ ಸರ್ವೇ, ಒನ್ ಟೈಮ್ ರಾಯಲ್ಟಿ, ಐದು ಬಾರಿ ಪೆನಾಲ್ಟಿಯನ್ನು ತತಕ್ಷಣವೇ ರದ್ದು ಮಾಡಬೇಕು. ಕ್ರಷರ್ ಮತ್ತು ಕಟ್ಟಡ ಕಲ್ಲು ಪರವಾನಿಗೆಯನ್ನು ಜಿಲ್ಲಾ ಟಾಸ್ಕ್ಪೋರ್ಸ್ ಕಮಿಟಿಯಿಂದ ತಗೆದುಹಾಕಬೇಕು.
ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಸರ್ಫೇಸ್ ರೆಂಟ್ ಪಾವತಿಸಿಕೊಂಡು ಪರವಾನಿಗೆ ನೀಡಬೇಕು. ಡೀಮ್ಡ್ ಫಾರೆಸ್ಟ್ನಲ್ಲಿ ಈಗಾಗಲೇ ಇರುವ ಕಟ್ಟಡದ ಕಲ್ಲು ಕ್ವಾರಿ ಮತ್ತು ಕ್ರಷರ್ಗಳ ಪರವಾನಿಗೆಯನ್ನು ಸಬ್ಜೆಕ್ಟ್ ಟೂ ಕಂಡೀಷನ್ ಅಡಿಯಲ್ಲಿ ಮಾಡಿಕೊಡಬೇಕು. ಈಗಾಗಲೇ ಸಲ್ಲಿಸಿರುವ ಕಟ್ಟಡ ಕಲ್ಲು ಗಣಿ ಗುತ್ತಿಗೆಗಳ ಮತ್ತು ಎಂ ಸ್ಯಾಂಡ್ ಅರ್ಜಿಗಳನ್ನು ಪುರಸ್ಕರಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಸೊಸಿಯೇಷನ್ನ ಬಸವನಗೌಡ್ರು, ಬಿ.ಕೆ.ರುದ್ರಮುನಿ, ಹೊನ್ನೂರು ಗಿರೀಶ್, ಗಂಗಾಧರ್ ನಾಯ್ಕ, ಹೆಚ್.ಮರುಳಸಿದ್ದಪ್ಪ, ಕೆ.ಎಸ್.ರಾಜಶೇಖರಪ್ಪ, ಆಲೂರು ಶ್ರೀನಿವಾಸ್, ಎನ್.ಜಿ.ರವಿಗೌಡ್ರು, ಅರುಣ್ಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/14_dvg_01.jpg)