ಬೆಂಗಳೂರು
ಭಾರತೀಯ ವಿಜ್ಞಾನ ಮಂದಿರದ ವೈಮಾನಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಓರ್ವ ಸಂಶೋಧನಾ ವಿದ್ಯಾರ್ಥಿ ಮೃತಪಟ್ಟು, ಇತರೆ ಮೂವರು ತೀವ್ರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ನವೋದ್ಯಮ ವಲಯದಲ್ಲಿ ಸಂಶೋಧನೆ ನಡೆಸುತ್ತಿದ್ದ ಸಂಶೋಧಕ ಮನೋಜ್ ಕುಮಾರ್ [30] ಈ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೂಪರ್ ವೇವ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿರುವ ಈ ನಾಲ್ವರು ಇನ್ ಕ್ಯುಬೇಟರ್ ಕೇಂದ್ರದಲ್ಲಿದ್ದಾಗ ತೀವ್ರ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಸ್ನಾತಕೋತ್ತರ ಪದವೀಧರ ಮನೋಜ್ ಕುಮಾರ್ ಗೋಡೆಗೆ ಅಪ್ಪಳಿಸಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಅತುಲ್ಯ, ಕಾರ್ತಿಕ್ ಮತ್ತು ನರೇಶ್ ಕುಮಾರ್ ಅವರು ಗಾಯಗೊಂಡಿದ್ದು, ಅವರನ್ನು ಸಮೀಪದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆ.
ವಿಜ್ಞಾನ ಮಂದಿರದಲ್ಲಿ ಅನಿಲ ಸ್ಫೋಟ ಇಲ್ಲವೆ ಬೆಂಕಿ ಹೊತ್ತಿಕೊಂಡ ಯಾವುದೇ ಸುಳಿವು ದೊರೆತಿರಲಿಲ್ಲ. ಆದರೆ ಈ ಸ್ಫೋಟದಿಂದಾಗಿ ವ್ಯಕ್ತಿಯೊಬ್ಬರ ಜೀವ ಹಾನಿಯಾಗಿದೆ.ನವೋದ್ಯಮವನ್ನು ಏರೋಸ್ಪೇಸ್ ಇಂಜಿನಿಯರ್ ಗಳಾದ ಕೆ.ಪಿ.ಜೆ. ರೆಡ್ಡಿ ಮತ್ತು ಜಿ. ಜಗದೀಶ್ ಅವರು ಆರಂಭಿಸಿದ್ದರು. ಇವರು ಆಘಾತ ತರಂಗ ವಲಯದಲ್ಲಿ ಪರಿಣಿತಿ ಪಡೆದಿದ್ದಾರೆ.ಈ ಘಟನೆ ಬಗ್ಗೆ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ