ಮಧುಗಿರಿ
ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ 19 ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಸಂಪೂರ್ಣವಾಗಿ ರದ್ಧು ಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಡಾ.ಕೆ.ನಂದಿನಿ ದೇವಿ ತಿಳಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ರಾಜ್ಯ ಸರಕಾರವು ಈಗಾಗಲೆ ಒಂದು ವಾರದವರೆವಿಗೂ ಎಲ್ಲಾ ರೀತಿಯ ಸಭೆ, ಸಮಾರಂಭ, ಜಾತ್ರೆ, ವಿವಾಹ ಮತ್ತಿತರ ಜನ ಸೇರುವ ಸಮಾರಂಭಗಳನ್ನು ರದ್ಧುಪಡಿಸುವಂತೆ ಆದೇಶಿಸಿದೆ. ಈ ಆದೇಶದ ಅನ್ವಯ 10 ದಿನಗಳ ಕಾಲ ನಡೆಯಬೇಕಾಗಿದ್ದ ಜಾತ್ರಾ ಮಹೋತ್ಸವವನ್ನು ಹಾಗೂ ತಾಲ್ಲೂಕಿನಲ್ಲಿ ನಡೆಯುವ ಸಂತೆಗಳನ್ನು ಸಹ ರದ್ಧುಪಡಿಸಲಾಗಿದೆ.
ದಂಡಿನ ಮಾರಮ್ಮನ ಜಾತ್ರೆಯಲ್ಲಿ ಸಾವಿರಾರು ಜನ ಸೇರಿ ವಿಶೇಷವಾಗಿ ಆಚರಿಸುವ ಬೆಳ್ಳಿ ಪಲ್ಲಕಿ ಮತ್ತು ಅಗ್ನಿಕುಂಡ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹ ರದ್ಧುಪಡಿಸಲಾಗಿದೆ. ದೇವಸ್ಥಾನದಲ್ಲಿ ಎಂದಿನಂತೆ ಸರಳವಾಗಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ತಾಲ್ಲೂಕಿನ ಜನರು ಮಾರಕ ರೋಗವಾದ ಕೊರೋನಾ ಬಗ್ಗೆ ಆತಂಕ ಪಡುವುದು ಬೇಡ. ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮುಂಜಾಗರೂಕತೆಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ತುರ್ತು ಸಭೆಯಲ್ಲಿ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಟಿಹೆಚ್ಓ ರಮೇಶ್ ಬಾಬು, ಎಎಸ್ಐ ಸಾಕ್ಷಪ್ಪ, ಪ್ರಧಾನ ಅರ್ಚಕ ಎಂ.ಆರ್ ನಾಗಲಿಂಗಚಾರ್, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ಎಂ.ಎಸ್ ಚಂದ್ರಶೇಖರ್, ಅಲೀಂ, ಕೆ.ನಾರಾಯಣ್, ಎಂ.ಎಲ್.ಗಂಗರಾಜು, ಮುಖಂಡ ಹೆಚ್.ಲೋಕೇಶ್, ಎಂ.ಜಿ.ಶ್ರೀನಿವಾಸಮೂರ್ತಿ, ಎಂ.ಎಸ್. ಶಂಕರನಾರಾಯಣ್, ಎಸ್.ಬಿ.ಟಿ ರಾಮು, ಆನಂದಕೃಷ್ಣ, ಶಿವಣ್ಣ, ಎಂ.ವಿ.ಮಂಜುನಾಥ್, ಎಂ.ಶ್ರೀಧರ್, ಆರ್ಎಲ್ಎಸ್ ರಮೇಶ್, ಹರಿನಾಥ್ ಗೌಡ, ಚಿಕ್ಕಣ್ಣ, ರಾಮೇಗೌಡ, ವಿ.ವೆಂಕಟೇಶಪ್ಪ ಎಂ.ಬಿ.ರಾಜು, ಕಿಶೋರ್, ರಾಘವೇಂದ್ರ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
