ಹುಳಿಯಾರು
ತುಮಕೂರು ಜಿಲ್ಲಾ ಗಡಿಯಲ್ಲಿರುವ ರೈತಾಪಿ ವರ್ಗದವರೆ ಹೆಚ್ಚು ವಾಸವಿರುವ ಗ್ರಾಮ ದಸೂಡಿ. ಈ ಗ್ರಾಮದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದೆ. ಈ ಹಾಸ್ಟೆಲ್ಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ವಾರ್ಡನ್ಗೆ ಹ್ಯಾಟ್ಸಾಫ್ ಹೇಳದೆ ಹಿಂದಿರುಗಲಾರಿರಿ!
ಹೌದು, ಸರ್ಕಾರಿ ಹಾಸ್ಟಲ್ಗಳೆಂದರೆ ಅಸ್ವಚ್ಛತೆಯಿಂದ ಕೂಡಿರುತ್ತದೆ ಎನ್ನುವ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ ದಸೂಡಿ ಹಾಸ್ಟಲ್ಗೆ ಭೇಟಿ ನೀಡಿದರೆ ಅಚ್ಚರಿಯಿಂದ ನಿಮಗರಿವಿಲ್ಲದೆ ನಿಮ್ಮ ಹುಬ್ಬೇರುತ್ತದೆ. ನಾಲಿಗೆಯಿಂದ ಪ್ರಶಂಸೆಯ ಮಾತುಗಳು ತೇಲಿ ಬರುತ್ತವೆ. ಯಾರಪ್ಪ ಇಲ್ಲಿನ ವಾರ್ಡನ್ ಎಂದು ಕೇಳಿ ಅವರ ಬಳಿ ತೆರಳಿ ಕೈ ಕುಲುತ್ತೀರಿ. ಅಷ್ಟರ ಮಟ್ಟಿಗೆ ಹಾಸ್ಟಲ್ ಆವರಣ ನಿಮ್ಮನ್ನು ಮಂತ್ರಮುಗ್ಧರಾಗಿಸುತ್ತದೆ.
ಇಲ್ಲಿನ ವಾರ್ಡನ್ ಸಿ.ರಮೇಶ್ ಅವರ ಪರಿಸರ ಕಾಳಜಿಯ ಫಲವಾಗಿ ಉದ್ಯಾನವನವಾಗಿ ಹಾಸ್ಟೆಲ್ ಮಾರ್ಪಟ್ಟಿದೆ. ಸುಮಾರು ಐವತ್ತರಿಂದ ಅರವತ್ತುಕ್ಕೂ ಹೆಚ್ಚು ಬಗೆಯ ಗಿಡ, ಮರ, ಬಳ್ಳಿಗಳು ಇಲ್ಲಿದ್ದು ನೋಡುಗರನ್ನು ಆಕರ್ಷಿಸುತ್ತವೆ. ತೆಂಗು, ಮಾವು, ಹಲಸು, ನಿಂಬೆ, ಸೀಬೆ, ಬಾಳೆ, ದಾಳಿಂಬೆ, ಸೀತಾಫಲದಂತಹ ಹಣ್ಣಿನ ಮರಗಳು, ಗುಲಾಬಿ, ದಾಸವಾಳ, ಜಾಜಿ, ಕನಕಾಂಬರ, ಮಲ್ಲಿಗೆ ಸೇರಿದಂತೆ ನಾನಾ ಬಗೆಯ ಹೂವಿನ ಗಿಡಗಳು, ನೂರಾರು ಅಲಂಕಾರಿಕ ಗಿಡಗಳು ಉದ್ಯಾನದಲ್ಲಿ ಕಂಗೊಳಿಸುತ್ತಿವೆ.
ಅಷ್ಟೆ ಅಲ್ಲದೆ ಬದನೆ, ಟೊಮ್ಯಟೊ, ಈರುಳ್ಳಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಪಾಲಕ್, ದಂಟು, ಕೊತ್ತಂಬರಿ, ಸಬ್ಬಾಕ್ಸಿ ಮುಂತಾದ ತರಕಾರಿ ಸೊಪ್ಪನ್ನು ಇಲ್ಲಿಯೆ ಬೆಳೆದು ಹಾಸ್ಟೆಲ್ನ ತಿಂಡಿ ಊಟಕ್ಕೆ ಬಳಸಲಾಗುತ್ತದೆ. ಉಳಿದ ತರಕಾರಿ ಸೊಪ್ಪನ್ನು ಸಮೀಪದ ಶಾಲೆಗಳ ಬಿಸಿಯೂಟಕ್ಕೆ ಕೊಡಲಾಗುತ್ತದೆ. ಜೊತೆಗೆ ಅಮೃತ ಬಳ್ಳಿ, ದೊಡ್ಡಪತ್ರೆ, ಪಡಿವಾಲ್ ಸೊಪ್ಪು, ಹಿರೇಮದ್ದಿನ ಗಿಡ ಹೀಗೆ ಹತ್ತುಹಲವು ಆಯುರ್ವೇದ ಗಿಡಗಳನ್ನು ಬೆಳೆದು ಅವುಗಳ ಬಳಕೆ ಸಹ ಮಾಡಲಾಗುತ್ತದೆ.
ಉತ್ತಮ ಪರಿಸರದ ನಡುವೆ ಪಾಠ ಪ್ರವಚನಗಳು ನಡೆದರೆ ಮಕ್ಕಳ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ. ಉತ್ತಮ ಪರಿಸರದಲ್ಲಿ ಪ್ರತಿನಿತ್ಯ ಕಳೆದರೆ ಮನಸ್ಸು ಪ್ರಪುಲ್ಲತೆಯಿಂದ ಕೂಡಿರುತ್ತದೆ. ಉತ್ತಮ ಪರಿಸರದೊಂದಿಗೆ ಬೆರೆತರೆ ಧನಾತ್ಮಕ ಶಕ್ತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಈ ಹಾಸ್ಟೆಲ್ನಲ್ಲಿದ್ದು ಓದುವ ವಿದ್ಯಾರ್ಥಿಗಳೆ ಭಾಗ್ಯವಂತರು ಎಂದರೆ ತಪ್ಪಾಗಲಾರದು.
ಅತ್ಯುತ್ತಮ ವಿದ್ಯಾರ್ಥಿ ನಿಲಯ ಪ್ರಶಸ್ತಿ
8 ವರ್ಷಗಳ ಹಿಂದೆ ಹಾಸ್ಟೆಲ್ ಆವರಣ ಸೀಮೆಜಾಲಿಯಿಂದ ಕೂಡಿತ್ತು. ಕೊಠಡಿಗಳ ಕಿಟಕಿಗಳಿಗೆ ಗಾಜಿರಲಿಲ್ಲ. ಇನ್ನು ರಜೆಯ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ಇಲ್ಲಿಗೆ ವಾರ್ಡನ್ ಆಗಿ ಸಿ.ರಮೇಶ್ ಬಂದಿದ್ದೆ ಬಂದಿದ್ದು ಇಡೀ ಚಿತ್ರಣ ಬದಲಾಯಿತು. ಒಂದಿಷ್ಟೂ ಕಸ, ಕಳೆ ಇಲ್ಲದೆ ಆವರಣ ಸ್ವಚ್ಛವಾಯಿತು. ಕಣ್ಮನ ಸೆಳೆಯುವ ಹಸಿರು ಲಾನ್, ಹೂ ತುಂಬಿದ ಬಳ್ಳಿಗಳು ಹೀಗೆ ಆಕರ್ಷಕ ಕೇಂದ್ರವಾಯಿತು. ಪರಿಣಾಮ 2018-19 ನೆ ಸಾಲಿನ ಜಿಲ್ಲಾ ಉತ್ತಮ ಹಾಸ್ಟೆಲ್ ಪ್ರಶಸ್ತಿಗೆ ಭಾಜನವಾಯಿತು.
ಸಿಬ್ಬಂದಿ ಮತ್ತು ಮಕ್ಕಳ ಶ್ರಮವೂ ಇದೆ
ದಸೂಡಿಯ ಹಾಸ್ಟೆಲ್ ಉದ್ಯಾನವನವಾಗಿ ಮಾರ್ಪಡಲು ವಾರ್ಡನ್ ಜೊತೆ ಇಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಾದ ಸಿ.ಯಶೋಧರ, ಕಾಮರಾಜು, ಗಿರಿಜಮ್ಮ, ಶಿವರಾಜು ಅವರ ಶ್ರಮವೂ ಇದೆ. ಇಲ್ಲಿರುವ ವಿದ್ಯಾರ್ಥಿಗಳು ನಿತ್ಯ ಒಂದು ಗಂಟೆ ನೀರುಣಿಸಿ ಪೋಷಿಸುವ ಕೃಷಿ ಕಾಯಕ ಮಾಡುವ ಅಲಿಖಿತ ನಿಯಮವಿದೆ. ಮಕ್ಕಳು ಶಾಲೆಗೆ ತೆರೆಳಿದ ನಂತರ ಸಿಬ್ಬಂದಿ ಗಿಡಗಳಿಗೆ ಸಾವಯವ ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಅನಗತ್ಯ ರೆಂಬೆಕೊಂಬೆಗಳನ್ನು ಕತ್ತರಿಸುವುದು ಜೊತೆಗೆ ಕಸ, ಕಡ್ಡಿ ಇಲ್ಲದಂತೆ ಸ್ವಚ್ಛಗೊಳಿಸುವುದನ್ನು ಮಾಡುತ್ತಾರೆ.
ಕೊಳವೆ ಬಾವಿ ಕೈಕೊಟ್ಟಾಗ ಟ್ಯಾಂಕರ್ ನೀರು
ದಸೂಡಿಯ ಈ ಹಾಸ್ಟೆಲ್ನಲ್ಲಿ ಮೊದಲು ಒಂದು ಕೊಳವೆ ಬಾವಿಯಿತ್ತು. ಈ ನೀರಿನಿಂದಲೆ ಗಿಡಮರಬಳ್ಳಿಗಳನ್ನು ಬೆಳೆಸಲು ವಾರ್ಡನ್ ಮುಂದಾದರು. ಐದಾರು ವರ್ಷ ಕಳೆದ ನಂತರ ಬೇಸಿಗೆಯ ಸಂದರ್ಭದಲ್ಲಿ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಯಿತು. ಆದರೂ ಟ್ಯಾಂಕರ್ ಮೂಲಕ ನೀರು ಹರಿಸಿ ಸಸಿಗಳನ್ನು ಉಳಿಸಿಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿದಾಗ ಇಲ್ಲಿನ ವಾರ್ಡನ್ನ ಪರಿಸರ ಕಾಳಜಿ ಮೆಚ್ಚಿ ನೀರಿನ ಸಮಸ್ಯೆ ಮನಗಂಡು ಮತ್ತೊಂದು ಕೊಳವೆ ಬಾವಿ ಕೊರಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
