ದಾವಣಗೆರೆ:
ಸಂತ ಅಲೋಶಿಯಸ್ ಗೊಂಜಾಗರವರ 450ನೇ ಜಯಂತಿಯ ಪ್ರಯುಕ್ತ, ಹರಿಹರದ ಅಮರಾವತಿಯ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವತಿಯಿಂದ ಇಂದು (ನ.27ರಂದು) ಮತ್ತು ನಾಳೆ (ನ.28ರಂದು) ಕಾಲೇಜಿನ ಆವರಣದಲ್ಲಿ “ರೈನ್ಬೊ ಪ್ರತಿಭಾ ಗುಚ್ಛ” ಘೋಷಣೆಯಡಿ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಮುಖ್ಯಸ್ಥ ರೇವರೆಂಡ್ ಫಾದರ್ ಎರಿಕ್ ಮಥಾಯಸ್ ಎಸ್.ಜೆ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ 9.30ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿಯವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್, ಹರಿಹರ ಆರೋಗ್ಯ ಮಾತೆ ಧರ್ಮಗುರು ಡಾ.ಅಂತೋನಿ ಪೀಟರ್, ಕಾಲೇಜಿನ ಹಣಕಾಸು ಅಧಿಕಾರಿ ಪ್ರದೀಪ್ ಸಿಕ್ವೇರಾ ಎಸ್.ಜೆ. ಪ್ರಾಂಶುಪಾಲ ಸಂತೋಷ್ ಫೆರ್ನಾಂಡಿಸ್ ಎಸ್.ಜೆ. ಭಾಗವಹಿಸಲಿದ್ದಾರೆ.
ಸಂಜೆ 5.30ಕ್ಕೆ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಗಾ ಶರಣರು ಪ್ರವಚನ ನೀಡಲಿದ್ದಾರೆಂದು ಮಾಹಿತಿ ನೀಡಿದರು.
ನಾಳೆ (ನ.28ರಂದು) ಸಂಜೆ 4.30ಕ್ಕೆ ನಡೆಯುವ ಸಂತ ಅಲೋಶಿಯಸ್ ಗೊಂಜಾಗರವರ ಪ್ರತಿಮೆ ಅನಾವಣ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಂಡರಗಿಯ ಶ್ರೀನಿಜಗುಣಪ್ರಭು ಸ್ವಾಮೀಜಿ, ಇಸ್ಲಾಂ ಧರ್ಮಗುರು ಬಿ.ಎ.ಇಬ್ರಾಹೀಂ ಸಖಾಫಿ, ಶಿವಮೊಗ್ಗದ ರೇವರೆಂಡ್ ಫಾದರ್ ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ. ವಹಿಸುವರು. ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಮುಖ್ಯ ಗುರು ರೇವರೆಂಡ್ ಫಾದರ್ ಜೆರೋಮ್ ಸ್ಟ್ಯಾನಿಸ್ಲಾಸ್ ಡಿಸೋಜಾ ಎಸ್.ಜೆ. ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.
ಪ್ರೌಢ ಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ ಜಾನಪದ ಸಮೂಹ ಗೀತೆ, ಜಾನಪದ ನೃತ್ಯ, ಮೂಕಾಭಿನಯ, ಬಾಲಿವುಡ್ ಡಾನ್ಸ್ ಮತ್ತಿತರೆ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನವಾಗಿ 12 ಸಾವಿರ ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಹಣಕಾಸು ಅಧಿಕಾರಿ ಪ್ರದೀಪ್ ಸಿಕ್ವೇರಾ ಎಸ್.ಜೆ. ಪ್ರಾಂಶುಪಾಲ ಸಂತೋಷ್ ಫೆರ್ನಾಂಡಿಸ್ ಎಸ್.ಜೆ, ಕನ್ನಡ ಉಪನ್ಯಾಸಕ ಎಂ.ಬಿ.ಶಿವಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
