ತುಮಕೂರು
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕ ಎಂದು ಹೇಳಿಕೊಂಡಿದ್ದ ದರ್ಶನ್ ಎಂಬ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ನೃಪತುಂಗ ಎಂಬುವವರ ಸಂಭಾಷಣೆಯ ಆಡಿಯೋ ವೈರಲ್ನಿಂದ ಹಿರಿಯ ಮುಖಂಡರಿಗೆ ಇರುಸು ಮುರುಸು ಉಂಟಾಗಿದೆ. ಈ ನಿಟ್ಟಿನಲ್ಲಿ ದರ್ಶನ್ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೂತ್ ಕಾಂಗ್ರೆಸ್ ರಾಜ್ಯ ಘಟಕದಿಂದ ಆಯ್ಕೆಯಾಗಿದ್ದ ದರ್ಶನ್ ತುಮಕೂರಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸಾಮಾಜಿಕ ಜಾಲತಾಣದ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದ.
ಈತನು ಇತ್ತೀಚೆಗೆ ನೃಪತುಂಗ ಎಂಬುವವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಜಿಲ್ಲೆಯ ಪ್ರಭಾವಿ ನಾಯಕರಾದ ಕೆ.ಎನ್.ರಾಜಣ್ಣ ಮತ್ತು ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೆಗೌಡರು ತಲಾ ಮೂರೂವರೆ ಕೋಟಿ ರೂಗಳನ್ನು ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಇದರಿಂದ ನಮ್ಮ ಹಿರಿಯ ನಾಯಕರಲ್ಲಿ ಇರುಸು ಮುರುಸು ಉಂಟಾಗಿದೆ ಎಂದರು.
ದರ್ಶನ್ ಮಾತನಾಡಿದ್ದುದರ ಆಡಿಯೋ ಸಂಭಾಷಣೆಯನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಅಂದರೆ ಇದನ್ನು ಕೆಲವರು ದುರುದ್ದೇಶ ಇಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಮಾಡಿಸಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಯುಲ್ಲದೆ ರಾಜಕಾರಣ ಮಾಡಿದ ಇಬ್ಬರು ಪ್ರಭಾವಿ ನಾಐಕರ ವಿರುದ್ಧ ಮಾತನಾಡಿರುವುದು ಖಂಡನೀಯ.
ಆತನು ಹೇಳಿದಂತೆ ಹಣ ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಾಗಲಿ, ಪುರಾವೆಗಳಾಗಲಿ ಇರುವುದಿಲ್ಲ. ದರ್ಶನ್ ಹಾಗೂ ನೃಪತುಂಗನ ವಿರುದ್ಧ ದೂರು ನೀಡಲಿದ್ದು, ಪೊಲೀಸ್ ಇಲಾಖೆಯವರು ಇಬ್ಬರನ್ನು ಕರೆಯಿಸಿ ತನಿಖೆ ಮಾಡಿ ಸತ್ಯಾಸತ್ಯತೆಗಳನ್ನು ತಿಳಿಸಬೇಕಿದೆ ಎಂದರು.
ಆಡಿಯೋದಲ್ಲಿ ಮಾತನಾಡಿರುವಂತೆ 172 ವರ್ಗಾವಣೆ ಸಕಾರದ ಕಾನೂನು ಅಡಿಯಲ್ಲಿ ಆಗಿರುವಂತದ್ದು, ಇದು ಕೂಡ ಉದ್ದೇಶಪೂರ್ವಕವಾಗಿ ಸೃಷ್ಠಿಸಲಾಗಿದೆ. ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ತೇಜೋವಧೆ ಮಾಡಿರುವ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಒಬ್ಬರಿಗೊಬ್ಬರು ಪ್ರಚೋದಿಸುವಂತೆ ಮಾತನಾಡಿ, ಮಾಧ್ಯಮಗಳಿಗೆ ವೈರಲ್ ಮಾಡಿರುವುದು ಕಂಡು ಬರುತ್ತಿದೆ.
ಈ ಮೂಲಕ ರಾಜಕೀಯ ಷಡ್ಯಂತ್ರ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದರ ಹಿಂದೆ ಕಾಣದ ಕೈಗಳ ಕುತಂತ್ರವು ಕಂಡು ಬರುತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಷಫೀ ಅಹಮ್ಮದ್, ನಿರಂಜನ್, ಶಿವಮೂರ್ತಿ, ರಾಜು, ನರಸಿಂಹಯ್ಯ, ತು.ಬಿ.ಮಲ್ಲೇಶ್, ವಿಜಯ್ಕುಮಾರ್, ಗೀತಾರುದ್ರೇಶ್, ಅಫ್ತಾಬ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿ ನಂತರ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಸೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿಯವರಿಗೆ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
