ತುಮಕೂರು
ದಲಿತರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಾಗಿದೆ, ಅನ್ಯಾಯವಾದ ಸಂದರ್ಭದಲ್ಲಿ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ ಭರವಸೆ ನೀಡಿದರು.ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ದಲಿತರ ರಕ್ಷಣೆ ವಿಚಾರವಾಗಿ ಪೊಲೀಸರು ತಕ್ಷಣ ಸ್ಪಂದಿಸಿ ಕಾನೂನು ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯ, ತೊಂದರೆ ಆದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಪೊಲೀಸರು ನಿಮ್ಮ ನೆರವಿಗೆ ಬರುತ್ತಾರೆ ಎಂದು ಹೇಳಿದರು.ಯಾವುದೇ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ಪಂಚಾಯ್ತಿಗೆ ಮಧ್ಯವರ್ತಿಗಳಾಗಿ ಬರುವ ದಲಿತ ಮುಖಂಡರನ್ನು ಪೊಲೀಸರು ರೌಡಿ ಲೀಸ್ಟಿಗೆ ಸೇರಿಸುತ್ತಾರೆ, ಇದನ್ನು ತಡೆಯಬೇಕು ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಸೂಚನೆ ನೀಡಬೇಕು ಎಂದು ಹಲವು ದಲಿತ ಮುಖಂಡರು ಎಸ್ಪಿಯವರಿಗೆ ಒತ್ತಾಯ ಮಾಡಿದರು.
ದಲಿತರಿಗೆ ಆಗುವ ಅನ್ಯಾಯದ ವಿರುದ್ದ ದೂರು ಸಲ್ಲಿಸಲು ಹೋದರೆ ಕೆಲ ಠಾಣೆಗಳಲ್ಲಿ ತಕ್ಷಣಕ್ಕೆ ಕೇಸು ದಾಖಲಿಸದೆ ಸತಾಯಿಸುತ್ತಾರೆ ಎಂದೂ ಹಲವರು ದೂರಿದರು. ಜಿಲ್ಲೆಯ ವಿವಿಧೆಡೆಗಳಿಂದ ದಲಿತ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮು ಕುಂದು ಕೊರತೆ ತಿಳಿಸಿದರು.ಅಡಿಷನಲ್ ಎಸ್ಪಿ ಡಾ. ಶೋಭಾರಾಣಿ ಸೇರಿದಂತೆ ಡಿವೈಎಸ್ಪಿಗಳು, ಸರ್ಕಲ್ ಇನ್ಸ್ಪೆಕ್ಟರ್ಗಳು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
